ಥಿಯೇಟರ್ ಮಾಲೀಕರಿಗೆ 12AM ಎಕ್ಕಾಮಕ್ಕ ಬೆಂಡು
ವಿಷಯ ಈಗ ಏನಪ್ಪಾ ಎಂದರೆ ಚಿತ್ರ ಯಶಸ್ವಿಯಾಗಿ 3ನೇ ವಾರ ಪೂರೈಸಿರುವುದು. ಈ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರೇಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದೆ. ಹಾಗೆಯೇ ಪತ್ರಿಕೆಗಳಲ್ಲಿ ತಮಗಾದ ಕಹಿ ಅನುಭವವನ್ನು ಜಾಹೀರಾತು ರೂಪದಲ್ಲಿ ನೀಡಿರುವುದು.
"ನಮ್ಮ ಚಿತ್ರ ಬಿಡುಗಡೆ ಮಾಡುವಾಗ ನಮಗೆ ಅಡ್ಡಿ ಮಾಡಿದವರಿಗೆ, ನಿಮ್ಮ ಚಿತ್ರ ಎರಡು ದಿನಗಳ ಮೇಲೆ ಓಡುತ್ತದೇನ್ರಿ ಎಂದು ಹೀಯಾಳಿಸಿ ಚಿತ್ರಮಂದಿರವನ್ನೇ ಕೊಡದಿರುವ ಕನ್ನಡ ಚಿತ್ರಮಂದಿರ ಮಾಲೀಕರಿಗೆ...
'ಜುಲಾಯಿ' ತೆಲುಗು ಚಿತ್ರದವರು ಜಾಸ್ತಿ ಬಾಡಿಗೆ ಕೊಡುತ್ತಾರೆ, ನೀವೂ ಕೊಡ್ರೀ ಎಂದು ಜೊಲ್ಲು ಸುರಿಸಿ ವಿಭಿನ್ನ ಚಿತ್ರವನ್ನು ತುಳಿದ, ಕನ್ನಡಿಗರೇ ಆಗಿರುವ ಚಿತ್ರಮಂದಿರ ಮಾಲೀಕರಿಗೆ ಕಾಶಿನಾಥ್ ಜಾಡಿಸಿದ್ದಾರೆ.
'ಏಕ್ ಥಾ ಟೈಗರ್' ಚಿತ್ರಕ್ಕೇ ಚಿತ್ರಮಂದಿರಗಳಿಲ್ಲ, ನಿಮಗೆಲ್ರಿ ಕೊಡುವುದು ಎಂದು ಜನರು ಬರದೇ ಇರುವ ಬೆಳಗ್ಗಿನ ಆಟ ಕೊಟ್ಟು, "ನೋಡಿ ನಿಮ್ಮ ಚಿತ್ರಕ್ಕೆ ಜನರು ಬರುವುದೇ ಇಲ್ಲ" ಎಂದು ನಾಟಕ ಆಡುವ ಕನ್ನಡದ ಉಪ್ಪನ್ನು ತಿಂದು ಬದುಕುತ್ತಿರುವ ಮಲ್ಟಿಪ್ಲೆಕ್ಸ್ ಗಳಿಗೆಲ್ಲಾ ಗರ್ವಭಂಗ ಮಾಡಿದ್ದೀರಿ.
ಮಲ್ಟಿಪ್ಲೆಕ್ಸ್ ಗಳಿಗಿಂತ ಕಪಾಲಿ ಚಿತ್ರಮಂದಿರದಲ್ಲೇ ಪ್ರೊಜೆಕ್ಷನ್ ಹಾಗೂ ಸೌಂಡ್ ಎಫೆಕ್ಟ್ ಚೆನ್ನಾಗಿದೆಯೆಂದು ನಮ್ಮನ್ನು ಪ್ರೋತ್ಸಾಹಿಸಿದ ಕಪಾಲಿ ಚಿತ್ರಮಂದಿರದಲ್ಲಿ 2-3 ಬಾರಿ ನೋಡಿ ಶಹಬಾಸ್ ಗಿರಿ ನೀಡಿದ್ದೀರಿ. ನಮ್ಮ ಹೊಸ ಪ್ರಯತ್ನಕ್ಕೆ ನೀವು ಅಭೂತಪೂರ್ವ ಪ್ರೋತ್ಸಾಹ ನೀಡಿ ಇನ್ನೂ ಹಲವರು ವಿಭಿನ್ನ ಕನ್ನಡ ಚಿತ್ರವನ್ನು ಮಾಡುವ ಹಾಗೆ ನಮಗೆ ಸ್ಪೂರ್ತಿ ಹಾಗೂ ಶಕ್ತಿ ನೀಡಿದ್ದೀರಿ."
ಎಂದು ಎಕ್ಕಾಮಕ್ಕಾ ಚಿತ್ರಮಂದಿರ ಮಾಲೀಕರಿಗೆ ಬೆಂಡಿತ್ತಿದ್ದಾರೆ ಕಾಶಿನಾಥ್. ವಿ ಮನೋಹರ್ ಅವರ ಸಂಗೀತ ಇರುವ ಈ ಚಿತ್ರದ ಒಟ್ಟು 50 ದಿನಗಳ ಚಿತ್ರೀಕರಣದಲ್ಲಿ 35 ದಿನಗಳನ್ನು ರಾತ್ರಿಯಲ್ಲೇ ಚಿತ್ರೀಕರಿಸಿರುವುದು ವಿಶೇಷ.
ಕಾಶಿನಾಥ್ ಅವರ ಪುತ್ರ ಅಲೋಕ್ ಈ ಚಿತ್ರದ ಮೂಲಕ ಅಭಿಮನ್ಯು ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಅವರ 'ಬಾಜಿ' ಚಿತ್ರ ಬಾಕ್ಸಾಫೀಸರಲ್ಲಿ ಮಕಾಡೆ ಮಲಗಿತ್ತು. ಈಗ ತಮ್ಮ ಹೆಸರನ್ನು ಬದಲಾಯಿಸಿಕೊಂಡ ಬಳಿಕ ಅವರ ಅದೃಷ್ಟವೂ ಕುಲಾಯಿಸಿದಂತಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












