ಕಠಾರಿವೀರ ಬಗ್ಗೆ ನನಗೆ ತೀರಾ ಹೋಪ್; ಅಂಬರೀಷ್
ಇಂದು (ಮೇ 10, 2012) ಬಿಡುಗಡೆಯಾಗಿರುವ ಕಠಾರಿವೀರ ಸುರಸುಂದರಾಂಗಿ ಚಿತ್ರದ ಬಗ್ಗೆ ಹಿರಿಯ ನಟ, ರೆಬೆಲ್ ಸ್ಟಾರ್ ಅಂಬರೀಷ್ ತೀರಾ ನಿರೀಕ್ಷೆ ಇಟ್ಟಿದ್ದಾರಂತೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಅಂಬಿ, "ಆ ಚಿತ್ರದಲ್ಲಿ ಮಾಡಿರುವ ಯಮನ ಪಾತ್ರ ತುಂಬಾ ಖುಷಿ ಕೊಟ್ಟಿದೆ. 15 ಕೆಜಿ ಆಭರಣಗಳನ್ನು ಮೈಮೇಲೆ ಹಾಕಿಕೊಂಡು ಚಿತ್ರೀಕರಣದಲ್ಲಿ ಭಾಗವಹಿಸಿರುವುದು ಅಪೂರ್ವ ಅನುಭವ ನೀಡಿದೆ" ಎಂದಿದ್ದಾರೆ.
ಕನ್ನಡದ ಮೊಟ್ಟ ಮೊದಲ ಸಂಪೂರ್ಣ '3ಡಿ' ಚಿತ್ರದಲ್ಲಿ ನಟಿಸಿರುವುದು ಹಾಗೂ ಚಿತ್ರದಲ್ಲಿರುವ ಎಲ್ಲಾ ವರ್ಗಗಳಿಗೂ ಇಷ್ಟವಾಗಬಹುದಾದ, ತಮಾಷೆಯಿಂದ ಕೂಡಿದ ಸಂಭಾಷಣೆ ತಮಗೆ ಇಲ್ಲಿಯವೆರೆಗೆ ಮಾಡಿದ ಎಲ್ಲಾ ಪಾತ್ರಗಳಿಗಿಂತ ವಿಭಿನ್ನ ಅನುಭವ ನೀಡಿದೆ ಎಂದಿದ್ದಾರೆ. ಯಮನ ಗೆಟಪ್ ನಲ್ಲಿ ಅವರಿದ್ದಾಗ ಎದುರುಗಡೆ ನಟಿಸುತ್ತಿದ್ದ ಪಾತ್ರಧಾರಿಗಳಿಗೆ ನಡುಕ ಬಂದಾಗ ತಮಗೂ ನಗು ಬಂದಿಬಿಡುತ್ತಿತ್ತು ಎಂದಿದ್ದಾರೆ.
ಇದೀಗ ಪ್ರದರ್ಶನ ಕಾಣುತ್ತಿರುವ ಕಠಾರಿವೀರನಿಗೆ ರಾಜ್ಯಾದ್ಯಂತ ಅತ್ಯುತ್ತಮ ಅಭೂತಪೂರ್ವ ಸ್ವಾಗತ ದೊರೆತಿದೆ. ಉಪೇಂದ್ರರ ಮುಖ್ಯ ಪಾತ್ರ, ರಮ್ಯಾರ ದೇವಕನ್ಯೆಯ ಪಾತ್ರ ಮಾತ್ರವಲ್ಲದೇ ಅಂಬರೀಷ್ ಅಭಿನಯಿಸಿರುವ 'ಯಮ'ನ ಪಾತ್ರ ಪ್ರೇಕ್ಷಕರಿಂದ ತೀವ್ರ ಪ್ರಶಂಸೆಗೆ ಪಾತ್ರವಾಗಿದೆ ಎಂಬುದು ಇದೀಗ ಬಂದ ವರದಿಯಿಂದ ತಿಳಿದುಬಂದಿದೆ. ಅಂಬಿ ಈ ಚಿತ್ರದ ಯಶಸ್ಸಿನ ಬಗ್ಗೆ ಇಟ್ಟಿರುವ ಅತೀವ ನಿರೀಕ್ಷೆ ನಿಜವಾಗುವ ಲಕ್ಷಣಗಳು ಗೋಚರಿಸತಡಗಿವೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











