ಕಠಾರಿವೀರ ಚಿತ್ರ ಬಿಡುಗಡೆಗೆ ಕೋರ್ಟ್ ಗ್ರೀನ್ ಸಿಗ್ನಲ್
ಸೂಪರ್ ಸ್ಟಾರ್ ಉಪೇಂದ್ರ ಹಾಗೂ ರಮ್ಯಾ ಜೋಡಿಯ 'ಕಠಾರಿವೀರ ಸುರಸುಂದರಾಂಗಿ' ಚಿತ್ರ ಬಿಡುಗಡೆಗೆ ಎದುರಾಗಿದ್ದ ವಿಘ್ನ ನಿವಾರಣೆಯಾಗಿದೆ. ನಿರಂಜನ ಶೆಟ್ಟಿ ಎಂಬ ನಟ ಹಾಗೂ ಲೇಖಕ ಕಠಾರಿವೀರದ ಕಥೆ ತನ್ನದೆಂದು ಆಪಾದಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ನಟ ಉಪೇಂದ್ರ, ರಾಕ್ ಲೈನ್ ಪ್ರೊಡಕ್ಷನ್ಸ್ ಹಾಗೂ ಮುನಿರತ್ನ ಅವರಿಗೆ ಕೋರ್ಟ್ ನೋಟಿಸ್ ನೀಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯ.
ಇದೀಗ, 47ನೇ ಸಿಸಿಎಚ್ ಕೋರ್ಟ್ ಕಠಾರಿವೀರ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಮೇ 10, 2012 ರಂದು ಬಿಡುಗಡೆ ಘೋಷಿಸಿರುವ ಈ ಚಿತ್ರದ ಬಿಡುಗಡೆಯ ದಾರಿ ಕೋರ್ಟ್ ಈ ಆದೇಶದಿಂದ ಸುಗಮವಾದಂತಾಗಿದೆ. ಆದರೆ ಈ ಚಿತ್ರವನ್ನು ಬೇರೆ ಭಾಷೆಗೆ ಡಬ್ ಮಾಡದಂತೆ ನಿರ್ಮಾಪಕ ಮುನಿರತ್ನರಿಗೆ ಕೋರ್ಟ್ ಆದೇಶಿಸಿದೆ. ಮುಂದಿನ ವಿಚಾರಣೆಯನ್ನು ಮೇ 25, 2012ಕ್ಕೆ ಮುಂದೂಡಲಾಗಿದೆ.
ಒಟ್ಟಿನಲ್ಲಿ, ಬಿಡುಗಡೆಗೆ ಸಿದ್ಧವಾದಾಗಿನಿಂದಲೂ ಒಂದಲ್ಲ ಒಂದು ವಿವಾದ ಅಥವಾ ಕಂಟಕ ಎದುರಿಸುತ್ತಿರುವ ಕಠಾರಿವೀರ ಚಿತ್ರತಂಡ, ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಪ್ರಚಾರ ಕಾರ್ಯದಲ್ಲಿ ಬಹಳಷ್ಟು ಬಿಜಿಯಾಗಿದ್ದ ಚಿತ್ರತಂಡಕ್ಕೆ ಈ ಹಠಾತ್ ಆಗಿದ್ದ ಬೆಳವಣಿಗೆಯಿಂದ ಸಹಜವಾಗಿ ಆತಂಕವಾಗಿತ್ತು. ಇದೀಗ ಬಂದ ಕೋರ್ಟ್ ಆದೇಶದಿಂದ ಕಠಾರಿವೀರ ಬಿಡುಗಡೆ ಅಂದುಕೊಂಡತೆ ಮೇ 10ಕ್ಕೇ ಆಗಲಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











