ಮೃತ ವಿವೇಕ್ ಕುಟುಂಬಕ್ಕೆ ಸಹಾಯಹಸ್ತ ಚಾಚಿದ 'ಕೆಜಿಎಫ್' ಸಾಹಸ ನಿರ್ದೇಶಕ
'ಲವ್ ಯೂ ರಚ್ಚು' ಸಿನಿಮಾದ ದುರಂತದಲ್ಲಿ ಮೃತಪಟ್ಟ ವಿವೇಕ್ ಕುಟುಂಬಕ್ಕೆ ಕೆಜಿಎಫ್ ಚಾಪ್ಟರ್ 1 ಸಾಹಸ ನಿರ್ದೇಶಕ ವಿಕ್ರಮ್ ಮೋರ್ ಸಹಾಯ ಹಸ್ತ ಚಾಚಿದ್ದಾರೆ. ಗುರುವಾರ ವಿವೇಕ್ ಮನೆಗೆ ಭೇಟಿ ನೀಡಿದ ವಿಕ್ರಮ್ ಮಾಸ್ಟರ್ ಒಂದು ಲಕ್ಷ ರೂಪಾಯಿ ಚೆಕ್ ನೀಡಿ ಸಾಂತ್ವನ ಹೇಳಿದ್ದಾರೆ.
Recommended Video
ಬಳಿಕ ಮಾತನಾಡಿದ ವಿಕ್ರಮ್ ಮಾಸ್ಟರ್, ''ವಿವೇಕ್ ಸಾವು ವೈಯಕ್ತಿಕವಾಗಿ ನೋವು ತಂದಿದೆ. ಸದ್ಯಕ್ಕೆ ಈ ಘಟನೆ ಬಗ್ಗೆ ಹೆಚ್ಚು ಏನು ಹೇಳಲು ಸಾಧ್ಯವಿಲ್ಲ. ವಿನೋದ್ ಮಾಸ್ಟರ್ ಹೊಸಬರಲ್ಲ, ಕೆಡಿ ವೆಂಕಟೇಶ್, ಥ್ರಿಲ್ಲರ್ ಮಂಜು, ರವಿವರ್ಮ ಅಂತಹ ಹಿರಿಯರ ಬಳಿ ಕೆಲಸ ಮಾಡಿದವರು. ಸಣ್ಣ ಆಕ್ಷನ್ ದೃಶ್ಯ ಮಾಡಬೇಕಾದರೂ ಸಹ ಸುರಕ್ಷತೆ ಬಗ್ಗೆ ಮುಂಜಾಗ್ರತೆ ವಹಿಸುವ ವ್ಯಕ್ತಿತ್ವ. ಮೊನ್ನೆ ನಡೆದ ಘಟನೆಯಲ್ಲಿ ಅದು ಪ್ಯಾಚ್ ವರ್ಕ್ ಕೆಲಸ ಆಗ್ತಿದ್ದರಿಂದ ಮಾಸ್ಟರ್ ಪೂರ್ತಿ ಗಮನ ಅಲ್ಲಿ ಕೊಟ್ಟಿರಲ್ಲ ಎಂದೆನಿಸುತ್ತಿದೆ'' ಎಂದು ಪ್ರತಿಕ್ರಿಯಿಸಿದರು.
''ವಿವೇಕ್ ನಾನು ನಿರ್ದೇಶನ ಮಾಡಿದ್ದ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿಯೂ ಫೈಟರ್ ಆಗಿ ಕೆಲಸ ಮಾಡಿದ್ದ. ನನ್ನ ತಂಡದಲ್ಲಿ ಕೆಲಸ ಮಾಡಿದ ಹುಡುಗನ ಕುಟುಂಬಕ್ಕೆ ಸ್ಪಂದಿಸಬೇಕಾಗಿರುವುದು ನನ್ನ ಕರ್ತವ್ಯ. ಇದು ಸಹಾಯ ಅನ್ನೋದಕ್ಕಿಂತ ವಿವೇಕ್ ಚಿತ್ರರಂಗದಲ್ಲಿ ಮಾಡಿದ ಕೆಲಸಕ್ಕೆ ಸಿಕ್ಕ ದುಡಿಮೆ ಎನ್ನಬಹುದು'' ಎಂದು ವಿಕ್ರಮ್ ಮೋರ್ ಹೇಳಿದರು.

ಅಜಯ್ ರಾವ್, ರಚಿತಾ ರಾಮ್ ನಟಿಸುತ್ತಿದ್ದ 'ಲವ್ ಯು ರಚ್ಚು' ಸಿನಿಮಾದ ಚಿತ್ರೀಕರಣ ಬಿಡದಿ ಸಮೀಪದ ಜೋಗಿಪಾಳ್ಯ ಗ್ರಾಮದಲ್ಲಿ ನಡೆಯುತ್ತಿತ್ತು. ಫೈಟ್ ದೃಶ್ಯದ ಚಿತ್ರೀಕರಣವನ್ನು ಖಾಸಗಿ ವ್ಯಕ್ತಿಯ ಜಮೀನಿನಲ್ಲಿ ಏರ್ಪಡಿಸಲಾಗಿತ್ತು. ಹೈಟೆನ್ಷನ್ ವೈರ್ ಕೆಳಗೆ ಚಿತ್ರೀಕರಣ ಮಾಡುತ್ತಿದ್ದ ಕಾರಣ ಕ್ರೇನ್ ಆಪರೇಟರ್ ಅಜಾಗರೂಕತೆಯಿಂದ ಕರೆಂಟ್ ವೈರ್ ತಗುಲಿ ವಿವೇಕ್ ಮೃತಪಟ್ಟರು. ಈ ಅವಘಡದಲ್ಲಿ ರಂಜಿತ್ ಎನ್ನುವ ಸಹಾಯಕ ಕಲಾವಿದ ಗಾಯಗೊಂಡರು.
ಕೂಡಲೇ ವಿವೇಕ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತಾದರು ಬದುಕಿ ಉಳಿಯಲಿಲ್ಲ. ಈ ಸಂಬಂಧ ಫೈಟ್ ಮಾಸ್ಟರ್ ವಿನೋದ್, ನಿರ್ದೇಶಕ ಶಂಕರ್ ಹಾಗೂ ಕ್ರೇನ್ ಆಪರೇಟರ್ನನ್ನು ಪೊಲೀಸರ ವಶಕ್ಕೆ ಪಡೆದುಕೊಂಡರು. ಬಂಧಿತ ಆರೋಪಿಗಳಿಗೆ ರಾಮನಗರ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಘಟನೆ ಬಳಿಕ ನಿರ್ಮಾಪಕ ಗುರುದೇಶಪಾಂಡೆ ತಲೆಮರೆಸಿಕೊಂಡಿದ್ದಾರೆ. ಮೃತ ವಿವೇಕ್ ಕುಟುಂಬಕ್ಕೆ ಗುರುದೇಶಪಾಂಡೆ ಅವರ ಜಿ ಸಿನಿಮಾಸ್ ವತಿಯಿಂದ 10 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಈ ಸಂಬಂಧ ಗುರುದೇಶಪಾಂಡೆ ಪತ್ನಿ ಪ್ರತೀಕಾ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ವಿವೇಕ್ ಸಾವಿಗೆ 'ಲವ್ ಯೂ ರಚ್ಚು' ಚಿತ್ರದ ನಾಯಕಿ ನಟಿ ರಚಿತಾ ರಾಮ್ ಸಂತಾಪ ಸೂಚಿಸಿದ್ದು, "ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ ಫೈಟರ್ ವಿವೇಕ್ ಅವರ ಆತ್ಮಕ್ಕೆ ಸಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ" ಎಂದು ಟ್ವೀಟ್ ಮಾಡಿದ್ದಾರೆ. ನಟ ಅಜಯ್ ರಾವ್ ಸಹ ಸ್ಪಂದಿಸಿದ್ದು, ವಿವೇಕ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ನಾನು ಚಿತ್ರೀಕರಣಕ್ಕೆ ಹೋಗಲ್ಲ ಎಂದು ಹೇಳಿದ್ದಾರೆ.
ಕೆಜಿಎಫ್ ಸಾಹಸ ನಿರ್ದೇಶಕ ವಿಕ್ರಮ್ ಮೋರ್ ಕುರಿತು ಹೇಳುವುದಾರೆ 2003ರಿಂದಲೂ ಸಾಹಸ ಕಲಾವಿದರಾಗಿದ್ದಾರೆ. ಸುಮಾರು 500ಕ್ಕೂ ಅಧಿಕ ಚಿತ್ರಗಳಲ್ಲಿ ಸಾಹಸ ಕಲಾವಿದನಾಗಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಹಾಯಕ ಸಾಹಸ ಕಲಾವಿದನಾಗಿ ಹಾಗೂ 50ಕ್ಕೂ ಸಿನಿಮಾಗಳಲ್ಲಿ ಸ್ವತಂತ್ರವಾಗಿ ಸ್ಟಂಟ್ ನಿರ್ದೇಶಕನಾಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಕೆಜಿಎಫ್ ಮತ್ತು ಅವನೇ ಶ್ರೀಮನ್ನಾರಾಯಣ ಚಿತ್ರಗಳ ಆಕ್ಷನ್ಗಾಗಿ ಎರಡು ರಾಷ್ಟ್ರ ಪ್ರಶಸ್ತಿ ಲಭಿಸಿದೆ.


Click it and Unblock the Notifications











