Don't Miss!
- Sports DC vs SRH: ಟ್ರಾವಿಸ್ ಹೆಡ್, ಅಭಿಷೇಕ್ ದಾಖಲೆಯ ಜೊತೆಯಾಟ: ಡೆಲ್ಲಿ ಗೆಲುವಿಗೆ ಬೃಹತ್ ಗುರಿ
- News ಕಲೆ ಮತ್ತು ಕಲೆಗಾರ! ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿಚ್ಚನ ಸಿನಿಮಾ ಜರ್ನಿಗೆ 27 ವರ್ಷ; 4 ಚಿತ್ರರಂಗಗಳಿಗೆ ಧನ್ಯವಾದ ತಿಳಿಸಿದ ಸುದೀಪ್
ಕನ್ನಡ ಚಲನಚಿತ್ರರಂಗದ ಸದ್ಯದ ಪಿಲ್ಲರ್ಗಳು ಎಂದು ಹೇಳಿದ ಕೂಡಲೇ ತಲೆಗೆ ಬರುವ ಕೆಲ ಕಲಾವಿದರ ಹೆಸರಿನಲ್ಲಿ ಕಿಚ್ಚ ಸುದೀಪ್ ಸಹ ಒಬ್ಬರು. ಭಿನ್ನ ವಿಭಿನ್ನ ಕಥಾಹಂದರವಿರುವ ಚಿತ್ರಗಳಲ್ಲಿ ನಟಿಸಿರುವ ಕಿಚ್ಚ ಸುದೀಪ್ ಕನ್ನಡ ಸಿನಿ ರಸಿಕರ ಮನಸಿನಲ್ಲಿ ನೆಲೆಯೂರಿದ್ದಾರೆ. ಕೇವಲ ನಟನೆ ಮಾತ್ರವಲ್ಲದೇ ನಿರ್ದೇಶಕ ಹಾಗೂ ನಿರ್ಮಾಪಕನಾಗಿಯೂ ಕನ್ನಡ ಚಲನಚಿತ್ರರಂಗದಲ್ಲಿ ಕೆಲಸ ನಿರ್ವಹಿಸಿ ಸೈ ಎನಿಸಿಕೊಂಡು, ಹಲವಾರು ಕೊಡುಗೆಗಳನ್ನು ನೀಡಿರುವ ಕಿಚ್ಚ ಸುದೀಪ್ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು 27 ವರ್ಷಗಳನ್ನು ಪೂರೈಸಿದ್ದಾರೆ.
ಹೌದು, ಇಂದು ( ಜನವರಿ 31 ) ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 27 ವರ್ಷಗಳು ತುಂಬಿವೆ. 1997ರಲ್ಲಿ ಬಿಡುಗಡೆಗೊಂಡಿದ್ದ ತಾಯವ್ವ ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿದ ಕಿಚ್ಚ ಸುದೀಪ್ ಈ ಚಿತ್ರದಲ್ಲಿ ರಾಮು ಎಂಬ ನಾಯಕನ ಪಾತ್ರವನ್ನು ನಿರ್ವಹಿಸಿದ್ದರು. ಸುಂದರಮ್ ಹಾಗೂ ಷಣ್ಮುಗಂ ಬರೆದಿದ್ದ ಕತೆಗೆ ವಿ ಉಮಾಕಾಂತ್ ಆಕ್ಷನ್ ಕಟ್ ಹೇಳಿದ್ದರು. ಚಿತ್ರದಲ್ಲಿ ಸಿಂಧು ನಾಯಕಿಯಾಗಿ ನಟಿಸಿದರೆ, ಹಿರಿಯ ಕಲಾವಿದರಾದ ಉಮಾಶ್ರೀ, ಚರಣ್ ರಾಜ್ ಹಾಗೂ ಅವಿನಾಶ್ ನಟಿಸಿದ್ದರು.
ಬಳಿಕ ಪ್ರತ್ಯರ್ಥ ಹಾಗೂ ಸ್ಪರ್ಶ ಚಿತ್ರಗಳಲ್ಲಿ ಸುದೀಪ್ ನಟಿಸಿ ನಟನೆಯ ಮೂಲಕ ಗಮನ ಸೆಳೆದರು. ಇನ್ನು ಸುದೀಪ್ ನಟಿಸಿದ ನಾಲ್ಕನೇ ಚಿತ್ರ ಹುಚ್ಚ ದೊಡ್ಡ ಬ್ರೇಕ್ ನೀಡಿ ಸುದೀಪ್ ಅವರ ಸಿನಿಮಾ ಜರ್ನಿಗೆ ಮೈಲೇಜ್ ತಂದುಕೊಟ್ಟಿತು. ಈ ಚಿತ್ರದಲ್ಲಿ ತಾವು ನಿರ್ವಹಿಸಿದ್ದ ಕಿಚ್ಚ ಪಾತ್ರದಿಂದ ಖ್ಯಾತಿ ಗಳಿಸಿದ ಸುದೀಪ್ ಅವರನ್ನು ಎಲ್ಲರೂ ಕಿಚ್ಚ ಸುದೀಪ ಎಂದೇ ಕರೆಯಲಾರಂಭಿಸಿದರು. ಅಂದು ಶುರುವಾದ ಕಿಚ್ಚ ಸುದೀಪ್ ಗೆಲುವಿನ ಓಟ ಇಂದು ಅವರನ್ನು ಸ್ಟಾರ್ ನಟನನ್ನಾಗಿ ಮಾಡಿದೆ. ಇನ್ನು ಇಂಡಸ್ಟ್ರಿಯಲ್ಲಿ ತಾವು 27 ವರ್ಷಗಳನ್ನು ಪೂರೈಸಿರುವುದರ ಕುರಿತು ಸುದೀಪ್ ಟ್ವೀಟ್ ಮಾಡಿದ್ದು ಈ ಕೆಳಕಂಡಂತೆ ಬರೆದುಕೊಂಡಿದ್ದಾರೆ..
ಕಿಚ್ಚ ಸುದೀಪ್ ಟ್ವೀಟ್
ತಾವು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು 27 ವರ್ಷಗಳನ್ನು ಪೂರೈಸಿರುವುದರ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ "ಇದು ಖಂಡಿತವಾಗಿಯೂ ಎಂದೂ ಮರೆಯಲಾಗದಂತಹ ಜರ್ನಿ. ಹಲವಾರು ಪ್ರತಿಭೆಗಳು ತುಂಬಿರುವ ಸಿನಿಮಾ ಕ್ಷೇತ್ರದಲ್ಲಿ ನಾನು ಉಳಿದುಕೊಂಡಿದ್ದು ನಿಜಕ್ಕೂ ಹೆಮ್ಮೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಒಳ್ಳೆಯ ನಟನೆ ಮಾಡುವಂತೆ ಉತ್ತೇಜಿಸಿದ ಎಲ್ಲಾ ಪ್ರತಿಭೆಗಳಿಗೆ ಧನ್ಯವಾದಗಳು. ಯಾವಾಗಲೂ ನನ್ನ ಬೆನ್ನಿಗೆ ನಿಂತ ಸ್ನೇಹಿತರಿಗೆ ಶಿರ ಬಾಗುತ್ತೇನೆ. ನಿಮ್ಮಂತ ಅಭಿಮಾನಿಗಳನ್ನು ಪಡೆದ ನಾನೇ ಧನ್ಯ. ನನಗೆ ಅವಕಾಶಗಳನ್ನು ನೀಡಿದ ಕನ್ನಡ ಚಲನಚಿತ್ರರಂಗಕ್ಕೆ ಧನ್ಯವಾದಗಳು. ನನ್ನನ್ನು ನಂಬಿದ ಹಿಂದಿ, ತೆಲುಗು ಹಾಗೂ ತಮಿಳು ಚಿತ್ರರಂಗಗಳನ್ನು ಈ ಸಮಯದಲ್ಲಿ ಮರೆಯಲಾಗುವುದಿಲ್ಲ" ಎಂದು ಬರೆದುಕೊಳ್ಳುವುದರ ಮೂಲಕ ಧನ್ಯವಾದ ತಿಳಿಸಿದ್ದಾರೆ.
ಪರಭಾಷಾ ದಿಗ್ಗಜ ನಿರ್ದೇಶಕರ ಫೇವರಿಟ್ ಕಿಚ್ಚ
ಇನ್ನು ಪರಭಾಷೆಗಳಲ್ಲಿ ಬೇಡಿಕೆಯನ್ನು ಮೊದಲಿಗೆ ಹೊಂದಿದ ಕನ್ನಡದ ನಟ ಕಿಚ್ಚ ಸುದೀಪ್ ಎಂದರೆ ತಪ್ಪಾಗಲಾರದು. 2008ರಲ್ಲಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ನಿರ್ದೇಶನದ ಹಿಂದಿ ಚಿತ್ರ ಫೂಂಕ್ಗೆ ಸುದೀಪ್ ಅವರನ್ನು ಆಯ್ಕೆ ಮಾಡಿಕೊಂಡು ಸುದೀಪ್ ಬಾಲಿವುಡ್ ಪ್ರವೇಶಿಸುವಂತೆ ಮಾಡಿದ್ದರು. ಬಳಿಕ ಇದೇ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಹಿಂದಿ ಚಿತ್ರ ರಣ್ ಹಾಗೂ ತೆಲುಗು ಚಿತ್ರ ರಕ್ತ ಚರಿತ್ರದಲ್ಲಿಯೂ ಸಹ ಸುದೀಪ್ ನಟಿಸಿದ್ದರು. ಇನ್ನು ಎಸ್ ಎಸ್ ರಾಜಮೌಳಿ ನಿರ್ದೇಶನದ ಈಗ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಅಭಿನಯಿಸಿದ್ದ ಕಿಚ್ಚ ಸುದೀಪ್ ದೊಡ್ಡ ಮಟ್ಟದ ಪ್ರಶಂಸೆಯನ್ನು ಗಿಟ್ಟಿಸಿಕೊಂಡರು.
ನಿರ್ದೇಶಕ, ನಿರ್ಮಾಪಕನಾಗಿಯೂ ಕೆಲಸ ನಿರ್ವಹಣೆ
ಕಿಚ್ಚ ಸುದೀಪ್ ನಿರ್ದೇಶಕನಾಗಿ ಆರು ಚಿತ್ರಗಳನ್ನು ನಿರ್ದೇಶಿಸಿದ್ದು, ನಿರ್ಮಾಪಕನಾಗಿ ನಾಲ್ಕು ಚಿತ್ರಗಳನ್ನು ನಿರ್ಮಿಸಿದ್ದಾರೆ. ಇನ್ನು ಸುದೀಪ್ ನಿರೂಪಕ, ಗಾಯಕನಾಗಿಯೂ ಸಹ ಕೆಲಸ ಮಾಡಿದ್ದು, ಚಂದನವನದ ಆಲ್ರೌಂಡರ್ಗಳಲ್ಲಿ ಒಬ್ಬರಾಗಿದ್ದಾರೆ.