ನಿರ್ದೇಶಕನ ಪ್ರಯತ್ನ: ಮನೆಯಲ್ಲೇ ಕೂತು ಸಿನಿಮಾ ಜ್ಞಾನ ಸಂಪಾದಿಸಿ
ಕೊರೊನಾ ವೈರಸ್ ಲಾಕ್ಡೌನ್ ಕಾರಣದಿಂದ ಎಲ್ಲರೂ ಮನೆಯಲ್ಲಿ ಕೂತಿದ್ದಾರೆ. ಬಹುತೇಕರು ಮನೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ನೋಡುತ್ತಾ ಜಡವಾಗಿ ಕೂತಿದ್ದಾರೆ.
ಕೆಲವು ಉತ್ಸಾಹಿ ಮಂದಿ ಮನೆಯಲ್ಲಿ ಕೂತಿರುವ ಜನರನ್ನೇ ಗಮನದಲ್ಲಿಟ್ಟುಕೊಂಡು ಅವರಿಗೆ ಆನ್ಲೈನ್ ಮೂಲಕ, ಮನರಂಜನೆ, ಬೌದ್ಧಿಕ ಜ್ಞಾನ, ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಯುವ ಕನ್ನಡ ಸಿನಿಮಾ ನಿರ್ದೇಶಕ ಶ್ರೀನಿ ಸಹ ಇಂಥಹಾ ಒಂದು ಪ್ರಯತ್ನಕ್ಕೆ ಕೈ ಹಾಕಿದ್ದು, ಸಿನಿಮಾ ಉದ್ಯಮದ ಖ್ಯಾತ ವ್ಯಕ್ತಿಗೊಂದಿಗೆ ಜಾಯಿಂಟ್ ಲೈವ್ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಆ ಮೂಲಕ ಆಸಕ್ತರು ಮನೆಯಲ್ಲಿಯೇ ಕೂತು ಸಿನಿಮಾ ಬಗ್ಗೆ ಜ್ಞಾನ ಸಂಪಾದನೆ ಮಾಡಬಹುದಾಗಿದೆ.

ಆನ್ಲೈನ್ನಲ್ಲಿ ಸಿನಿಮಾ ಜ್ಞಾನ
ಬಹುದಿನಗಳಿಂದಲೂ ಯುವ ನಿರ್ದೇಶಕ ಶ್ರೀನಿ ಅಲಿಯಾಸ್ ಎಂಜಿ ಶ್ರೀನಿವಾಸ್ ಆನ್ಲೈನ್ ನಲ್ಲಿ ಲೈವ್ ಮೂಲಕ ಸಿನಿಮಾದ ತಾಂತ್ರಿಕ, ಆರ್ಥಿಕ ಸೇರಿದಂತೆ ಇನ್ನಿತರೆ ಅಂಶಗಳ ಬಗ್ಗೆ ಅನುಭವಿಗಳ ಜೊತೆಗೂಡಿ ಚರ್ಚೆ ನಡೆಸುತ್ತಿದ್ದಾರೆ. ಲಾಕ್ಡೌನ್ ಪ್ರಾರಂಭವಾದ ಕೆಲವು ದಿನಗಳಿಂದಲೂ ಶ್ರೀನಿ ಈ ಪ್ರಯತ್ನ ಆರಂಭಿಸಿದ್ದಾರೆ. ಶ್ರೀನಿ ಇನ್ಸ್ಟಾಗ್ರಾಂ ಖಾತೆ ಯಲ್ಲಿ ಈ ಲೈವ್ ಚರ್ಚೆಗಳು ಪ್ರಸಾರವಾಗಲಿವೆ.

ಬರಲಿದ್ದಾರೆ ದಂಗಲ್ ಸಿನಿಮಾ ನಿರ್ದೇಶಕ
ಪ್ರಯತ್ನವನ್ನು ಜಾರಿಯಲ್ಲಿಟ್ಟಿರುವ ಶ್ರೀನಿ, ಬಾಲಿವುಡ್ನ ಖ್ಯಾತ ನಿರ್ದೇಶಕ, ದಂಗಲ್ ಸಿನಿಮಾ ಖ್ಯಾತಿಯ ನಿತೇಶ್ ತಿವಾರಿ ಅವರೊಂದಿಗೆ ಇನ್ಸ್ಟಾಗ್ರಾಂ ಲೈವ್ ಮಾಡುವುದಾಗಿ ಘೋಷಿಸಿದ್ದಾರೆ. ದಂಗಲ್ ನಿರ್ದೇಶಕ ನಿತೇಶ್ ತಿವಾರಿ ಅವರು ಏಪ್ರಿಲ್ 13 ರಂದು ಶ್ರೀನಿ ಜೊತೆ ಲೈವ್ ಬಂದು ಸಿನಿಮಾ ನಿರ್ದೇಶನದ ಬಗ್ಗೆ ಮಾತನಾಡಲಿದ್ದಾರೆ.

ಬಾಲಿವುಡ್ ಚಿತ್ರಕತೆ ಬರಹಗಾರ
ಬಾಲಿವುಡ್ನ ಮತ್ತೊಂದು ಪ್ರತಿಭೆ 'ಅಸುರ್' ವೆಬ್ ಸೀರೀಸ್ ನ ಲೇಖಕ ಗೌರವ್ ಶುಕ್ಲಾ ಅವರು ಏಪ್ರಿಲ್ 12 ರಂದು ಇನ್ಸ್ಟಾಗ್ರಾಂ ಲೈವ್ ಬರಲಿದ್ದು, ಶ್ರೀನಿ ಮತ್ತು ಅವರು ಚಿತ್ರಕತೆಯ ಕುರಿತು, ಕತೆಯ ಮಹತ್ವದ ಕುರಿತು ಮಾತನಾಡಲಿದ್ದಾರೆ.

ಸಿನಿಮಾ ವಿತರಣೆ ಬಗ್ಗೆ ಮಾತು
ಕತೆ, ಚಿತ್ರಕತೆ, ನಿರ್ದೇಶನ ಮಾತ್ರವಲ್ಲದೆ ಸಿನಿಮಾದ ಆರ್ಥಿಕ ಅಂಶಗಳ ಬಗ್ಗೆಯೂ ಗಮನ ವಹಿಸಲಾಗುತ್ತಿದ್ದು, ಕೆಜಿಎಫ್ ಅನ್ನು ಪ್ಯಾನ್ ಇಂಡಿಯಾ ಸಿನಿಮಾ ಆಗಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಕಾರ್ತಿಕ್ ಗೌಡ ಅವರೊಂದಿಗೆ ಸಿನಿಮಾ ವಿತರಣೆ ಕುರಿತು ಮಾತನಾಡಲಿದ್ದಾರೆ. ಇದೆಲ್ಲವೂ ಶ್ರೀನಿ ಅವರು ಇನ್ಸ್ಟಾಗ್ರಾಂ ಖಾತೆಯಲ್ಲಿ ದೊರೆಯಲಿದೆ.


Click it and Unblock the Notifications











