ಕನ್ನಡದಲ್ಲಿ ಸಿನಿಮಾ ಮಾಡುವ ಬಗ್ಗೆ ತುಟಿ ಬಿಚ್ಚಿದ ಕೃತಿ ಶೆಟ್ಟಿ; ಇಂಥ ಸಿನಿಮಾಗಾಗಿ ವೈಟಿಂಗ್!
ಉಪ್ಪೆನಾ ಚಿತ್ರದ ಮೂಲಕ ಪರಿಪೂರ್ಣ ನಾಯಕಿಯಾದ ಕೃತಿ ಶೆಟ್ಟಿ ತೆಲುಗು ಚಿತ್ರರಂಗ ಮಾತ್ರವಲ್ಲದೇ ಈ ಸಿನಿಮಾದ ಮೂಲಕ ದಕ್ಷಿಣ ಭಾರತ ಸಿನಿ ರಸಿಕರ ಮನ ಗೆದ್ದಿದ್ದರು. ಈ ಚಿತ್ರದಲ್ಲಿ ಬೇಬಮ್ಮ ಪಾತ್ರದಲ್ಲಿ ಮಿಂಚಿದ್ದ ಕೃತಿ ಶೆಟ್ಟಿ ಚಿತ್ರದಲ್ಲಿನ ತನ್ನ ಅಭಿನಯಕ್ಕಾಗಿ ಸೈಮಾ ಹಾಗೂ ಫಿಲ್ಮ್ಫೇರ್ ಅತ್ಯುತ್ತಮ ಉದಯೋನ್ಮುಖ ನಟಿ ಪ್ರಶಸ್ತಿಯನ್ನೂ ಸಹ ಪಡೆದುಕೊಂಡಿದ್ದಾರೆ.
ಉಪ್ಪೆನಾ ಯಶಸ್ಸಿನ ಮೂಲಕ ಕೃತಿ ಶೆಟ್ಟಿ ತೆಲುಗು ಚಿತ್ರರಂಗದ ಬಹು ಬೇಡಿಕೆಯ ನಟಿಯಾದರು. ತೆಲುಗು ಮಾತ್ರವಲ್ಲದೆ ಇತರೆ ಚಿತ್ರರಂಗಗಳಿಂದಲೂ ಆಫರ್ಗಳು ಕೃತಿ ಶೆಟ್ಟಿಯನ್ನು ಹರಸಿ ಬಂದಿದ್ದವು. ಆದರೆ ಕೃತಿ ಶೆಟ್ಟಿ ಉಪ್ಪೆನಾ ಬಳಿಕ ತೆಲುಗು ಚಿತ್ರಗಳಲ್ಲಿಯೇ ಅಭಿನಯಿಸಿದರು. ಮೊದಲ ಚಿತ್ರದಲ್ಲಿ ಸಿಕ್ಕ ಬಹು ದೊಡ್ಡ ಯಶಸ್ಸು ನಂತರದ ಚಿತ್ರಗಳಲ್ಲಿ ಕೃತಿ ಶೆಟ್ಟಿ ಕೈಗೆ ದೊರಕಲಿಲ್ಲ.
ಹೀಗೆ ತೆಲುಗಿನಲ್ಲಿ ದೊಡ್ಡ ಯಶಸ್ಸಿನೊಂದಿಗೆ ತನ್ನ ಸಿನಿ ಪಯಣ ಆರಂಭಿಸಿದ ಕೃತಿ ಶೆಟ್ಟಿ ಸದ್ಯ ತಮಿಳು ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದಾರೆ. ಈ ಹಿಂದೆಯೇ ಕೃತಿ ಶೆಟ್ಟಿ ಅಭಿನಯದ ವಾರಿಯರ್ ಚಿತ್ರ ತೆಲುಗು ಹಾಗೂ ತಮಿಳು ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಇದೀಗ ವನಾಂಗನ್ ಎಂಬ ನೇರ ತಮಿಳು ಸಿನಿಮಾಕ್ಕೆ ಸಹಿ ಹಾಕುವ ಮೂಲಕ ಕೃತಿ ಶೆಟ್ಟಿ ಕಾಲಿವುಡ್ ಪ್ರವೇಶಿಸಿದ್ದಾರೆ. ಹೀಗೆ ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ನಿರತರಾಗಿರುವ ಕೃತಿ ಶೆಟ್ಟಿ ಕನ್ನಡ ಚಿತ್ರದಲ್ಲಿ ಯಾವಾಗ ಅಭಿನಯಿಸಲಿದ್ದಾರೆ ಎಂಬ ಪ್ರಶ್ನೆ ಇದೆ. ಕೃತಿ ಶೆಟ್ಟಿ ಮೂಲತಃ ಕರ್ನಾಟಕದವರಾಗಿರುವ ಕಾರಣ ಈ ಹಿಂದಿನಿಂದಲೂ ಈ ಪ್ರಶ್ನೆ ಪದೇ ಪದೇ ಕೇಳಿಬರುತ್ತಲೇ ಇದೆ. ಹಾಗೂ ಇದೇ ಪ್ರಶ್ನೆ ಫಿಲ್ಮ್ಫೇರ್ ಪ್ರಶಸ್ತಿ ಕಾರ್ಯಕ್ರಮದಲ್ಲೂ ಸಹ ಕೃತಿ ಶೆಟ್ಟಿಗೆ ಎದುರಾಗಿದ್ದು, ನಟಿ ಉತ್ತರವನ್ನೂ ಸಹ ನೀಡಿದ್ದಾರೆ.

ಕನ್ನಡ ಸಿನಿಮಾದಲ್ಲಿ ಅಭಿನಯಿಸುವುದರ ಕುರಿತು ಮಾತನಾಡಿದ ಕೃತಿ
ನಿನ್ನೆಯಷ್ಟೇ ( ಅಕ್ಟೋಬರ್ 10 ) ಬೆಂಗಳೂರಿನಲ್ಲಿ 67ನೇ ಫಿಲ್ಮ್ಫೇರ್ ಪ್ರಶಸ್ತಿ ಸೌತ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ಕೃತಿ ಶೆಟ್ಟಿ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ಕನ್ನಡದಲ್ಲಿ ಸಿನಿಮಾ ಯಾವಾಗ ಮಾಡ್ತೀರ ಎಂಬ ಪ್ರಶ್ನೆ ಕೃತಿ ಶೆಟ್ಟಿಗೆ ಎದುರಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಕೃತಿ ಶೆಟ್ಟಿ 'ನಾನು ಕರ್ನಾಟಕದ ಹುಡುಗಿ ಆದ ಕಾರಣ ನಾನು ಅಭಿನಯಿಸಲಿರುವ ಮೊದಲ ಕನ್ನಡ ಸಿನಿಮಾ ತುಂಬಾ ವಿಶೇಷವಾಗಿರಬೇಕು, ಅಂಥ ಕತೆಗೋಸ್ಕರ ಕಾಯುತ್ತಿದ್ದೇನೆ' ಎಂದರು. ಈ ಮೂಲಕ ದೊಡ್ಡ ಚಿತ್ರದ ಮೂಲಕ ತಾನು ಶೀಘ್ರದಲ್ಲಿಯೇ ಚಂದನವನಕ್ಕೆ ಕಾಲಿಡುವ ಸೂಚನೆಯನ್ನು ನೀಡಿದ್ದಾರೆ ನಟಿ ಕೃತಿ ಶೆಟ್ಟಿ.

ಸೂರ್ಯ ಜತೆ ನಟನೆ
ಇನ್ನು ತಮಿಳಿನಲ್ಲಿ ಸದ್ಯ ಸಾಲು ಸಾಲು ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ನಟನೆಂದರೆ ಅದು ಸೂರ್ಯ. ಇತ್ತೀಚೆಗಷ್ಟೆ ರಾಷ್ಟ್ರ ಪ್ರಶಸ್ತಿಯನ್ನೂ ಸಹ ಪಡೆದ ನಟ ಸೂರ್ಯ ಅಭಿನಯದ 41ನೇ ಚಿತ್ರಕ್ಕೆ ಕೃತಿ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕೃತಿ ಶೆಟ್ಟಿ ಕಾಲಿವುಡ್ಗೆ ದೊಡ್ಡ ನಟನ ಚಿತ್ರದ ಮೂಲಕ ಭರ್ಜರಿ ಎಂಟ್ರಿ ಕೊಡಲಿದ್ದಾರೆ.

ಸಾಲು ಸಾಲು ಸಿನಿಮಾಗಳ ಸೋಲು
ಇನ್ನು ಉಪ್ಪೆನಾ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಗೆದ್ದ ಕೃತಿ ಶೆಟ್ಟಿ ನಂತರ ತೆರೆಕಂಡ ಚಿತ್ರಗಳಲ್ಲಿ ಉಪ್ಪೆನಾ ರೀತಿಯ ಯಶಸ್ಸು ಕಾಣುವಲ್ಲಿ ಸಫಲರಾಗಲಿಲ್ಲ. ಕೃತಿ ಶೆಟ್ಟಿ ಅಭಿನಯದ ಶ್ಯಾಮ್ ಸಿಂಗಾ ರಾಯ್ ಹಾಗೂ ಬಂಗಾರ್ರಾಜು ಸಾಮಾನ್ಯ ಗೆಲುವು ಕಂಡರೆ, ದ ವಾರಿಯರ್, ಮಾಚೆರ್ಲಾ ನಿಯೋಜಕವರ್ಗಮ್ ಹಾಗೂ ಆ ಅಮ್ಮಾಯಿ ಗುರುಂಚಿ ಮೀಕು ಚೆಪ್ಪಾಲಿ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿದವು. ಹೀಗೆ ಸಾಲು ಸಾಲು ಸೋಲು ಕಂಡಿರುವ ಕೃತಿ ಶೆಟ್ಟಿ ಮುಂದಿನ ಚಿತ್ರದಲ್ಲಿ ಗೆದ್ದ ಕಮ್ಬ್ಯಾಕ್ ಮಾಡಬೇಕಿದೆ.

ಸೂಪರ್ 30 ಮೊದಲ ಚಿತ್ರ
ಇನ್ನು ಕೃತಿ ಶೆಟ್ಟಿ ಮೊದಲ ಬಾರಿಗೆ ಬೆಳ್ಳೆ ತೆರೆಯಲ್ಲಿ ಕಾಣಿಸಿಕೊಂಡಿದ್ದು ಹೃತಿಕ್ ರೋಷನ್ ಹಾಗೂ ಮೃಣಾಲ್ ಠಾಕೂರ್ ಅಭಿನಯದ ಬಾಲಿವುಡ್ ಸಿನಿಮಾ ಸೂಪರ್ 30 ಮೂಲಕ. ಈ ಚಿತ್ರದಲ್ಲಿ ನಟಿ ಕೃತಿ ಶೆಟ್ಟಿ ವಿದ್ಯಾರ್ಥಿನಿ ಪಾತ್ರ ನಿರ್ವಹಿಸಿದ್ದರು.


Click it and Unblock the Notifications











