ಸೌಂದರ್ಯ ವಿಲ್ ಬರೆದಿಟ್ಟಿದ್ದೇಕೆ,ಸಾವಿನ ಮುನ್ಸೂಚನೆ?
ಎಪ್ರಿಲ್ 17, 2004ರಲ್ಲಿ ವಿಮಾನ ಅಪಘಾತದಲ್ಲಿ ನಮ್ಮನ್ನಗಲಿದ ದಕ್ಷಿಣಭಾರತದ ನಟಿ ಸೌಂದರ್ಯಾಗೆ ಸಾವಿನ ಮುನ್ಸೂಚನೆಯಿತ್ತೇ ? ಸುಮಾರು 50 ಕೋಟಿ ಬೆಲೆಬಾಳುವ ಆಸ್ತಿಯನ್ನು ತನ್ನ ಸಾವಿನ ಎಂಟು ತಿಂಗಳು ಹಿಂದೆಯೇ ಉಯಿಲು ಬರೆದಿದ್ದರೇ?
ತನ್ನ ಸಾವಿನ ನಂತರ ತಾನು ಸಂಪಾದಿಸಿದ ಆಸ್ತಿಗಾಗಿ ಕುಟುಂಬದಲ್ಲಿ ಮುಂದೆ ಒಂದು ದಿನ ಅಪಸ್ವರ ಕೇಳಿಬರುತ್ತಿದೆ ಎನ್ನುವ ಸಂಶಯ ಸೌಂದರ್ಯಾಗೆ ಕಾಡಿದ್ದರೆ ಅದು ಈಗ ನಿಜವಾಗುತ್ತಿದೆ.
ಸೌಂದರ್ಯಾ ತಾನು ಸಂಪಾದಿಸಿದ ಆಸ್ತಿಪಾಸ್ತಿಯನ್ನು ಬರೀ ತನ್ನ ಗಂಡನ ಕುಟುಂಬಕ್ಕೆ ಉಯಿಲು ಬರೆದಿರಲಿಲ್ಲ. ವಿಮಾನ ಅಪಘಾತದಲ್ಲಿ ತನ್ನೊಂದಿಗೆ ಸಾವನ್ನಪ್ಪಿದ್ದ ಪ್ರೀತಿಪಾತ್ರ ಅಣ್ಣ, ತಾಯಿ, ಅಣ್ಣನ ಪತ್ನಿ ಮತ್ತು ಅಣ್ಣ ಮಗನ ಹೆಸರಿನಲ್ಲಿ ಕೂಡಾ ಆಸ್ತಿಯನ್ನು ಹಂಚಿದ್ದಾರೆ.

ಹೆಣ್ಣು, ಹೊನ್ನು, ಮಣ್ಣಿನ ಮುಂದೆ ಯಾವುದೇ ಸಂಬಂಧ ಗಣನೆಗೆ ಬರುವುದಿಲ್ಲ. ಸೌಂದರ್ಯಾ ಆಸ್ತಿಯನ್ನು ಹಂಚಿದ್ದು ಈಗ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ಅಷ್ಟೇ ಇಲ್ಲದೆ ಈ ವಿವಾದ ಈಗ ಕೋರ್ಟ್ ಮೆಟ್ಟಲೇರಿದೆ.
ಆಸ್ತಿ ಇಬ್ಬಾಗವಾದಂತೆ ಈಕೆಯ ಕುಟುಂಬ ಕೂಡಾ ಆಸ್ತಿಗಾಗಿ ಬಿರುಕು ಬಿಟ್ಟಿದೆ. ಸೌಂದರ್ಯಾ ತಾಯಿ ಕೆ ಎಸ್ ಮಂಜುಳಾ, ಪತಿ ಜಿ ಎಸ್ ರಘು ಒಂದು ಕಡೆಯಾದರೆ, ಅಣ್ಣನ ಹೆಂಡತಿ ನಿರ್ಮಲಾ, ಅಣ್ಣನ ಮಗ ಸಾತ್ವಿಕ್ ಇನ್ನೊಂದು ಕಡೆ.
ನಗ, ನಾಣ್ಯ ಹೊರತು ಪಡಿಸಿ ಸೌಂದರ್ಯಾ ಹೆಸರಿನಲ್ಲಿ ಆರು ಚಿರಾಸ್ಥಿಗಳಿವೆ. ಸೌಂದರ್ಯಾ ಬರೆದಿಟ್ಟಿರುವ ವಿಲ್ ಅನ್ನು ಇನ್ನೊಂದು ಪಾರ್ಟಿ ಒಪ್ಪಿಕೊಳ್ಳುತ್ತಿಲ್ಲ ಇದೆಲ್ಲಾ ಬರೀ ಸುಳ್ಳು ಎಂದು ಕುಟುಂಬದ ವಕೀಲರ ಮೇಲೆ ಅನುಮಾನ ವ್ಯಕ್ತ ಪಡಿಸುತ್ತಾರೆ.
ಈಗ ಲಭ್ಯವಿರುವ ಮಾಹಿತಿ ಪ್ರಕಾರ ಬೆಂಗಳೂರಿನ ಹನುಮಂತ ನಗರ, ಎಚ್ಆರ್ಬಿಆರ್ ಬಡಾವಣೆ, ಭವಾನಿ ಸಹಕಾರ ಸೊಸೈಟಿ ಮತ್ತು ರಾಜಮಹಲ್ ವಿಲಾಸ್ ಬಡಾವಣೆಯಲ್ಲಿರುವ ನಿವೇಶನ, ಹೈದರಾಬಾದ್ ಬಂಜಾರ ಹಿಲ್ಸ್ ನಲ್ಲಿರುವ ಕಮರ್ಷಿಯಲ್ ಕಟ್ಟಡವನ್ನು ತಾಯಿ, ಅಣ್ಣ ಮತ್ತು ಮಾಜಿ ಪತಿ ಹೆಸರಿಗೆ ಹಂಚಿ ಉಯಿಲು ಬರೆದಿದ್ದಾರೆ.
ಹೈದರಾಬಾದ್ ನಲ್ಲಿನ ಕಟ್ಟಡ ಆದಾಯವನ್ನು ತನ್ನ ಕುಟುಂಬ, ತಾಯಿ ಮತ್ತು ಅಣ್ಣನ ಕುಟುಂಬ ಹಂಚಿಕೊಳ್ಳ ಬೇಕು. ನಾನು ಚಿತ್ರರಂಗದಲ್ಲಿ ಇಷ್ಟು ಹೆಸರು ಗಳಿಸುತ್ತೇನೆ ಅಂದರೆ ಅದರ ಹಿಂದೆ ಅಣ್ಣ ಮತ್ತು ನನ್ನ ತಾಯಿಯ ಪರಿಶ್ರಮವಿದೆ ಎಂದು ಸೌಂದರ್ಯಾ ವಿಲ್ ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ.
ಆದರೆ ಆಸ್ತಿ ಹಂಚಿಕೆಯನ್ನು ಆಕೆಯ ತಾಯಿ ಮತ್ತು ಗಂಡ ಒಪ್ಪಿಕೊಳ್ಳುತ್ತಿಲ್ಲ. ಸೌಂದರ್ಯಾ ಮತ್ತು ರಘು ಅವರ ಸಾಂಸಾರಿಕಾ ಜೀವನ ನಡೆದಿದ್ದು ಕೇವಲ ಒಂದು ವರ್ಷ. ಈಗ ರಘು, ಸೌಂದರ್ಯಾ ತಾಯಿ ಜೊತೆ ಕಾನೂನು ಹೋರಾಟಕ್ಕೆ ಇಳಿದಿದ್ದಾರೆ.
ಇತ್ತ ಸೌಂದರ್ಯಾ ಅತ್ತಿಗೆ ನಿರ್ಮಲಾ ತನ್ನ ಮಗನೊಂದಿಗೆ ಸೇರಿ, ತನ್ನ ಅತ್ತೆ ಆಸ್ತಿ ಹಂಚಿಕೆಗೆ ಸಹಕರಿಸುತ್ತಿಲ್ಲ ಎಂದು ಕೋರ್ಟ್ ಮೆಟ್ಟಲೇರಿದ್ದಾರೆ. ಇಬ್ಬರ ಪರ ವಕೀಲರ ವಾದವಿವಾದಗಳನ್ನು ಕೇಳಿದ ನ್ಯಾಯಾಲಯ ನವೆಂಬರ್ ಎರಡರಂದು ಮತ್ತೆ ವಿಚಾರಣೆಗೆ ಅನುವು ಮಾಡಿಕೊಟ್ಟಿದೆ.
ಎಪ್ರಿಲ್ 2004 ರಲ್ಲಿ ಬಿಜೆಪಿ ಪರವಾಗಿ ಆಂಧ್ರಪ್ರದೇಶದಲ್ಲಿ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾಗ ವಿಮಾನ ಅಪಘಾತದಲ್ಲಿ ಸೌಂದರ್ಯಾ ಮತ್ತು ಆಕೆಯ ಅಣ್ಣ ದುರಂತ ಸಾವನ್ನಪ್ಪಿದ್ದರು.
ಸಮಸ್ತ ಕನ್ನಡಿಗರ ಮನಸಿನಲಿ ರಾ.ರಾ.. ಎಂದು ಅಚ್ಚಳಿಯದೇ ಉಳಿದಿರುವ ಸೌಂದರ್ಯಾ ಆಸ್ತಿಗಾಗಿ ಕುಟುಂಬದವರು ಕೋರ್ಟ್ ಮೆಟ್ಟಲೇರಿರುವುದು ನೋವಿನ ಸಂಗತಿ ಅಲ್ಲದೆ ಮತ್ತಿನ್ನೇನು?
ಇಷ್ಟಕ್ಕೂ ಸೌಂದರ್ಯಾ ವಿಲ್ ಬರೆದಿಟ್ಟಿದ್ದೇಕೆ, ಆಕೆಗೆ ಸಾವಿನ ಮುನ್ಸೂಚನೆಯಿತ್ತೇ?
(ವಿವಿಧ ಮೂಲಗಳಿಂದ)


Click it and Unblock the Notifications











