'ಅಂಜನಿಪುತ್ರ'ನಿಗೆ ಎದುರಾದ ವಿಘ್ನ : ಚಿತ್ರ ಪ್ರದರ್ಶನಕ್ಕೆ ತಡೆ ಕೋರಿ ಅರ್ಜಿ
ಪುನೀತ್ ರಾಜ್ ಕುಮಾರ್ ನಟನೆಯ 'ಅಂಜನಿಪುತ್ರ' ಸಿನಿಮಾಗೆ ಇದೀಗ ಮತ್ತೊಂದು ಸಮಸ್ಯೆ ಎದುರಾಗಿದೆ. ಒಂದು ಕಡೆ ಪೈರಸಿ ತೊಂದರೆ ಆದರೆ ಇನ್ನೊಂದು ಕಡೆ ಚಿತ್ರದ ಪ್ರದರ್ಶನಕ್ಕೆ ತಡೆಕೋರಿ ಅರ್ಜಿ ಸಲ್ಲಿಸಲಾಗಿದೆ.
ಸಿಟಿ ಸಿವಿಲ್ ಕೋರ್ಟ್ ಗೆ ವಕೀಲ ನಾರಾಯಣಸ್ವಾಮಿ ಎಂಬುವವರು ಅರ್ಜಿ ಸಲ್ಲಿಸಿ 'ಅಂಜನಿಪುತ್ರ' ಸಿನಿಮಾದ ಪ್ರದರ್ಶನವನ್ನು ತಡೆಯಬೇಕು ಎಂದು ಮನವಿ ಮಾಡಿದ್ದಾರೆ. ಸಿನಿಮಾದಲ್ಲಿ ವಕೀಲರ ವಿರುದ್ಧ ಒಂದು ಸಂಭಾಷಣೆ ಇದೆ. ಈ ಸಂಭಾಷಣೆಯಲ್ಲಿ ವಕೀಲರಿಗೆ ಕೆಟ್ಟದಾಗಿ ಮಾತನಾಡಿದ್ದು, ಚಿತ್ರದಲ್ಲಿ ಲಾಯರ್ ಗಳಿಗೆ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಕೋರ್ಟ್ ಚಿತ್ರಕ್ಕೆ ಸ್ಟೇ ತಂದಿದ್ದು, ಜನವರಿ 2ರವರೆಗೆ ಚಿತ್ರ ಪ್ರದರ್ಶನವನ್ನು ರದ್ದು ಮಾಡಲಾಗಿದೆ.

ಇನ್ನು ಸಿನಿಮಾದಲ್ಲಿ ನಟ ರವಿಶಂಕರ್ ಈ ಸಂಭಾಷಣೆ ಹೇಳುತ್ತಾರೆ. ಚಿತ್ರದಲ್ಲಿ ವಿಲನ್ ಪರವಾಗಿ ಇರುವ ಲಾಯರ್ ಗೆ ಪೊಲೀಸ್ ಪಾತ್ರದ ರವಿಶಂಕರ್ ಹೇಳುವ ಡೈಲಾಗ್ ಇದಾಗಿದೆ. ಇದೇ ಡೈಲಾಗ್ ನಿಂದ ಕೋಪಗೊಂಡಿರುವ ವಕೀಲ ನಾರಾಯಣಸ್ವಾಮಿ ಚಿತ್ರ ಪ್ರದರ್ಶನಕ್ಕೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಇನ್ನು ಈ ಘಟನೆ ಬಗ್ಗೆ ಮಾತನಾಡಿರುವ ನಿರ್ದೇಶಕ ಹರ್ಷ ''ನಾವು ಯಾರಿಗೂ ನೋಯಿಸುವ ದೃಷ್ಟಿಯಿಂದ ಮಾಡಿಲ್ಲ. ಅದಕ್ಕೆ ಸೆನ್ಸಾರ್ ನವರು ಕೂಡ ನಮಗೆ ಕಟ್ ಕೊಟ್ಟಿಲ್ಲ. ಸಿನಿಮಾದ ಆ ಸಂದರ್ಭಕ್ಕೆ ತಕ್ಕಂತೆ ಆ ಸಂಭಾಷಣೆಯನ್ನು ಹಾಕಿದ್ದೇನೆ. ಅದು ಕೆಟ್ಟ ಮಾತಿನಲ್ಲಿ ಹೇಳಿಲ್ಲ. ಇದನ್ನು ಸುಮ್ಮನೆ ಬೇಕು ಅಂತ ನಾವು ಮಾಡಿಲ್ಲ.'' ಎಂದು ಹೇಳಿದ್ದಾರೆ.


Click it and Unblock the Notifications











