ನಟ ಶರಣ್ ಗೆದ್ದಿದ್ದೆಲ್ಲಿ, ಉಳಿದವರು ಎಡವಿದ್ದೆಲ್ಲಿ?
ರಾಗಿಣಿ ಸೀರೆ ಉಟ್ರೆ ಇಷ್ಟ ಆಗಲ್ಲ, ಅದೇ ರೀತಿ ರಾಧಿಕಾ ಸ್ಕರ್ಟ್ ಹಾಕಿದ್ರೆ ಚಂದ ಕಾಣಲ್ಲ. ಸ್ಟಾರ್ ಅನ್ನಿಸಿಕೊಂಡಮೇಲೆ ನಾವಂದುಕೊಂಡ ಹಾಗೆ ಬಿಲ್ ಕುಲ್ ಇರೋಕಾಗಲ್ಲ. ಒಂದಷ್ಟು ಜನರಿಗೆ ನಾವು ಇಷ್ಟವಾದ್ಮೇಲೆ ನಾವು ಅವರ ನಿರೀಕ್ಷೆ ಮಾಡೋ ತರಹ ಇರಬೇಕಾಗುತ್ತೆ.
ಹಳ್ಳಿ ಕಡೆ ಹೇಳೋ ಒಂದ್ ಮಾತಿದೆ. ಬಡಗಿ ಮರ ಕೆತ್ತಿದ್ರೇ ಚೆಂದ-ಅಕ್ಕಸಾಲಿಗೆ ಬಂಗಾರ ಮುಟ್ಟಿದ್ರೇ ಆನಂದ ಅನ್ನೋ ಹಾಗೆ ಯಾರು ಯಾವುದನ್ನ ಮಾಡ್ಬೇಕು ಅದನ್ನ ಮಾಡಿದ್ರೇನೇ ಅಚ್ಚುಕಟ್ಟಾಗಿ ಇರೋದು.
ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟಿಗೆ ಹವಾ ಕ್ರಿಯೇಟ್ ಮಾಡ್ತಿರೋ ನಟ ಅಂದ್ರೆ ಅದು ಶರಣ್. ಶರಣ್ ಸತತ ನಾಲ್ಕೂ ಸಿನಿಮಾಗಳಲ್ಲಿ ಗೆದ್ದು ಐದನೇ ಸಿನಿಮಾದಲ್ಲೂ ಶತಕ ಬಾರಿಸೋಕೆ ರೆಡಿಯಾಗ್ತಿದ್ದಾರೆ. ಈ ಶತಕದ ಶರಣನ ಶಿವಭಕ್ತಿಯಲ್ಲಿರೋ ಯುಕ್ತಿಯೇನು ಗೊತ್ತಾ.
ಎಂತೆಂತಹಾ ಸ್ಟಾರ್ ಗಳು ಎಡವಿದ್ದನ್ನ ಸರಿಯಾಗಿ ಅರ್ಥ ಮಾಡಿಕೊಂಡು ಎಚ್ಚರಿಕೆಯಿಂದ ಕಥೆಯನ್ನ ಆಯ್ಕೆ ಮಾಡಿಕೊಳ್ಳೋದು. ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳೋದು. ಯಾಕಂದ್ರೆ ಜಗ್ಗೇಶ್ ಇಲ್ಲಿ ಎಡವಿದ್ದಾರೆ.

ಬಾಡಿಗಾರ್ಡ್ ಗೆ ಗಾರ್ಡ್ ಇರಲಿಲ್ಲ
ಜಗ್ಗೇಶ್ ಕನ್ನಡದ ಕಾಮಿಡಿಯ ಬ್ರ್ಯಾಂಡ್ ಅಂದರೂ ತಪ್ಪಿಲ್ಲ. ನವರಸನಾಯಕ ಅನ್ನಿಸಿಕೊಂಡ್ರೂ ಜಗ್ಗೇಶ್ ಸಿನಿಮಾಗಳನ್ನ ಜನ ನೋಡ್ತಿದ್ದಿದ್ದು ಅವ್ರ ಹಾವಭಾವಗಳಿಗೆ ತತ್ತರಿಸಿ ಹೋಗೋ ಪಂಚಿಂಗ್ ಡೈಲಾಗ್ ಗಳಿಗೆ. ಆದರೆ ಯಾವಾಗ ಸಂಪೂರ್ಣ ಹೀರೋಯಿಸಂ ಸಿನಿಮಾ ಮಾಡೋಕೆ ಹೊರಟ್ರೋ ಆಗ ಸಿನಿಪ್ರೇಮಿಗಳಿಗೆ ಜಗ್ಗೇಶ್ ಇಷ್ಟವಾಗಲಿಲ್ಲ.

ಅಣ್ಣನ ಹಾದಿಯಲ್ಲಿ ಕೋಮಲ್
ಹಗಲು ಕಂಡ ಬಾವಿಗೆ ಇರುಳು ಬಿದ್ದಂತಾಯ್ತು ಕೋಮಲ್ ಕಥೆ. ಅಣ್ಣನ ಆಯ್ಕೆಯಲ್ಲಿ ಎಡವಿದ ಅವಾಂತರ ನೋಡಿಯೂ ತನ್ನ ಸಾಮರ್ಥ್ಯ ಕಾಮಿಡಿ, ಆಕ್ಷನ್ ಲವ್, ರೋಮ್ಯಾನ್ಸ್ ಆ ನಂತ್ರ ಅನ್ನೋದನ್ನ ಮರೆತ ಕೋಮಲ್ ಸತತ ಸೋಲುಗಳನ್ನ ಕಂಡಿದ್ದೂ ಇದೇ ಕಾರಣ ಅಂತಾರೆ ಸ್ಯಾಂಡಲ್ ವುಡ್ ಪಂಡಿತರು.

ಪ್ರಜ್ವಲ್ ಮಾಸ್ ಈಸ್ ಲಾಸ್
ಪ್ರಜ್ವಲ್ ದೇವರಾಜ್ ಚಾಕೋಲೇಟ್ ಫೇಸ್ ಹೀರೋ. ಕಾಲೇಜ್ ಬಾಯ್ ಕ್ಯಾರೆಕ್ಟರ್ ನ ಮೆರವಣಿಗೆ, ಸಿಕ್ಸರ್ ತರಹದ ಚಿತ್ರಗಳು ಪ್ರಜ್ವಲ್ ಗೆ ಸೂಟಾಗ್ತವೆ. ಚಾಕೋಲೇಟ್ ಫೇಸ್ ಇಟ್ಕೊಂಡು ಔಟ್ ಅಂಡ್ ಔಟ್ ಮಾಸ್ ಸಿನಿಮಾ ಮಾಡಿದ್ದು ಪ್ರೇಕ್ಷಕರಿಗೆ ಅಷ್ಟಾಗಿ ಇಷ್ಟವಾಗೋದಿಲ್ಲ ಅನ್ನೋ ಸತ್ಯ ಸ್ವತಃ ಪ್ರಜ್ವಲ್ ಗೆ ಅರಿವಾಗಿಲ್ಲವೇನೋ.

ಪ್ರೇಮ್ ಪಡ್ಕೋತಾರಾ?
ನಿರ್ದೇಶಕ ಪ್ರೇಮ್ ನಿರ್ದೇಶನಕ್ಕಿಂತ ನಟನೇನೇ ಇಷ್ಟ ಅಂದಿದ್ದಾರೆ. ಆದ್ರೆ ಪ್ರೇಕ್ಷಕರಿಗ್ಯಾಕೋ ಪ್ರೇಮ್ ಡೈರೆಕ್ಷನ್ನೇ ಇಷ್ಟ. ಆದ್ರೂ ಬ್ಯಾಕ್ ಟು ಬ್ಯಾಕ್ ಹೀರೋ ಆಗ್ತಿರೋ ಪ್ರೇಮ್ ಯಶಸ್ಸನ್ನ ಪಡ್ಕೋತಾರಾ?

ನಾಗಶೇಖರ್ ನಡ್ಕೋತಾರಾ?
ಗೆಲುವಿನ ಅರಮನೆ ಕಟ್ಟಿ ಮೂರ್ಮೂರು ಸಿನಿಮಾಗಳಲ್ಲಿ ಕಣ್ಣಿರು ಹಾಕಿಸಿ ಯಶಸ್ವಿಯಾದ ನಿರ್ದೇಶಕ ನಾಗಶೇಖರ್ ಕೂಡ ಆಕ್ಟಿಂಗೇ ಓಕೆ ಅಂತಿದ್ದಾರೆ. ಆದ್ರೆ ಸಿನಿಮಾಗಳು ಮಾತ್ರ ಹೊರಬರೋಕೇ ತಿಣುಕಾಡ್ತಿವೆ. ನಿರ್ದೇಶಕನಾಗಿ ಗೆದ್ದ ನಾಗಶೇಖರ್ ನಟನಾಗಿ ಗೆಲುವಿನ ಹಾದಿ ಹಿಡೀತಾರಾ? ಗೊತ್ತಿಲ್ಲ.

ಯೋಗಿ, ಕಿಟ್ಟಿ ಸೆಂಟಿಮೆಂಟ್ ಗಟ್ಟಿ
ರಮೇಶ್ ಅರವಿಂದ್ ನಂತರ ಮತ್ತೊಬ್ಬ ತ್ಯಾಗರಾಜ ಅನ್ನಿಸಿಕೊಂಡ ಶ್ರೀನಗರ ಕಿಟ್ಟಿ, ಲೂಸ್ ಮಾದ ಯೋಗಿ ಸೆಂಟಿಮೆಂಟ್ ಸಿನಿಮಾಗಳಲ್ಲೇ ಗೆದ್ದವರು. ಈ ನಟರು ಕೊನೆಯಲ್ಲಿ ಹೀರೋಯಿನ್ ಕಳೆದುಕೊಂಡು ಕಾಡೋ ಸಿನಿಮಾ ಮಾಡಿದ್ರೇನೇ ಸೂಪರ್.

ನಿರ್ಮಾಪಕ ನೀರುಪಾಲಾಗದಿದ್ರೆ ಸಾಕು
ಈ ಮಾತನ್ನ ಎಚ್ಚರಿಕೆಯ ಕಿವಿಮಾತಾಗಿ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಗಳು ತೆಗೆದುಕೊಂಡ್ರೆ ಒಳ್ಳೊಳ್ಳೆಯ ಸಿನಿಮಾಗಳು ಸಿನಿಪ್ರೇಮಿಗಳಿಗೆ ಸಿಕ್ತವೆ. ನಮ್ಮ ಫೇವರೀಟ್ ನಟರು ಎಡವೋದೇ ಇಲ್ಲಿ ಅವ್ರವ್ರ ಸಾಮರ್ಥ್ಯ, ದೌರ್ಬಲ್ಯ ಗೊತ್ತಿದ್ದೂ ಮತ್ತದನ್ನೇ ಮಾಡಿದ್ರೆ ಯಾರಿಗೆ ತಾನೆ ಇಷ್ಟ ಆಗುತ್ತೆ. ಆದ್ರೆ ಹೊಸತನಕ್ಕೆ ಬಹುಪರಾಕ್ ಹೇಳೋಕೆ ಹೋಗಿ ನಿರ್ಮಾಪಕ ನೀರುಪಾಲಾಗದಿದ್ರೆ ಸಾಕು.


Click it and Unblock the Notifications











