ಏಪ್ರಿಲ್ ತಿಂಗಳಲ್ಲಿ ಗೆದ್ದ ಮತ್ತು ಬಿದ್ದ ಚಿತ್ರಗಳು
ಏಪ್ರಿಲ್ 2013 ತಿಂಗಳು ಕನ್ನಡ ಚಿತ್ರರಂಗದ ಪಾಲಿಗೆ ಅಂತಹ ಆಶಾದಾಯಕ ತಿಂಗಳಾಗಿರಲಿಲ್ಲ. ಪೈಪೋಟಿಗೆ ಬಿದ್ದಂತೆ ಚಿತ್ರಗಳು ಬಿಡುಗಡೆಯಾದವು. ಬಂದಷ್ಟೇ ವೇಗದಲ್ಲಿ ರೀಲುಗಳು ನಿರ್ಮಾಪಕರ ಮತ್ತು ಹಂಚಿಕೆದಾರರ ಕೈಯಲ್ಲಿ ಸುಭದ್ರವಾಗಿ ಕೈಸೇರಿತು.
ಬೆಂಕಿ ಬಿರುಗಾಳಿ ಎನ್ನುವ ಚಿತ್ರದ ನಿರ್ಮಾಪಕನಿಂದಾಗಿ ನಾಯಕಿ ರಿಷಿಕಾ ಸಿಂಗ್ ಬಾಳಲ್ಲಿ ಬೆಂಕಿ ಬಿರುಗಾಳಿ ಎದ್ದಿದ್ದು ನೋವಿನ ವಿಚಾರ.
ಜನಪ್ರಿಯತೆಯ ಉತ್ತುಂಗದಲ್ಲಿರುವ ಕನ್ನಡದ ಎರಡು ರಿಯಾಲಿಟಿ ಶೋಗಳು, ಐಪಿಲ್ ಪಂದ್ಯಾವಳಿ, ಚುನಾವಣೆ ಮುಂತಾದ ಕಾರಣಗಳಿಂದಾಗಿ ಬೇಸಿಗೆ ರಜೆಯಿದ್ದರೂ ಜನ ಉತ್ತಮ ಚಿತ್ರಕ್ಕೂ ನಿರೀಕ್ಷಿತ ಮಟ್ಟದಲ್ಲಿ ಚಿತ್ರರಂಗದ ಕಡೆ ಬರುವ ಮನಸ್ಸು ಮಾಡುತ್ತಿಲ್ಲ.
ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾದ ಒಟ್ಟು ಚಿತ್ರಗಳ ಲೆಕ್ಕ 16. ಅದರಲ್ಲಿ ಪ್ರೇಕ್ಷಕರ ಕೊರತೆ ಅನುಭವಿಸುತ್ತಿರುವ ಚಿತ್ರಗಳನ್ನು ಪಟ್ಟಿ ಮಾಡುವುದಾದರೆ 10.
ಅವು ಯಾವುದೆಂದರೆ ಈ ಬಣ್ಣ ಲೋಕದಲಿ, ಆರ್ಯಾಸ್ ಲವ್, ಬೆಳಕಿನಡೆಗೆ, ಗಜೇಂದ್ರ, ಶ್ರೀ ಅಮರೇಶ್ವರ ಮಹಾತ್ಮೆ, ಜಟಾಯು, ಬೆಂಕಿ ಬಿರುಗಾಳಿ, ಮಾನಸ, ಅಕ್ಕಪಕ್ಕ, ಜನ್ಮ ಚಿತ್ರಗಳು.
ಇನ್ನು ಸೂಪರ್ ಹಿಟ್, ಎವರೇಜ್ ಹಿಟ್ ಆದ ಮತ್ತು ಕಲಾತ್ಮಕ ಚಿತ್ರಗಳು ಯಾವುದು - ಸ್ಲೈಡಿನಲ್ಲಿ ನೋಡಿ (ಇದು ನಿರ್ಮಾಪಕರು ನೀಡುವ ಬಾಕ್ಸ್ ಆಫೀಸ್ ವರದಿ ಆದರಿಸಿ ಬರೆದ ಲೇಖನವಲ್ಲ. ಚಿತ್ರಮಂದಿರದ ಮಾಲೀಕರು ಮತ್ತು ಚಿತ್ರರಂಗದ ಇತರ ಮೂಲಗಳಿಂದ ವರದಿ ಆದರಿಸಿ ಬರೆದ ಲೇಖನವಾಗಿದೆ)

ಅಂದರ್ ಬಾಹರ್
ಎಲ್ಲಾ ಕಡೆಯಿಂದ ಉತ್ತಮ ಪ್ರಶಂಶೆ ವ್ಯಕ್ತವಾಗಿದ್ದರೂ ಚಿತ್ರ ನಿರೀಕ್ಷಿದ ಮಟ್ಟಕ್ಕೆ ಏರಲಿಲ್ಲ. ಶಿವರಾಜ್ ಕುಮಾರ್ ಅವರ ಚಿತ್ರವೊಂದನ್ನು ಎರಡೇ ವಾರಕ್ಕೆ ಎತ್ತಂಗಡಿ ಮಾಡಿದ ಉದಾಹರಣೆ ಈ ಚಿತ್ರದ್ದು. ಆದರೆ ರಾಜ್ಯದ ಇತರಡೆ ಬೆಂಗಳೂರಿಗಿಂತ ಹೆಚ್ಚಿನ ಜನ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರವನ್ನು ಎವರೇಜ್ ಹಿಟ್ ಪಟ್ಟಿಗೆ ಸೇರಿಸಬಹುದು.

ಭಾರತ್ ಸ್ಟೋರ್
ಪಿ ಶೇಷಾದ್ರಿ ನಿರ್ದೇಶನದ ಸುಧಾರಾಣಿ, ಗುರುದತ್ ಮತ್ತು ದತ್ತಾತ್ರೇಯ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ 60ನೇ ರಾಷ್ಟ್ರೀಯ ಉತ್ತಮ ಚಿತ್ರ (ಕನ್ನಡ ಚಿತ್ರ ಕ್ಯಾಟಗರಿಯಲ್ಲಿ) ಪ್ರಶಸ್ತಿ ಪಡೆದಿತ್ತು.

ಬಚ್ಚನ್
ಸುದೀಪ್ ಅಭಿನಯದ ಮತ್ತು ಶಶಾಂಕ್ ನಿರ್ದೇಶನದ ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈಗಾಗಲೇ ನೀಡಿದ್ದೇವೆ. ಸೂಪರ್ ಹಿಟ್ ಕ್ಯಾಟಗರಿಗೆ ನಿಸ್ಸಂಶಯವಾಗಿ ಸೇರಿಸಬಹುದಾದ ಚಿತ್ರ.

ಪರಾರಿ
ಆ ದಿನಗಳು ಖ್ಯಾತಿಯ ಕೆ ಎಂ ಚೈತನ್ಯ ನಿರ್ದೇಶನದ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಶೃಂಗ, ಶ್ರವಂತ್, ಬುಲೆಟ್ ಪ್ರಕಾಶ್, ಶುಭಾ ಪೂಂಜಾ, ಜಾಹ್ನವಿ ಕಾಮತ್ ಮುಂತಾದವರಿದ್ದಾರೆ. ಚಿತ್ರದ ಕಲೆಕ್ಷನ್ ಆರಕ್ಕೇರದೆ ಮೂರಕ್ಕಿಳಿಯದೆ ಎವರೇಜ್ ಆಗಿದೆ ಎನ್ನುವ ವರ್ತಮಾನವಿದೆ.

ಕೂರ್ಮಾವತಾರ
ಗಿರೀಶ್ ಕಾಸರವಳ್ಳಿ ನಿರ್ದೇಶನದ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಡಾ. ಶಿಕಾರಿಪುರ, ಜಯಂತಿ, ಅಪೂರ್ವ ಕಾಸರವಳ್ಳಿ ಮುಂತಾದವರಿದ್ದಾರೆ.

ಛತ್ರಿಗಳು ಸಾರ್ ಛತ್ರಿಗಳು
ಎಸ್ ನಾರಾಯಣ್ ನಿರ್ದೇಶನದ ರಮೇಶ್ ಅರವಿಂದ್, ಮೋಹನ್, ಉಮಾಶ್ರೀ ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರ ಎವರೇಜ್ ಕಲೆಕ್ಷನ್ ಮಾಡುತ್ತಿದೆ. ಮುಖ್ಯವಾಗಿ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಭಾಗದಲ್ಲಿ ಚಿತ್ರ ಭರ್ಜರಿ ಅಲ್ಲದಿದ್ದರೂ ಉತ್ತಮ ಪ್ರದರ್ಶನ ಕಾಣುತ್ತಿದೆ.


Click it and Unblock the Notifications











