Don't Miss!
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡದಲ್ಲಿ ಬಂದ ಹಾರರ್ ಸಿನಿಮಾಗಳಲ್ಲಿ ಗೆದ್ದದೆಷ್ಟು?
ಹಾರರ್ ಸಿನಿಮಾಗಳು ಎಂದಾಕ್ಷಣ ನಮಗೆ ಥಟ್ಟಂತ ನೆನಪಿಗೆ ಬರುವುದು ಹಾಲಿವುಡ್ ಚಿತ್ರಗಳು. ಅಲ್ಲಿ ತೆರೆಕಂಡಷ್ಟು ಹಾರರ್ ಸಿನಿಮಾಗಳು ಇತರ ಯಾವ ಭಾಷೆಯಲ್ಲೂ ಬಂದಿರಲಿಕ್ಕಿಲ್ಲ.
ಬಾಲಿವುಡ್ ನಲ್ಲಿ ಹಾರರ್ ಸಿನಿಮಾ ನಿರ್ಮಿಸುವುದರಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಎತ್ತಿದ ಕೈ. ಅವರ ಹಾರರ್ ಪಟ್ಟಿ ಸಿನಿಮಾಗಳಲ್ಲಿ ಕೆಲವು ಗೆದ್ದಿದ್ದರೆ ಇನ್ನು ಕೆಲವು ಮಟಾಶ್ ಆಗಿದ್ದವು.
ಕಡಿಮೆ ಬಜೆಟಿನಲ್ಲಿ, ಉತ್ತಮ ಕ್ಯಾಮೆರಾ ಮತ್ತು ಹಿನ್ನಲೆ ಸಂಗೀತದ ಮೂಲಕವೂ ಹಾರರ್ ಸಿನಿಮಾ ತೆಗೆಯ ಬಹುದು ಎನ್ನುವುದನ್ನು ವರ್ಮಾ ತೋರಿಸಿ ಕೊಟ್ಟಿದ್ದರು.
ಕನ್ನಡದಲ್ಲೂ ಸಾಕಷ್ಟು ಹಾರರ್ ಸಿನಿಮಾಗಳು ಬಂದಿವೆ. ಆತ್ಮಗಳ ಪ್ರೇಮ ಸಲ್ಲಾಪ, ಆತ್ಮಗಳ ಪ್ರತೀಕಾರ, ಮನೋ ವೈಜ್ಞಾನಿಕ, ಭೂತ ಪಿಶಾಚಿಗಳ, ಮಾಟಮಂತ್ರ, ವಶೀಕರಣ ಮುಂತಾದವುಗಳನ್ನು ಆಧರಿಸಿ ಚಿತ್ರಗಳು ಬಂದಿವೆ.
ಕನ್ನಡದಲ್ಲಿ ಬಂದ ಪ್ರಮುಖ ಹಾರರ್ ಸಿನಿಮಾಗಳು
ನಾ ನಿನ್ನ ಬಿಡಲಾರೆ
1979ರಲ್ಲಿ ಬಿಡುಗಡೆಯಾದ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಅನಂತನಾಗ್, ಲಕ್ಷ್ಮಿ, ಕೆ ಎಸ್ ಅಶ್ವಥ್, ಬಾಲಕೃಷ್ಣ, ಲೀಲಾವತಿ ಇದ್ದರು. ವಿಜಯ್ ನಿರ್ದೇಶಿಸಿದ್ದ ಈ ಚಿತ್ರಕ್ಕೆ ರಾಜನ್ - ನಾಗೇಂದ್ರ ಅವರ ಸಂಗೀತವಿತ್ತು. ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಭಾರೀ ಸದ್ದು ಮಾಡಿತ್ತು.
ನಿಗೂಢ ರಹಸ್ಯ
ಶಂಕರನಾಗ್, ಗೀತಾ, ಕೆ ಎಸ್ ಅಶ್ವಥ್, ವನಿತಾ ವಾಸು, ರಮೇಶ್ ಭಟ್ ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. 1990ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಪೇರಲ ನಿರ್ದೇಶಿಸಿದ್ದರು ಮತ್ತು ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದಾರೆ.
ಅಪರಿಚಿತ
ಕಾಶೀನಾಥ್ ನಿರ್ದೇಶನದ ಈ ಚಿತ್ರದಲ್ಲಿ ಸುರೇಶ್ ಹೆಬ್ಳೀಕರ್, ಶೋಭಾ, ವಾಸುದೇವ ರಾವ್ ಪ್ರಮುಖ ಭೂಮಿಕೆಯಲ್ಲಿದ್ದರು. ಎಲ್ ವೈದ್ಯನಾಥನ್ ಸಂಗೀತ ನೀಡಿದ್ದ ಈ ಚಿತ್ರ ಯಶಸ್ಸು ಸಾಧಿಸಿತ್ತು.
ಶ್
ರಿಯಲ್ ಸ್ಟಾರ್ ಉಪೇಂದ್ರ ಅವರು ಚಿತ್ರಕಥೆ ಹಣೆದು, ನಿರ್ದೇಶಿಸಿದ್ದ ಈ ಚಿತ್ರ 1993ರಲ್ಲಿ ಬಿಡುಗಡೆಯಾಗಿತ್ತು. ಕುಮಾರ್ ಗೋವಿಂದ್, ಕಾಶೀನಾಥ್, ಸುರೇಶ್ ಹೆಬ್ಳೀಕರ್, ಮೇಘಾ, ಬ್ಯಾಂಕ್ ಜನಾರ್ಧನ್ ಪ್ರಮುಖ ತಾರಾಗಣದಲ್ಲಿದ್ದ ಈ ಚಿತ್ರಕ್ಕೆ ಸಾಧು ಕೋಕಿಲ ಸಂಗೀತ ನೀಡಿದ್ದರು. ಸಾಧು ಸಂಗೀತ ನಿರ್ದೇಶಕರಾದ ಮೊದಲ ಚಿತ್ರವಿದು. ಈ ಚಿತ್ರ ಕೂಡಾ ಭರ್ಜರಿ ಯುಶಸ್ಸು ಕಂಡಿತ್ತು.
ಯಾರದು
ಶ್ರೀನಿವಾಸ್ ಕೌಶಿಕ್ ನಿರ್ದೇಶನದ ಈ ಚಿತ್ರದಲ್ಲಿ ಲೀಲಾವತಿ, ವಿನೋದ್ ರಾಜ್ ಇದ್ದರು. ಅಕ್ಟೋಬರ್ 2009ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಬಿಡಲಾರೆ ಎಂದೂ ನಿನ್ನ
ಉಮೇಶ ಬಾದರದಿನ್ನಿ ನಿರ್ದೇಶನದ ಈ ಚಿತ್ರದಲ್ಲಿ ನವೀನ್ ಕೃಷ್ಣ , ಜೈಜಗದೀಶ್, ಭೂಮಿಕಾ ಛಾಬ್ರಿಯಾ, ಸ್ವಾತಿ, ರಾಜು ತಾಳಿಕೋಟೆ ಇದ್ದಾರೆ. ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಸೋತಿತ್ತು.
ಆಪ್ತಮಿತ್ರ
ಪಿ ವಾಸು ನಿರ್ದೇಶಿಸಿದ್ದ, ದ್ವಾರಕೀಶ್ ನಿರ್ಮಾಣದ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಡಾ. ವಿಷ್ಣುವರ್ಧನ್, ಸೌಂದರ್ಯ, ರಮೇಶ್ ಅರವಿಂದ್, ಪ್ರೇಮಾ, ಅವಿನಾಶ್, ದ್ವಾರಕೀಶ್, ಸತ್ಯಜಿತ್ ಇದ್ದಾರೆ. ಗುರುಕಿರಣ್ ಸಂಗೀತ ಈ ನೀಡಿದ್ಡ ಈ ಚಿತ್ರ ಗಲ್ಲಾಪೆಟ್ಟಿಗೆ ಲೂಟಿ ಮಾಡಿತ್ತು.
ಆಪ್ತರಕ್ಷಕ
ಕೃಷ್ಣ ಪ್ರಜ್ವಲ್ ನಿರ್ಮಿಸಿದ್ದ ಈ ಚಿತ್ರವನ್ನು ಪಿ ವಾಸು ನಿರ್ದೇಶಿಸಿದ್ದರು. ಡಾ. ವಿಷ್ಣು, ವಿಮಲಾ ರಾಮನ್, ಸಂಧ್ಯಾ, ಲಕ್ಷ್ಮಿ ಗೋಪಾಲಸ್ವಾಮಿ, ಕೋಮಲ್ ಕುಮಾರ್, ಅವಿನಾಶ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದರು. ಈ ಚಿತ್ರ ಕೂಡಾ ಸೂಪರ್ ಹಿಟ್ ಆಗಿತ್ತು.
ಮೋಹಿನಿ 9886788888
ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಆದಿತ್ಯ, ಸದಾ ಪ್ರಮುಖ ಭೂಮಿಕೆಯಲ್ಲಿದ್ದರು. ಹಂಸಲೇಖ ಸಂಗೀತ ನೀಡಿದ್ದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸಾಧಾರಣ ಯಶಸ್ಸು ಕಂಡಿತ್ತು.
ಚಾರುಲತಾ
ಪಿ ಕುಮಾರನ್ ನಿರ್ದೇಶನದ ಈ ಚಿತ್ರವನ್ನು ದ್ವಾರಕೀಶ್ ನಿರ್ಮಿಸಿದ್ದರು. ಪ್ರಿಯಾಮಣಿ, ಸ್ಕಂದ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಸುಂದರ್ ಸಿ ಬಾಬು ಸಂಗೀತ ನೀಡಿದ್ದರು. ಚಿತ್ರ ಸಾಧಾರಣ ಯಶಸ್ಸು ಕಂಡಿತ್ತು.
12AM ಮಧ್ಯರಾತ್ರಿ
ಕಾರ್ತಿಕ್ ನಿರ್ದೇಶನದ ಈ ಚಿತ್ರ ಆಗಸ್ಟ್ 2012ರಲ್ಲಿ ಬಿಡುಗಡೆಯಾಗಿತ್ತು. ಅಭಿಮನ್ಯು, ದಿವ್ಯಾ ಶ್ರೀಧರ್, ಕಾಶೀನಾಥ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ನೀಡಿದ್ದರು. ಈ ಚಿತ್ರ ಗಲ್ಲಾಪೆಟ್ಟಿಗೆ ಸದ್ದು ಮಾಡುವಲ್ಲಿ ಯಶಸ್ವಿಯಾಗಿತ್ತು.
ವಿಜಲ್
ತಮಿಳಿನ ಪಿಜ್ಜಾ ಚಿತ್ರದ ರಿಮೇಕ್. ಪ್ರಶಾಂತ್ ರಾಜ್ ನಿರ್ದೇಶನದ ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ, ಪ್ರಣೀತಾ, ಗುರುಪ್ರಸಾದ್ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಚಿತ್ರಕ್ಕೆ ಜೋಸ್ವಾ ಶ್ರೀಧರ್ ಸಂಗೀತ ನೀಡಿದ್ದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸಾಧಾರಣ ಯಶಸ್ಸು ಕಂಡಿತ್ತು.
ಕಲ್ಪನಾ
ತಮಿಳಿನ ಕಾಂಚನ ಚಿತ್ರದ ರಿಮೇಕ್. ರಾಮ್ ನಾರಾಯಣ್ ನಿರ್ದೇಶಿದ್ದ ಈ ಚಿತ್ರ 2012ರಲ್ಲಿ ಬಿಡುಗಡೆಯಾಗಿತ್ತು. ಉಪೇಂದ್ರ, ಸಾಯಿಕುಮಾರ್, ಲಕ್ಷ್ಮಿರೈ, ಉಮಾಶ್ರೀ, ಶೃತಿ, ಅಚ್ಯುತ್ ಕುಮಾರ್, ಶೋಭರಾಜ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದ್ದರು. ಉಪೇಂದ್ರ ಮತ್ತು ಸಾಯಿಕುಮಾರ್ ಅಭಿನಯದ ವ್ಯಾಪಕ ಪ್ರಶಂಸೆಗೆ ಒಳಗಾಗಿತ್ತು. ಈ ಚಿತ್ರ ಕೂಡಾ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿತ್ತು.
ಜಯಮ್ಮನ ಮಗ
ಆರ್ ವಿಕಾಸ್ ನಿರ್ದೇಶನದ ಈ ಚಿತ್ರದಲ್ಲಿ ದುನಿಯಾ ವಿಜಯ್, ಡಾ ಭಾರತಿ, ಕಲ್ಯಾಣಿ ರಾಜು, ಉದಯ್, ರಂಗಾಯಣ ರಘು ಪ್ರಮುಖ ಭೂಮಿಕೆಯಲ್ಲಿದ್ದರು. ಅರ್ಜುನ್ ಜನ್ಯಾ ಸಂಗೀತ ನೀಡಿದ್ದ ಈ ಚಿತ್ರ ಸೂಪರ್ ಹಿಟ್ ಆಗಿತ್ತು.
6-5=2
ಕನ್ನಡ ಬಾಕ್ಸಾಫೀಸ್ ನಲ್ಲಿ ಹೊಸ ಟ್ರೆಂಡ್ ಹುಟ್ಟು ಹಾಕಿದ ಹೊಸಬರ ಪ್ರಯತ್ನ. ಕೆ ಎಸ್ ಅಶೋಕ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ಅಪೂರ್ವ, ಕೃಷ್ಣ ಪ್ರಕಾಶ್, ವಿಜಯ್ ಚೆಂಡೂರ್, ಪಲ್ಲವಿ, ತನುಜ, ಮೃತ್ಯುಂಜಯ ಇದ್ದಾರೆ. ಚಿತ್ರ ಬಾಕ್ಸಾಫೀಸ್ ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ.
ಆಕ್ರಮಣ
ಕನ್ನಡದ ಮೊದಲ 3D ಹಾರರ್ ಚಿತ್ರ. ಪ್ರಶಾಂತ್ ಕುಮಾರ್ ನಿರ್ದೇಶನದ ಈ ಚಿತ್ರ ಇನ್ನೂ ಬಿಡುಗಡೆಯಾಗ ಬೇಕಷ್ಟೇ. ರಘು ಮುಖರ್ಜಿ, ಡೈಸಿ ಶಾ, ಮಕರಂದ್ ದೇಶಪಾಂಡೆ, ಅವಿನಾಶ್ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.