ನಟ ಯೋಗೇಶ್ 'ಅಂಬರ'ಕ್ಕೆ ಏಣಿ ಹಾಕುವ ಸಮಯ
ಹಲವಾರು ಸಂಕಷ್ಟಗಳನ್ನು ಎದುರಿಸಿರುವ 'ಅಂಬರ' ಚಿತ್ರ ಕಡೆಗೂ ಕಣ್ಬಿಡುತ್ತಿದೆ. ಈ ಚಿತ್ರದ ಸಹಾಯಕ ಕಲಾ ನಿರ್ದೇಶಕ ಸದಾಶಿವಯ್ಯ ಚಿತ್ರೀಕರಣದ ವೇಳೆ ಗಂಗಾನದಿಯಲ್ಲಿ ಬಿದ್ದು ಕೊಚ್ಚಿಕೊಂಡು ಹೋಗಿದ್ದರು. ಇತ್ತೀಚೆಗೆ ಈ ಚಿತ್ರದ ಸ್ಟಿಲ್ ಫೋಟೋಗ್ರಾಫರ್ ಬಸವರಾಜ್ ಕ್ಯಾನ್ಸರ್ ಗೆ ಬಲಿಯಾಗಿದ್ದರು.
ಇಷ್ಟೆಲ್ಲಾ ದುರಂತಗಳನ್ನು ಅನುಭವಿಸಿದ ಚಿತ್ರ ಈಗ ಬಿಡುಗಡೆಯಾಗುತ್ತಿದೆ. ಇದೇ ವಾರ (ನ.15) ಲೂಸ್ ಮಾದ ಯೋಗೇಶ್ ಹಾಗೂ ಭಾಮಾ ಮುಖ್ಯಭೂಮಿಕೆಯಲ್ಲಿರುವ ಅಂಬರ ಚಿತ್ರ ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಯೋಗಿ ಕಾಲೇಜು ವಿದ್ಯಾರ್ಥಿ ಕಮ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಕಾಣಿಸುತ್ತಿದ್ದಾರೆ.
"ಯೋಗಿ ಇಮೇಜ್ಗೆ ತಕ್ಕಂತೆ ಕಥೆ ಮಾಡಿದ್ದೇನೆ. ಕಾಮಿಡಿ, ಆಕ್ಷನ್, ಪ್ರೀತಿ ಎಲ್ಲವೂ ಇದೆ. ಕಣ್ಣ ಮುಂದೆ ನಡೆದ ನಿಜ ಘಟನೆಗಳನ್ನು ಆಧರಿಸಿಯೇ ಬಹುತೇಕ ಕಥೆಯನ್ನು ಬರೆಯಲಾಗಿದೆ. ಈ ಚಿತ್ರ ಪ್ರೇಕ್ಷಕರಿಗೆ ಪಕ್ಕಾ ಮನರಂಜನೆ ನೀಡಲಿದೆ" ಎಂದಿದ್ದಾರೆ ನಿರ್ದೇಶಕ ಸೇನ್ ಪ್ರಕಾಶ್.ಸಾಧುಕೋಕಿಲಾ, ತಿಲಕ್, ವಿಶ್ವ, ಬ್ಯಾಂಕ್ ಜನಾರ್ದನ್, ರಾಮಕೃಷ್ಣ, ಜೈಜಗದೀಶ್, ಪದ್ಮಾವಾಸಂತಿ, ಹರೀಶ್ ರಾಜ್, ವಿನಾಯಕ ಜೋಶಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಸೇನ್ ಪ್ರಕಾಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ 'ಅಂಬರ'ಕ್ಕೆ ನಾಗರಾಜ್ ಕೋಟೆ ಸಂಭಾಷಣೆ ಬರೆದಿದ್ದಾರೆ. ಅಭಿಮಾನ್ ರಾಯ್ ಸಂಗೀತ ನಿರ್ದೇಶನ, ಸಿನಿಟೆಕ್ ಸೂರಿ ಛಾಯಾಗ್ರಹಣ, ರವಿಕುಮಾರ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ, ಯೋಗರಾಜ್ ಭರಣಿ ಸಹ ನಿರ್ದೇಶನ, ಅನಿಲ್ ಕುಮಾರ್ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರಕ್ಕೆ ರಾಜು ಸಹ ನಿರ್ಮಾಪಕರಾಗಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












