ಏಪ್ರಿಲ್ ನಲ್ಲಿ ಪ್ರೇಮ್-ಅಮೂಲ್ಯ 'ಮಳೆ' ಆರ್ಭಟ
ಯುಗಾದಿ ಹಬ್ಬ ಮುಗೀತು. ಇನ್ನೇನಿದ್ದರೂ ಬಿರು ಬೇಸಿಗೆ ಕಾಲ. ಉರಿ ಬಿಸಿಲಿನ ತಾಪದಿಂದ ನೀವೆಲ್ಲಾ ಸ್ವಲ್ಪ ತಣ್ಣಗಾಗಲಿ ಅಂತ ಸ್ಯಾಂಡಲ್ ವುಡ್ ನಲ್ಲಿ 'ಮಳೆ'ಗಾಲಕ್ಕೆ ಚಾಲನೆ ನೀಡುತ್ತಿದ್ದಾರೆ ನಿರ್ದೇಶಕ ಆರ್.ಚಂದ್ರು.
ಹೌದು, ಕಳೆದ ಒಂದು ವರ್ಷದಿಂದ ಅದ್ಧೂರಿಯಾಗಿ ರೆಡಿಯಾಗುತ್ತಿರುವ 'ಮಳೆ' ಸಿನಿಮಾ ಇದೀಗ ರಿಲೀಸ್ ಗೆ ಸಿದ್ದವಾಗಿದೆ. ಎಲ್ಲವೂ ಪ್ಲಾನ್ ಪ್ರಕಾರ ನಡೆದರೆ, ಏಪ್ರಿಲ್ 9 ರಂದು ಕರ್ನಾಟಕ ರಾಜ್ಯಾದ್ಯಂತ 'ಮಳೆ' ಅಬ್ಬರ ಶುರುವಾಗಲಿದೆ.
'ಲವ್ಲಿ ಸ್ಟಾರ್' ಪ್ರೇಮ್ ಮತ್ತು 'ಚಿತ್ತಾರದ ಬೆಡಗಿ' ಅಮೂಲ್ಯ ಮೊದಲ ಬಾರಿಗೆ ಜೋಡಿಯಾಗಿ ನಟಿಸಿರುವ ಸಿನಿಮಾ 'ಮಳೆ'. ಹಿಂದೆಂದಿಗಿಂತಲೂ ಸೂಪರ್ ಸ್ಟೈಲಿಶ್ ಲುಕ್ ನಲ್ಲಿ ನಟ ಪ್ರೇಮ್ ಕಾಣಿಸಿಕೊಂಡಿರುವ ಕಾರಣ 'ಮಳೆ' ಚಿತ್ರದಿಂದ 'ಸ್ಟೈಲಿಶ್ ಸ್ಟಾರ್' ಬಿರುದನ್ನೂ ಪಡೆದುಕೊಂಡಿದ್ದಾರೆ.

ಟ್ರ್ಯಾವೆಲಿಂಗ್ ಲವ್ ಸ್ಟೋರಿಯಾಗಿರುವ 'ಮಳೆ' ಸಿನಿಮಾ, ಹೆಸರೇ ಸೂಚಿಸುವಂತೆ ಬಹುತೇಕ ಮಳೆಯಲ್ಲೇ ಚಿತ್ರೀಕರಣಗೊಂಡಿದೆ. ಅದರಲ್ಲೂ ಒಂದು ಹಾಡಿಗೆ 15 ಟ್ಯಾಂಕರ್ ನೀರನ್ನ ಬಳಸಿಕೊಂಡಿರುವುದು 'ಮಳೆ' ಚಿತ್ರದ ದಾಖಲೆ.
ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ಮಾಣದ ಹೊಣೆ ಹೊತ್ತಿರುವ ಆರ್.ಚಂದ್ರು ನಿರ್ದೇಶನದ ಜವಾಬ್ದಾರಿಯನ್ನ ಅವರ ಶಿಷ್ಯ ತೇಜಸ್ ಹೆಗಲಿಗೆ ಹಾಕಿದ್ದಾರೆ. ಅನೇಕ ಚಿತ್ರಗಳಲ್ಲಿ ಆರ್.ಚಂದ್ರುಗೆ ಸಹಾಯಕ ನಿರ್ದೇಶಕರಾಗಿದ್ದ ತೇಜಸ್, 'ಮಳೆ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ['ಮಳೆ' ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ]
ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನದ ಹಾಡುಗಳು ಈಗಾಗಲೇ ಹಿಟ್ ಆಗಿವೆ. ಆರ್.ಚಂದ್ರು ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ 'ಮಳೆ' ಏಪ್ರಿಲ್ 9 ರಿಂದ ಶುರುವಾಗಲಿದೆ. 'ಮಳೆ'ಯಲಿ...ಜೊತೆಯಲಿ...ನೆನೆಯುವುದಕ್ಕೆ ನೀವು ರೆಡಿಯಾಗಿ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











