ಈ ಬಾರಿ ಹುಟ್ಟುಹಬ್ಬ ಬೇಡ ಅಂದ್ರು ಲವ್ಲಿ ಸ್ಟಾರ್ ಪ್ರೇಮ್
ಲವ್ಲಿ ಸ್ಟಾರ್, ಸ್ಟೈಲಿಶ್ ಸ್ಟಾರ್ ಪ್ರೇಮ್ ಅಭಿಮಾನಿಗಳಿಗೆ ಈ ಬಾರಿ ಕೊಂಚ ನಿರಾಸೆ ಕಾದಿದೆ. ಪ್ರತಿ ವರ್ಷ ಪ್ರೇಮ್ ತಮ್ಮ ಹುಟ್ಟುಹಬ್ಬವನ್ನು ಅರ್ಥವತ್ತಾಗಿ ಆಚರಿಸಿಕೊಂಡು ಅಭಿಮಾನಿಗಳೊಂದಿಗೆ ಸಂಭ್ರಮಿಸುತ್ತಿದ್ದರು. ಈ ಬಾರಿ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಇದಕ್ಕೆ ತಾರ್ಕಿಕ ಕಾರಣವೂ ಇದೆ.
ಏಪ್ರಿಲ್ 18ರಂದು ಕರ್ನಾಟಕ ಬಂದ್. ಇದೇ ದಿನ ಪ್ರೇಮ್ ಅವರ ಹುಟ್ಟುಹಬ್ಬದ ದಿನವೂ ಹೌದು. ಪ್ರೇಮ್ 38ನೇ ವರ್ಷಕ್ಕೆ ಅಡಿಯಿಡುತ್ತಿದ್ದಾರೆ. ಆದರೆ ಅವರು ಬಂದ್ ಗೆ ಬೆಂಬಲ ಸೂಚಿಸಿದ್ದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.

ಬೆಂಗಳೂರು, ಕೋಲಾರ ಮತ್ತು ಇನ್ನಿತರ ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಮೇಕೆದಾಟಿನಲ್ಲಿ ಕರ್ನಾಟಕ ಸರ್ಕಾರ ಕೈಗೆತ್ತಿಕೊಂಡಿರುವ ಅಣೆಕಟ್ಟು ಯೋಜನೆ ಇದಾಗಿದ್ದು, ಇಡೀ ಕನ್ನಡ ಚಿತ್ರೋದ್ಯಮ ಈ ಮಹತ್ವಾಕಾಂಕ್ಷಿ ಯೋಜನೆಗೆ ಬೆಂಬಲ ವ್ಯಕ್ತಪಡಿಸಿದೆ. ಈ ಯೋಜನೆಗೆ ತಮಿಳುನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. [ಏ. 18ರಂದು ಸ್ಯಾಂಡಲ್ ವುಡ್ ಚಿತ್ರೋದ್ಯಮ ಬಂದ್]
ನಟ ಪ್ರೇಮ್ ಅವರು ಈ ಹೋರಾಟಕ್ಕೆ ಕೈ ಜೋಡಿಸಿದ್ದು, ಮೇಕೆದಾಟು ಯೋಜನೆಗೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ರಾಜ್ಯದ ಜನತೆಗೆ ಅವಶ್ಯಕವಾಗಿರುವ ಕುಡಿಯುವ ನೀರನ್ನು ಕಲ್ಪಿಸಲು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಯೋಜನೆ ಮೇಕೆದಾಟು ಅಣೆಕಟ್ಟು ಯೋಜನೆ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಇತರೆ ಅಂಗಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಚಿತ್ರೋದ್ಯಮದ ಗಣ್ಯರು ಸಭೆ ಸೇರಿ, ಕನ್ನಡ ನಾಡಿನ ನೆಲ, ಜಲ, ಭಾಷೆಯ ವಿಷಯದಲ್ಲಿ ಯಾವುದೇ ಅನ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಅದನ್ನು ಪ್ರತಿಭಟಿಸುವ ಕೆಲಸದಲ್ಲಿ ಚಲನಚಿತ್ರರಂಗವು ಈ ಹಿಂದಿನಿಂದಲೂ ಭಾಗವಹಿಸಿರುವುದರಿಂದ ಈಗಲೂ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಲು ತೀರ್ಮಾನಿಸಿವೆ.
ಆದ್ದರಿಂದ ಏಪ್ರಿಲ್ 18ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ತನಕ ಚಲನಚಿತ್ರ ಚಿತ್ರೀಕರಣ, ಪ್ರದರ್ಶನ ಹಾಗೂ ಚಿತ್ರೋದ್ಯಮಕ್ಕೆ ಸಂಬಂಧಪಟ್ಟ ಎಲ್ಲಾ ಕಾರ್ಯಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತವಾಗಲಿವೆ. ಬಂದ್ ಗೆ ಬೆಂಬಲ ಸೂಚಿಸುವ ಮೂಲಕ ಯಶಸ್ವಿಗೊಳಿಸಿಕೊಡಬೇಕೆಂದು ಚಿತ್ರೋದ್ಯಮಕ್ಕೆ ವಾಣಿಜ್ಯ ಮಂಡಳಿ ಮನವಿ ಮಾಡಿದೆ. (ಏಜೆನ್ಸೀಸ್)


Click it and Unblock the Notifications











