ಆಸ್ಕರ್ ಪ್ರಶಸ್ತಿ ಸ್ಪರ್ಧೆಯಲ್ಲಿ ಲೂಸಿಯಾ, ರಾಯಣ್ಣ
ಕನ್ನಡ ಚಿತ್ರಗಳು ಆಸ್ಕರ್ ನಂತಹ ಪ್ರತಿಷ್ಠಿತ ಪ್ರಶಸ್ತಿಗೆ ನಾಮಿನೇಟ್ ಆಗುವುದು ಕನಸಿನ ಮಾತು. ಅಂತಹದರಲ್ಲಿ ಎರಡು ಕನ್ನಡ ಚಿತ್ರಗಳು ಆಸ್ಕರ್ ಪ್ರಶಸ್ತಿಗೆ ಸ್ಪರ್ಧಿಸಲು ಹೊರಟಿವೆ. ಅವು ಒಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಹಾಗೂ ಇನ್ನೊಂದು ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಲೂಸಿಯಾ' ಚಿತ್ರ.
ಆಸ್ಕರ್ ಪರಭಾಷಾ ಚಿತ್ರಗಳ ವಿಭಾಗಕ್ಕೆ ಭಾರತದಿಂದ ಆಯ್ಕೆಯಾಗಿರುವ 20 ಚಿತ್ರಗಳಲ್ಲಿ 'ಲೂಸಿಯಾ' ಹಾಗೂ 'ರಾಯಣ್ಣ' ಚಿತ್ರಗಳಿಗೂ ಸ್ಥಾನಸಿಕ್ಕಿದೆ ಎಂಬ ಸುದ್ದಿ ಹೊಗೆಯಾಡುತ್ತಿದೆ. ಸೆಪ್ಟೆಂಬರ್ 17ರಂದು ಫಿಲಂ ಫೆಡರೇಷನ್ ಆಫ್ ಇಂಡಿಯಾ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.
ಕನ್ನಡ ಚಿತ್ರಗಳು ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿರುವ ಕಾರಣ ಇಡೀ ಜಗತ್ತಿಗೆ ನಮ್ಮ ಚಿತ್ರಗಳ ಬಗ್ಗೆ ಗೊತ್ತಾಗುತ್ತದೆ ಎನ್ನುತ್ತಾರೆ ರಾಯಣ್ಣ ಚಿತ್ರದ ನಿರ್ದೇಶಕ ನಾಗಣ್ಣ. ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗುವುದಕ್ಕೆ ಹರಸಾಹಸ ಪಡಬೇಕು. ಪ್ರಶಸ್ತಿ ಗೆಲ್ಲಲು ಸಾಕಷ್ಟು ತೀವ್ರ ಸ್ಪರ್ಧೆ ಎದುರಿಸಬೇಕಾಗುತ್ತದೆ ಎನ್ನುತ್ತಾರೆ 'ಲೂಸಿಯಾ' ನಿರ್ದೇಶಕ ಪವನ್ ಕುಮಾರ್.
ದರ್ಶನ್ ಅಭಿನಯದ ಐತಿಹಾಸಿಕ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' (ಚಿತ್ರ ವಿಮರ್ಶೆ ಓದಿ) ಮೂರು ನೂರು ದಿನಗಳ ಪ್ರದರ್ಶನ ಕಂಡಿದೆ. ಭಾರಿ ಬಜೆಟ್ ನಲ್ಲಿ ಆನಂದ್ ಬಿ ಅಪ್ಪುಗೋಳ್ ಅವರು ನಿರ್ಮಿಸಿದ ಈ ಚಿತ್ರ ಟ್ರಿಪಲ್ ಸೆಂಚುರಿ ಭಾರಿಸಿದೆ. ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರವು 300 ದಿನಗಳ ಗಡಿದಾಟಿ ಮುನ್ನುಗ್ಗಿದೆ. ಇನ್ನೊಂದು ಮುಖ್ಯ ವಿಚಾರ ಅಂದರೆ ಈ ಚಿತ್ರವನ್ನು ಭಾರತದ 18 ಭಾಷೆಗಳಿಗೆ ಡಬ್ ಮಾಡಲಾಗುತ್ತಿದೆ.
'ಲೂಸಿಯಾ' (ಚಿತ್ರ ವಿಮರ್ಶೆ ಓದಿ) ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆಡಿಯನ್ಸ್ ಫಿಲಂಸ್ & ಹೋಮ್ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರ 'ಲೂಸಿಯಾ'. ಪವನ್ ಕುಮಾರ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಸಿದ್ಧಾರ್ಥ್ ನುನಿ ಅವರ ಛಾಯಾಗ್ರಹಣವಿದೆ. (ಏಜೆನ್ಸೀಸ್)


Click it and Unblock the Notifications











