ಸ್ಟಂಟ್ ಮಾಸ್ಟರ್ ರವಿವರ್ಮನ ಇನ್ನೊಂದು ಸ್ಟಂಟ್ ಬಹಿರಂಗ.!
ಕನ್ನಡ ಚಿತ್ರರಂಗದಲ್ಲಿ ಆಗಬಾರದ್ದು ಆಗಿ ಮೂರು ದಿನ ಕಳೆದಿದೆ. 'ಮಾಸ್ತಿ ಗುಡಿ' ಚಿತ್ರತಂಡ ಮಾಡಿದ ದೊಡ್ಡ ಎಡವಟ್ಟಿಗೆ ಇಬ್ಬರು ಕಲಾವಿದರು ಬಲಿಯಾಗಿದ್ದಾರೆ. ಅವರ ಕುಟುಂಬದವರು ದುಃಖದ ಮಡುವಿನಲ್ಲಿ ಮುಳುಗುವಂತಾಗಿದೆ.
ತಪ್ಪಿನ ಬಗ್ಗೆ ಅರಿವಿದ್ದರೂ, ಮೂರು ದಿನಗಳ ಕಾಲ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ನಟ ಅನಿಲ್ ಹಾಗೂ ಉದಯ್ ಮೃತದೇಹದ ಶೋಧ ಕಾರ್ಯದಲ್ಲಿ ನಟ ದುನಿಯಾ ವಿಜಯ್ ತೊಡಗಿದ್ದರು. 'ಮಾಸ್ತಿ ಗುಡಿ' ನಿರ್ದೇಶಕ ನಾಗಶೇಖರ್ ಮತ್ತು ನಿರ್ಮಾಪಕ ಸುಂದರ್ ಗೌಡ ಈಗಾಗಲೇ ಅರೆಸ್ಟ್ ಆಗಿದ್ದಾರೆ. ['ಮಾಸ್ತಿಗುಡಿ' ಸಾಹಸ ನಿರ್ದೇಶಕ ರವಿವರ್ಮಗೆ ಜಗ್ಗೇಶ್ ಛೀಮಾರಿ]
ಆದ್ರೆ, ನಟ ರವಿವರ್ಮ ಮಾತ್ರ ಈವರೆಗೂ ಪತ್ತೆ ಆಗಿಲ್ಲ. ದುರ್ಘಟನೆ ನಡೆದ ಬಳಿಕ ಎಸ್ಕೇಪ್ ಆಗಿರುವ ಸಾಹಸ ನಿರ್ದೇಶಕ ರವಿವರ್ಮ ಕುರಿತು ಸದ್ಯ ನಾಚಿಕೆಗೇಡಿನ ಸುದ್ದಿಯೊಂದು ಹೊರಬಿದ್ದಿದೆ. ಆ ಮೂಲಕ ರವಿವರ್ಮ ರವರ ಮತ್ತೊಂದು 'ಸ್ಟಂಟ್' ಬಹಿರಂಗವಾಗಿದೆ. ಮುಂದೆ ಓದಿ....

ಸುರಕ್ಷತೆ ಕ್ರಮಗಳಿಗಾಗಿ ಹಣ ಪಡೆದಿದ್ದರಂತೆ ರವಿವರ್ಮ.!
'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಚಿತ್ರೀಕರಣಕ್ಕೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸಾಹಸ ನಿರ್ದೇಶಕ ರವಿವರ್ಮ, ನಿರ್ಮಾಪಕ ಸುಂದರ್.ಪಿ.ಗೌಡ ರವರಿಂದ ಲಕ್ಷಾಂತರ ರೂಪಾಯಿ ಹಣ ಪೀಕಿದ್ದರಂತೆ.! ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

ಬರೋಬ್ಬರಿ 3 ಲಕ್ಷ ರೂಪಾಯಿ
ಬೋಟ್ ಗಳ ಬಾಡಿಗೆ ಸೇರಿದಂತೆ ಇತರೆ ಸುರಕ್ಷತೆ ಕೈಗೊಳ್ಳಲು ನಿರ್ಮಾಪಕ ಸುಂದರ್.ಪಿ.ಗೌಡ ರವರಿಂದ ಸ್ಟಂಟ್ ಡೈರೆಕ್ಟರ್ ರವಿವರ್ಮ ಬರೋಬ್ಬರಿ 3 ಲಕ್ಷ ರೂಪಾಯಿ ಪಡೆದಿದ್ದರು ಅಂತ 'ಬೆಂಗಳೂರು ಮಿರರ್' ಪತ್ರಿಕೆ ವರದಿ ಮಾಡಿದೆ. [ಅನಿಲ್, ಉದಯ್ ಕೊನೆಯ ಮಾತಲ್ಲಿ ಸಾವಿನ ಮುನ್ಸೂಚನೆಯ ಸುಳಿವು.!]

ಎಲ್ಲಿತ್ತು ಸ್ವಾಮಿ ಸುರಕ್ಷತೆ?
ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ 'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ಶೂಟಿಂಗ್ ನಲ್ಲಿ ರವಿವರ್ಮ ತೆಗೆದುಕೊಂಡ ಸುರಕ್ಷತೆ ಹೇಗಿತ್ತು ಅಂತ ನೀವೇ ನಿಮ್ಮ ಕಣ್ಣಾರೆ ನೋಡಿದ್ದೀರಾ.... ['ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!]

ಕನಿಷ್ಟ ಸುರಕ್ಷತೆ ಕೂಡ ಇರಲಿಲ್ಲ
ಸುರಕ್ಷತಾ ಕ್ರಮವಾಗಿ ವಿಲನ್ ಗಳಿಗೆ ಹಗ್ಗ ಅಥವಾ ಲೈಫ್ ಜಾಕೆಟ್ ತೊಡಿಸಲಿಲ್ಲ. ಕೊನೆ ಪಕ್ಷ ನೀರಿಗೆ ಹಾರಿದ್ಮೇಲೆ ಟ್ಯೂಬ್ ಗಳನ್ನೂ ಬಳಸಲಿಲ್ಲ. ಬೋಟ್ ಗೆ ಬಾಡಿಗೆ ಕೊಡಬೇಕು ಅಂತ ದುಡ್ಡು ಪಡೆದಿದ್ದ ರವಿವರ್ಮ, ತಂದಿದ್ದು ಮಾತ್ರ ಡೀಸೆಲ್ ಎಂಜಿನ್ ಆನ್ ಆಗದ ಮೋಟರ್ ಬೋಟ್.!

ಆ ಬೋಟ್ ನ ರವಿವರ್ಮ ತಂದಿದ್ದಲ್ಲ.! ಕನ್ ಫ್ಯೂಸ್ ಆಗಬೇಡಿ.!
ದುರ್ಘಟನೆ ನಡೆದ ದಿನ ಡೀಸೆಲ್ ಎಂಜಿನ್ ಆನ್ ಆಗದೆ ಕೈಕೊಟ್ಟ ಬೋಟ್...ಜಲಮಂಡಳಿಗೆ ಸೇರಿದ ಸರ್ಕಾರಿ ಬೋಟ್ ಹೊರತು ಅದನ್ನು ರವಿವರ್ಮ ಬಾಡಿಗೆಗೆ ತಂದಿರಲಿಲ್ಲ ಎಂಬ ವಿಚಾರವನ್ನೂ 'ಬೆಂಗಳೂರು ಮಿರರ್' ಪತ್ರಿಕೆ ವರದಿ ಮಾಡಿದೆ.

ಪತ್ರಿಕೆಗೆ ನಿರ್ಮಾಪಕರ ಸ್ನೇಹಿತ ಮಾಹಿತಿ
'ಮಾಸ್ತಿ ಗುಡಿ' ದುರಂತದ ಕುರಿತು 'ಮಾಸ್ತಿ ಗುಡಿ' ನಿರ್ಮಾಪಕ ಸುಂದರ್.ಪಿ.ಗೌಡ ಆಪ್ತ ಸ್ನೇಹಿತರಾಗಿರುವ ವ್ಯಕ್ತಿ (ಹೆಸರು ವರದಿ ಆಗಿಲ್ಲ) 'ಬೆಂಗಳೂರು ಮಿರರ್' ಪತ್ರಿಕೆಗೆ ಸಂಪೂರ್ಣ ವಿವರ ನೀಡಿದ್ದಾರೆ. ಅದರ ಪ್ರಕಾರ, ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸುಂದರ್.ಪಿ.ಗೌಡ ರವರಿಂದ ರವಿವರ್ಮ 3 ಲಕ್ಷ ರೂಪಾಯಿ ಪಡೆದಿದ್ದಾರೆ. ['ಮಾಸ್ತಿ ಗುಡಿ' ದುರಂತ: ನಿರ್ಮಾಪಕ ಸುಂದರ್ ಗೌಡ ಎ-1 ಆರೋಪಿ.!]

'ಬೆಂಗಳೂರು ಮಿರರ್' ವರದಿಯಲ್ಲಿ ಏನಿದೆ?
''50-60 ಅಡಿ ಎತ್ತರದಿಂದ ಮೂವರು ಜಿಗಿಯುತ್ತಿದ್ದಂತೆ, ಸುತ್ತಲೂ ಇರುವ ಮೂರು ಬೋಟ್ ಗಳು ಅವರ ಬಳಿ ತೆರಳಿ ರಕ್ಷಿಸುವ ಪ್ಲಾನ್ ಇತ್ತು. ಹಾಗೇ, ಜಿಗಿಯುವಾಗ ರೋಪ್ ಬಳಕೆ ಮಾಡುವ ಪ್ಲಾನ್ ಕೂಡ ಇತ್ತು. ಅತ್ಯಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಿಕ್ಕೆಂದೇ, ಶೂಟಿಂಗ್ ಶುರು ಆಗುವ ಮುನ್ನವೇ ರವಿ ವರ್ಮ ಬರೋಬ್ಬರಿ 3 ಲಕ್ಷ ರೂಪಾಯಿ ಪಡೆದಿದ್ದರು. ಆದ್ರೆ, ಯಾವ ಸುರಕ್ಷತೆಯನ್ನೂ ಕೈಗೊಂಡಿಲ್ಲ. ಅಲ್ಲಿದ್ದ ಬೋಟ್ ಕೂಡ ಕೆರೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೇರಿದ್ದು. ಅದನ್ನ ರವಿವರ್ಮ ಬಾಡಿಗೆಗೆ ತಂದಿರಲಿಲ್ಲ'' ಅಂತ 'ಬೆಂಗಳೂರು ಮಿರರ್' ಪತ್ರಿಕೆಗೆ ನಿರ್ಮಾಪಕ ಸುಂದರ್.ಪಿ.ಗೌಡ ಸ್ನೇಹಿತ ತಿಳಿಸಿದ್ದಾರೆ.

ಎಡವಟ್ಟಾಯ್ತು, ಎಸ್ಕೇಪ್ ಆದರು.!
ದುರ್ಘಟನೆ ಸಂಭವಿಸುತ್ತಿದ್ದಂತೆಯೇ ಸ್ಪಾಟ್ ನಿಂದ ರವಿವರ್ಮ ಎಸ್ಕೇಪ್ ಆದರು. ಸಹಜವಾಗಿ ಫೋನ್ ಕೂಡ ಸ್ವಿಚ್ ಆಫ್ ಆಯ್ತು. [ನಾಪತ್ತೆ ಆಗಿದ್ದ 'ಮಸಣ ಗುಡಿ' ಸೂತ್ರಧಾರ ನಾಗಶೇಖರ್ ಪೊಲೀಸರ ವಶಕ್ಕೆ.!]

ಬಲವಂತ ಮಾಡಿದ್ದರು.!
ಖಳನಟರಾದ ಅನಿಲ್ ಮತ್ತು ಉದಯ್ ಕೂಡ ಈ ಸ್ಟಂಟ್ ಮಾಡಲು ಭಯಗೊಂಡಿದ್ದರು. ಆದ್ರೆ, ಅವರಿಗೆ ಬಲವಂತ ಮಾಡಿ ಒಪ್ಪಿಸಲಾಗಿತ್ತು ಎಂಬ ವಿಚಾರ ಕೂಡ 'ಬೆಂಗಳೂರು ಮಿರರ್' ಪತ್ರಿಕೆ ವರದಿ ಮಾಡಿದೆ.

ನಾಚಿಕೆ ಆಗ್ಬೇಕು.!
ಒಂದ್ವೇಳೆ ನಿರ್ಮಾಪಕರ ಸ್ನೇಹಿತ ಹೇಳಿರುವ ಈ ಮಾತು ನಿಜವೇ ಆಗಿದ್ದರೆ, ರವಿವರ್ಮ ತಲೆ ತಗ್ಗಿಸಬೇಕು. ದುಡ್ಡಿನ ಆಸೆಗಾಗಿ ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿದ ರವಿವರ್ಮ ರವರಿಗೆ ಧಿಕಾರವಿರಲಿ. 'ಬೆಂಗಳೂರು ಮಿರರ್' ಮಾಡಿರುವ ವರದಿ ಲಿಂಕ್ ಇಲ್ಲಿದೆ ಓದಿರಿ....

ಘಟನೆ ಹಿನ್ನಲೆ
ರಾಮನಗರ ಜಿಲ್ಲೆ ತಾವೆರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ 'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತಿತ್ತು. ಹೆಲಿಕಾಪ್ಟರ್ ನಿಂದ ನೀರಿಗೆ ಹಾರಿ ನಾಯಕನಿಂದ ತಪ್ಪಿಸಿಕೊಳ್ಳುವ ಸನ್ನಿವೇಶದಲ್ಲಿ ಖಳನಟರಾದ ಅನಿಲ್ ಮತ್ತು ಉದಯ್ ನೀರುಪಾಲಾಗಿದ್ದರು. [ಮಣ್ಣಲ್ಲಿ ಮಣ್ಣಾದ 'ಮಾಸ್ತಿ ಗುಡಿ' ನಟ ರಾಘವ ಉದಯ್]

ಎ-4 ಆರೋಪಿ ರವಿವರ್ಮ.!
ಜಲಮಂಡಳಿ ಅಧಿಕಾರಿಗಳು ನೀಡಿರುವ ದೂರಿನ ಅನ್ವಯ, 'ಮಾಸ್ತಿ ಗುಡಿ' ಚಿತ್ರದ ನಿರ್ಮಾಪಕ ಸುಂದರ್ ಗೌಡ ಅವರು ಎ-1 ಆರೋಪಿಯಾಗಿದ್ದು, ನಿರ್ದೇಶಕ ನಾಗಶೇಖರ್ ಅವರು ಎ-2 ಆರೋಪಿ, ಸಹ ನಿರ್ದೇಶಕ ಎ-3 ಆರೋಪಿ, ಸಾಹಸ ನಿರ್ದೇಶಕ ರವಿವರ್ಮ ಅವರನ್ನು ಎ-4 ಆರೋಪಿಯನ್ನಾಗಿಸಿ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ನಾಗಶೇಖರ್ ಮತ್ತು ಸುಂದರ್.ಪಿ.ಗೌಡ ರವರನ್ನು ಬಂಧಿಸಲಾಗಿದೆ. ನಾಪತ್ತೆ ಆಗಿರುವ ರವಿವರ್ಮ ಇನ್ನೂ ಪತ್ತೆ ಆಗಿಲ್ಲ. [ಪ್ರೀತಿಯ ತಂದೆ ಪಕ್ಕದಲ್ಲೇ ಖಳನಟ ಅನಿಲ್ ಅಂತ್ಯಕ್ರಿಯೆ]


Click it and Unblock the Notifications











