ವೀರಪ್ಪನ್ 'ಅಟ್ಟಹಾಸ' ಪ್ರದರ್ಶನಕ್ಕೆ ಗ್ರೀನ್ ಸಿಗ್ನಲ್

ಕಾಡುಗಳ್ಳ, ನರಹಂತಕ ವೀರಪ್ಪನ್ ಜೀವನ ಆಧರಿಸಿದ ಚಿತ್ರ ಕನ್ನಡದಲ್ಲಿ ಅಟ್ಟಹಾಸ, ತಮಿಳಿನಲ್ಲಿ 'ವನಯುದ್ಧಂ' ಎಂಬ ಹೆಸರಿನಲ್ಲಿ ತಯಾರಾಗಿದೆ. ಆದರೆ, ಚಿತ್ರ ಬಿಡುಗಡೆಗೆ ವೀರಪ್ಪನ್ ಅವರ ಪತ್ನಿ ಮುತ್ತುಲಕ್ಷ್ಮಿ ಭಾರಿ ವಿರೋಧ ವ್ಯಕ್ತಪಡಿಸಿದ್ದರು.
ಇಲ್ಲದ ಕ್ಯಾತೆ ತೆಗೆದು ಈ ಚಿತ್ರದಲ್ಲಿ ನನ್ನ ಪತಿ ವೀರಪ್ಪನ್ ಗಿಂತ ಡಾ. ರಾಜ್ ಕುಮಾರ್ ಪಾತ್ರವನ್ನು ವೈಭವೀಕರಿಸಲಾಗಿದೆ. ಇದು ತಪ್ಪು ಸಂದೇಶ ನೀಡುತ್ತದೆ. ಚಿತ್ರ ಬಿಡುಗಡೆಯಾಗಬಾರದು ಎಂದು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯೂ ಒಪ್ಪಿಗೆ ನೀಡಿದ್ದು ತೆರಿಗೆ ರಹಿತ ಪ್ರಮಾಣಪತ್ರವನ್ನೂ ನೀಡಿತ್ತು. ಡಾ.ರಾಜ್ ಕುಟುಂಬಿಕರು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಪತ್ರಕರ್ತ ನಕ್ಕೀರನ್ ಗೋಪಾಲನ್ ಕೂಡಾ ನನ್ನದೇನು ಆಕ್ಷೇಪ ಇಲ್ಲ ಎಂದಿದ್ದರು. ಆದರೆ, ಮದ್ರಾಸ್ ಕೋರ್ಟಿನಲ್ಲಿ ಪ್ರಕರಣ ಇರುವ ಕಾರಣ ಚಿತ್ರದ ಬಿಡುಗಡೆ ಅನಿಶ್ಚಿತವಾಗಿ ಮುಂದೂಡಲ್ಪಟ್ಟಿತ್ತು.
ಈಗ ಮದ್ರಾಸ್ ಹೈಕೋರ್ಟಿನಿಂದ ಗ್ರೀನ್ ಸಿಗ್ನಲ್ ಸಿಕ್ಕಿರುವುದರಿಂದ ಫೆ.14 ಅಥವಾ 15 ರಂದು ಚಿತ್ರ ಬಿಡುಗಡೆ ಮಾಡಲು ರಮೇಶ್ ಸಜ್ಜಾಗಿದ್ದಾರೆ.
ಈ ಚಿತ್ರದ ವಿಶೇಷ ಪಾತ್ರದಲ್ಲಿ ಅರ್ಜುಜ್ ಸರ್ಜಾ ಅಭಿನಯಿಸಿದ್ದಾರೆ. ವೀರಪ್ಪನ್ ಆಗಿ ಕಿಶೋರ್ ಮೀಸೆ ತಿರುವಿದ್ದಾರೆ. ವರನಟ ಡಾ.ರಾಜ್ ಕುಮಾರ್ ಅವರ ಪಾತ್ರವನ್ನು ಸುರೇಶ್ ಒಬೆರಾಯ್ ಪೋಷಿಸಿದ್ದು ಚಿತ್ರ ಅತೀವ ಕುತೂಹಲ ಕೆರಳಿಸಿದೆ.
ಮೂರು ದಶಕಗಳ ಕಾಲ ವೀರಪ್ಪನ್ ನಡೆಸಿದ ಅಡವಿ ಜೀವನ, ವರನಟ ದಿವಂಗತ ಡಾ.ರಾಜ್ ಕುಮಾರ್ ಕಿಡ್ನಾಪ್ನ ಯಥಾವತ್ ಘಟನೆಗಳ ಆಧಾರವಾಗಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ರಾಜ್ ಕಿಡ್ನಾಪ್ ಕುರಿತ ಚಿತ್ರವನ್ನು ಬೆಳ್ಳಿತೆರೆಗೆ ತರುತ್ತಿರುವುದು ಇದೇ ಮೊದಲು.


Click it and Unblock the Notifications











