ಚಿತ್ರದುರ್ಗದಲ್ಲಿ ಮಹಾ ಶರಣ ಹರಳಯ್ಯ
ಕಾಮಿಡಿ ಟ್ರ್ಯಾಕ್ ನಿಂದ ರಮೇಶ್ ಅರವಿಂದ್ ಅವರು ಭಕ್ತಿ ಟ್ರ್ಯಾಕ್ ಗೆ ಹೊರಳಿರುವ ಚಿತ್ರ 'ಮಹಾ ಶರಣ ಹರಳಯ್ಯ'. ಈ ಚಿತ್ರದಲ್ಲಿ ಅವರದು ಕ್ರಾಂತಿಯೋಗಿ ಬಸವಣ್ಣನ ಪಾತ್ರ. ಹರಳಯ್ಯನಾಗಿ ಶ್ರೀಧರ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ರಮೇಶ್ ಅರವಿಂದ್ ಅವರು ಎಲ್ಲಾ ವಿಧದ ಪಾತ್ರಗಳಲ್ಲೂ ಅಭಿನಯಿಸಿದವರು. ಈಗ ಇದೇ ಮೊದಲ ಬಾರಿಗೆ ಭಕ್ತಿ ಪ್ರಧಾನ ಪಾತ್ರವನ್ನೂ ಪೋಷಿಸುತ್ತಿದ್ದಾರೆ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಪುರುಷೋತ್ತಮ್. ಈ ಹಿಂದೆ ಅವರು ಜಗದ್ಗುರು ರೇಣುಕಾಚಾರ್ಯ, ಭಕ್ತ ಶಂಕರ, ದೇವಿ ಭಾಗಮ್ಮ, ಜ್ಞಾನಜ್ಯೋತಿ ಸಿದ್ದಗಂಗಾ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಹನ್ನೆರಡನೇ ಶತಮಾನದಲ್ಲಿ ಅಸ್ಪೃಶ್ಯತೆ ವಿರುದ್ಧ ಹೋರಾಡಲು ಬಸವಣ್ಣ ಅವರ ಜೊತೆ ಕೈಜೋಡಿಸಿದ ಹರಳಯ್ಯನ ಕಥೆಯನ್ನು ಬೆಳ್ಳಿತೆರೆಗೆ ತರಲಾಗುತ್ತಿದೆ. ಈ ಚಿತ್ರದ ಚಿತ್ರೀಕರಣ ಬಸವಕಲ್ಯಾಣ, ಗದಗ, ಧಾರಾವಾಡ, ಕುಂದಗೋಳ್ ಸೇರಿದಂತೆ ಐತಿಹಾಸಿಕ ಸ್ಥಳಗಳಲ್ಲಿ ಮಾಡಲಾಗುತ್ತಿದೆ.ಭಾಗ್ಯೋದಯ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಎ ದೇವರಾಜ್ ನಿರ್ಮಿಸುತ್ತಿರುವ 'ಮಹಾ ಶರಣ ಹರಳಯ್ಯ' ಚಿತ್ರಕ್ಕೆ "ಬಂದನು ಬಸವನು ಈ ಧರೆಗೆ, ಕವಿದಿರುವ ಕತ್ತಲು ಇರುವೆಡೆಗೆ" ಎಂಬ ಹಾಡನ್ನು ಚಿತ್ರದುರ್ಗದ ಕೋಟೆ ಚಂದವಳ್ಳಿ ತೋಟ, ಮುರುಗ ರಾಜೇಂದ್ರ ಮಠ ಹಾಗೂ ಹುಬ್ಬಳ್ಳಿಯ ಸಿದ್ಧರೂಡಮಠದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.
ಈ ಭಾಗದ ಚಿತ್ರೀಕರಣದಲ್ಲಿ ರಮೇಶ್ ಅರವಿಂದ್ ಹಾಗೂ 500 ಕ್ಕೂ ಹೆಚ್ಚು ಸಹ ಕಲಾವಿದರು ಈ ಹಾಡಿನಲ್ಲಿ ಪಾಲ್ಗೊಂಡಿದ್ದರು. ಬಿ.ಎ.ಪುರುಷೋತ್ತಮ್ (ಓಂಕಾರ್), ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತರುವ ಈ ಚಿತ್ರಕ್ಕೆ ಗೌರಿವೆಂಕಟೇಶ್ ಛಾಯಾಗ್ರಹಣವಿದೆ.
ಜಿಮ್ಮಿರಾಜ್ ಸಂಗೀತ, ಇಸ್ಮಾಯಲ್ ಕಲೆ, ಹೈಟ್ ಮಂಜು ನೃತ್ಯ ನಿರ್ದೇಶನ, ಕೆ.ಬಿ.ರವಿಚಂದ್ರ, ಕೆ.ಎನ್.ವೆಂಕಟೇಶ್ ಹಾಸನ ಸಹ ನಿರ್ಮಾಣವಿದೆ. ರಮೇಶ್ ಅರವಿಂದ್, ಶ್ರೀಧರ್, ರಾಮಕೃಷ್ಣ, ರಮೇಶ್ ಭಟ್, ರಾಜು (ಡಿಂಗ್ರಿ) ವಿಕ್ರಂ ಉದಯ್ ಕುಮಾರ್, ಜಯಲಕ್ಷ್ಮಿ ಶೀಲಾ, ಸುಮಿತ್ರ, ಮೊದಲಾದ ತಾರಾಗಣವಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












