ಗೋಲ್ಡನ್ ಸ್ಟಾರ್ ಗಣೇಶ್ ಕೇಳಿದ್ದಕ್ಕೆ ಕಾಲೇಜಿಗೆ ರಜೆ ಕೊಟ್ರಂತೆ.!
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮುಗುಳುನಗೆ' ಸಿನಿಮಾ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಗಣೇಶ್ ಅವರ ಈ ಚಿತ್ರಕ್ಕೆ ಮಹಿಳಾ ಚಿತ್ರಪ್ರೇಮಿಗಳು ಹೆಚ್ಚು ಆಕರ್ಷಣೆಯಾಗುತ್ತಿರುವುದು ಗಮನಾರ್ಹ. ಬಿಡುಗಡೆಗೂ ಮೊದಲೇ ಮಹಿಳೆಯರಿಗಾಗಿ 'ಮುಗುಳುನಗೆ' ಚಿತ್ರದ ವಿಶೇಷ ಪ್ರದರ್ಶನ ಕೂಡ ಏರ್ಪಡಿಸಲಾಗಿತ್ತು.
ಹೀಗಿರುವಾಗ, ವಿದ್ಯಾರ್ಥಿಗಳು 'ಮುಗುಳುನಗು' ಸಿನಿಮಾ ನೋಡಲಿ ಎಂಬ ಕಾರಣಕ್ಕೆ ಬೆಂಗಳೂರಿನ ಮಹಿಳಾ ಕಾಲೇಜಿಗೆ ಕಳೆದ ಶುಕ್ರವಾರ ರಜೆ ಘೋಷಿಸಿರುವ ಘಟನೆ ನಡೆದಿದೆ. ಹೌದು, ಮಹಾರಾಣಿ ಕಲಾ, ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜಿಗೆ ಶುಕ್ರವಾರದಂದು (ಸೆಪ್ಟಂಬರ್ 1) ವಿಶೇಷ ರಜೆ ಘೋಷಿಸಿದ್ದರು. ಇದಕ್ಕೆ ಕಾರಣ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅವರ ಸಿನಿಮಾ.

ಹೌದು, ಆಗಸ್ಟ್ 31 ರಂದು ಗೋಲ್ಡನ್ ಸ್ಟಾರ್ ಗಣೇಶ್ ಅವರು ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಹೋಗಿದ್ದರು. ಈ ವೇಳೆ ವೇದಿಕೆಯಲ್ಲಿ ಮಾತನಾಡಿದ ಗಣೇಶ್ ''ನಾಳೆ ನಮ್ಮ ಸಿನಿಮಾ ಬಿಡುಗಡೆ ಆಗುತ್ತಿದೆ, ನನ್ನ ಸಿನಿಮಾ ನೋಡಲು ವಿದ್ಯಾರ್ಥಿಗಳಿಗೆ ಒಂದು ದಿನ ರಜೆ ಕೊಡಬಹುದು ಅಲ್ವಾ'' ಎಂದು ಬಹಿರಂಗವಾಗಿ ವೇದಿಕೆಯಲ್ಲಿ ಕೇಳಿದರಂತೆ.

ಗಣೇಶ್ ಅವರ ಬೇಡಿಕೆಗೆ ವಿದ್ಯಾರ್ಥಿಗಳು ಕೂಡ ಧ್ವನಿಗೂಡಿಸಿದ್ದಾರೆ. ಹೀಗಾಗಿ, ಕಾಲೇಜು ಪ್ರಾಂಶಪಾಲರು ರಜೆ ನೀಡಿದ್ದಾರೆ. '' ಗಣೇಶ್ ಅವರು ಎಲ್ಲ ವಿದ್ಯಾರ್ಥಿಗಳ ಮುಂದೆ ಕೇಳಿದಾಗ, ಇಲ್ಲ ಎನ್ನುವುದು ಹೇಗೆ? ಹಾಗಂತ, ಗಣೇಶ್ ಅವರು ಕೇಳಿದ ಮಾತ್ರಕ್ಕೆ ರಜೆ ನೀಡಲಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮದ ದಿನ ಮತ್ತು ಅದರ ಹಿಂದಿನ ದಿನ ವಿದ್ಯಾರ್ಥಿಗಳು ಸಿದ್ದತೆ, ಅದು, ಇದು ಅಂತ ಓಡಾಡಿ ಆಯಾಸಗೊಂಡಿರುತ್ತಾರೆ. ಹಾಗಾಗಿ, ಮುಂದಿನ ರಜೆ ನೀಡುವುದರಿಂದ ಅವರಿಗೂ ವಿಶ್ರಾಂತಿ ಸಿಗುತ್ತೆ ಎಂಬ ಕಾರಣಕ್ಕೆ ರಜೆ ನೀಡಿದ್ದೇವು. ಇದಕ್ಕು ಮುಂಚೆ ಕೂಡ ಯಾವುದೇ ಕಾಲೇಜಿನಲ್ಲಿ ಸಾಂಸ್ಕ್ರತಿಕ ಚಟುವಟಿಕೆ ನಡೆದರೆ, ಮುಂದಿನ ದಿನ ರಜೆ ನೀಡಿರುವು ಉದಾಹರಣೆ ಇದೆ'' ಎಂದು ಪತ್ರಿಕೆಯೊಂದಕ್ಕೆ ಕಾಲೇಜು ಪ್ರಾಂಶಪಾಲರು ತಿಳಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ ದಿನದ ಮುಂದಿನ ದಿನ ಸಾಮಾನ್ಯವಾಗಿ ವಿದ್ಯಾರ್ಥಿಗಳು ಕೂಡ ಕಾಲೇಜಿಗೆ ಬರಲು ಆಸಕ್ತಿ ಹೊಂದಿರುವುದಿಲ್ಲ. ಹೀಗಾಗಿ, ಗಣೇಶ್ ಅವರ ಮನವಿಗೆ ರಜೆ ಸಿಕ್ಕಂತಾಯಿತು. ಬಟ್, ಅದೇಷ್ಟೋ ಜನ ಸಿನಿಮಾ ನೋಡಿದ್ರೋ ಗೊತ್ತಿಲ್ಲ. ಬಟ್, ಮಹಿಳಾ ಅಭಿಮಾನಿಗಳು ಮುಗುಳುನಗೆಯನ್ನ ಮೆಚ್ಚಿಕೊಂಡಿರುವುದು ಮೆಚ್ಚಲೇಬೇಕು.
ಅಂದ್ಹಾಗೆ, ಸೈಯಾದ್ ಸಲಾಂ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದರು. ಗಣೇಶ್ ನಾಯಕನಾಗಿ ಅಭಿನಯಿಸಿದ್ದು, ಆಶಿಕಾ ರಂಗನಾಥ್, ನಿಖಿತಾ ನಾರಾಯಣ್, ಅಪೂರ್ವ ಅರೋರ ಹಾಗೂ ಅಮೂಲ್ಯ ನಾಯಕಿಯರಾಗಿ ಕಾಣಿಸಿಕೊಂಡಿದ್ದರು. ಸೆಪ್ಟಂಬರ್ 1 ರಂದು ಕರ್ನಾಟಕ ಹಾಗೂ ಭಾರತದಲ್ಲಿ 'ಮುಗುಳುನಗೆ' ಬಿಡುಗಡೆಯಾಗಿತ್ತು.


Click it and Unblock the Notifications











