ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಸಿನಿಮಾ 'ಮನರೂಪ'
ಕನ್ನಡದ ಸಿನಿಮಾ ಪ್ರಿಯರಿಗೆ ಹೊಸ ಬಗೆಯ ಅನುಭವ ನೀಡಲು ಗುಮ್ಮಾಗಳು ಬರುತ್ತಿದ್ದಾರೆ. ಮಾಸ್ಕ್ ಫೋಭಿಯಾ (ಮುಖವಾಡದ ಭಯ) ಪರಿಕಲ್ಪನೆಯಿಟ್ಟುಕೊಂಡು ಪ್ರೇಕ್ಷಕರ ಮನಸನ್ನು ಕಲಕಲು ಗುಮ್ಮಾಗಳು ಹವಣಿಸಲಿದ್ದಾರೆ. ಯಾರು ಈ ಗುಮ್ಮಾಗಳು, ಅವರೇನು ಮಾಡುತ್ತಾರೆ ಎಂಬುದೇ ಸಿನಿಮಾದ ಮೂಲ ಕೇಂದ್ರ.
ಹೌದು, ಯುವ ಮನಸುಗಳು ಭೌತಿಕವಾದ ಮತ್ತು ಅಸ್ತಿತ್ವವಾದದ ಮಾಯಾ ಕನ್ನಡಿಯಲ್ಲಿ ತಮ್ಮನ್ನು ತಾವು ಹುಡುಕುತ್ತಾ, ಕಳೆದುಕೊಳ್ಳುತ್ತಾ ಕೊನೆಯರಿಯದ ದಾರಿಯಲ್ಲಿ, ಯಾರದೋ ಸಮ್ಮೋಹನಕ್ಕೆ ಸಿಕ್ಕವರಂತೆ ಸಾಗುತ್ತಿದ್ದಾರೆ ಎಂಬ ಒಂದು ಎಳೆಯನ್ನಿಟ್ಟುಕೊಂಡು 'ಮನರೂಪ' ಎಂಬ ಹೆಸರಿನಲ್ಲಿ ಸಿ.ಎಂ.ಸಿ.ಆರ್ ಮೂವೀಸ್ ಚಲನಚಿತ್ರ ನಿರ್ಮಿಸುತ್ತಿದೆ.
ಸ್ವಮೋಹದ ಪಾಶದಲ್ಲಿ ಯಾವುದು ಭ್ರಾಮಕವೋ, ಯಾವುದು ವಾಸ್ತವವೋ ತಿಳಿಯುತ್ತಿಲ್ಲ. ಜನರೇಶನ್ ನೆಕ್ಸ್ಟ್ ಎಂದೂ ಕರೆಯಲ್ಲಡುವ ಈ ಯುವ ಸಮುದಾಯದ ಭ್ರಾಮಕ ಜಗತ್ತಿನ ಪರಿಮಿತಿಯನ್ನು ಶೋಧಿಸುವ ಸಾಹಸದ ಭಾಗವೇ 'ಮನರೂಪ' ಸಿನಿಮಾ. 40 ಗಂಟೆಗಳಲ್ಲಿ ತೆರೆದುಕೊಳ್ಳುವ ಥ್ರಿಲ್ಲರ್ ಕಥನವು ಸ್ವ-ಗೀಳಿನ ಸುತ್ತಲೇ ಹುಟ್ಟಿಕೊಳ್ಳುವ ಬದುಕೆಂಬ ಹುತ್ತದ ನಿಗೂಢತೆಯನ್ನೂ, ಆಳವನ್ನೂ, ಅನಿಶ್ಚಿತತೆಯನ್ನೂ ತೆರೆದಿಡುವ ಪ್ರಯತ್ನ ಮಾಡುತ್ತದೆ ಎಂದು ತಮ್ಮ ಚೊಚ್ಚಲ ಸಿನಿಮಾದ ಬಗ್ಗೆ ನಿರ್ದೇಶಕ ಕಿರಣ್ ಹೆಗಡೆ ವಿವರಿಸುತ್ತಾರೆ. ಮುಂದೆ ಓದಿ.....

ಮನರೂಪದಲ್ಲಿ ಎಲ್ಲವೂ ಇದೆ
ಚಿತ್ರದಲ್ಲಿ ಗೆಳೆತನ, ಹಳಸಿದ ಪ್ರೇಮ, ಸಂಬಂಧದ ಸಂಘರ್ಷ, ಒಂಟಿತನ, ಅಪರಾಧ; ಎಲ್ಲದರ ಮಿಶ್ರಣವನ್ನು ಹೊಂದಿದೆ. ಹಲವು ವರ್ಷಗಳ ನಂತರ ಸಂಧಿಸುವ ಐವರು ಸ್ನೇಹಿತರು ಪಶ್ಚಿಮ ಘಟ್ಟದ ದಟ್ಟ ಅರಣ್ಯದಲ್ಲಿ ಚಾರಣ ಕೈಗೊಳ್ಳುತ್ತಾರೆ. ಯಾಂತ್ರಿಕ ಬದುಕಿನ ಜಂಜಡದಿಂದ ದೂರ ಸಾಗಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ, ಭವಿಷ್ಯದ ಕನಸುಗಳನ್ನು ಹಂಚಿಕೊಳ್ಳಲು ಐವರು ಸ್ನೇಹಿತರು ಕರಡಿ ಗುಹೆ ನೋಡಲು ಸಾಗುತ್ತಾರೆ. ಹಳೆಯ ನೆನಪು, ಪ್ರೇಮ ವೈಫಲ್ಯ, ಜೀವನದ ತಪ್ಪಿಹೋದ ಅವಕಾಶಗಳು, ತಾವು ಎದುರಿಸಿದ ನೈತಿಕ ಸವಾಲುಗಳನ್ನು ಅರಣ್ಯದ ಬ್ಯಾಕ್ಡ್ರಾಪ್ನಲ್ಲಿ ಚಿತ್ರೀಕರಿಸಲಾಗಿದೆ.

ರಂಗಭೂಮಿ ಕಲಾವಿದರು
'ಮನರೂಪ'ದ ಮೂಲಕ ಚಂದನವನಕ್ಕೆ ಪರಿಚಯಗೊಳ್ಳುತ್ತಿರುವ ರಂಗಭೂಮಿ ಕಲಾವಿದ ದಿಲೀಪ್ ಕುಮಾರ್ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ಜನಪ್ರಿಯರಾಗಿರುವ ಅನುಷಾ ರಾವ್ ಮತ್ತು ಈಗಾಗಲೇ ಹಲವು ಚಿತ್ರಗಳಲ್ಲಿ ಅಭಿನಯಿಸಿದ ಅನುಭವ ಹೊಂದಿರುವ ನಿಷಾ ಬಿ. ಆರ್. ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಟೆಕ್ನಿಕಲಿ ಸಿನಿಮಾ ಹೇಗಿದೆ.?
ಗೋವಿಂದರಾಜ್ ರವರ ಕ್ಯಾಮೆರಾ ಕಣ್ಣಿನಲ್ಲಿ ದಟ್ಟ ಕಾಡಿನ ನಿಗೂಢತೆ, ನೀರವತೆ ಹಾಗೂ ಮುಕ್ತತೆ ಮನೋಜ್ಞವಾಗಿ ಮೂಡಿಬಂದಿದೆ. 43 ದಿನಗಳ ಕಾಡಿನ ಚಿತ್ರೀಕರಣ ಮುಕ್ತಾಯವಾಗಿ ಇದೀಗ ಮನರೂಪ ಚಿತ್ರವು ಲೋಕಿ ಮತ್ತು ಸೂರಿಯವರ ಸಂಕಲನ ತಟ್ಟೆಯಲ್ಲಿ ಮರುಹುಟ್ಟನ್ನು ಪಡೆಯುತ್ತಿದೆ. ಚಿತ್ರಕ್ಕೆ ಸರ್ವಣ ಅವರು ಸಂಗೀತವನ್ನು ನೀಡಿದ್ದಾರೆ. ಭರವಸೆಯ ಪ್ರತಿಭೆ ಆರ್ಯನ್ ಮತ್ತು ಶಿವಪ್ರಸಾದ್ ಐದು ಜನರ ಸ್ನೇಹಿತರ ಬಳಗದ ಉಳಿದಿಬ್ಬರು ಸದಸ್ಯರಾಗಿ ವಿಭಿನ್ನ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅಮೋಘ ಸಿದ್ದಾರ್ಥ, ಗಜ ನೀನಾಸಮ್ ಮತ್ತು ಪ್ರಜ್ವಲ್ ಗೌಡ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೆ, ವಿಶಿಷ್ಟ ಪಾತ್ರದಲ್ಲಿ ಜನಪ್ರಿಯ ನಿರ್ದೇಶಕ, ನಟ ಬಿ. ಸುರೇಶ್ ಜೀವ ತುಂಬಿದ್ದಾರೆ.

ಕಿರಣ್ ಹೆಗಡೆ ಡೈರೆಕ್ಷನ್.?
ಸಾರ್ವಜನಿಕ ಸಂಪರ್ಕ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕಿರಣ್ ಹೆಗಡೆ ಮನರೂಪ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಕತೆಯನ್ನು ಅವರೇ ಬರಿದಿದ್ದಾರೆ. ಸಂಭಾಷಣೆಯನ್ನು ಪತ್ರಕರ್ತ, ಸಾಹಿತಿ ಮಹಾಬಲ ಸೀತಾಳಭಾವಿ ಬರೆದಿದ್ದಾರೆ. ಮೊದಲ ಚಿತ್ರದಲ್ಲಿಯೇ ಪ್ರಸಕ್ತ ಯುವ ಜನಾಂಗವು ಎದುರಿಸುತ್ತಿರುವ ಸ್ವ-ಗೀಳಿನಂತಹ ಸಂಕೀರ್ಣ ಮನೋವೈಜ್ಞಾನಿಕ ವಿಷಯವನ್ನು ಕೈಗೆತ್ತಿಕೊಂಡು ತಮ್ಮ ಪ್ರಯೋಗಶೀಲತೆಯನ್ನು ಒರೆಗೆ ಹಚ್ಚಲು ಕಿರಣ್ ಹೆಗಡೆ ಪ್ರಯತ್ನಿಸಿದ್ದಾರೆ. ಸಿ.ಎಮ್.ಸಿ.ಆರ್ ಮೂವೀಸ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಕಿರಣ್ ಹೆಗಡೆ 2017ರಲ್ಲಿಯೇ ಪರಿಕಲ್ಪಿಸಿದ್ದು, 2019ರ ಮೊದಲ ಘಟ್ಟದಲ್ಲಿ ತೆರೆಗೆ ತರುವ ಯೋಚನೆ ಚಿತ್ರ ತಂಡಕ್ಕಿದೆ.


Click it and Unblock the Notifications











