ಕುತೂಹಲ ಕೆರಳಿಸುವ 'ಮನರೂಪ' ಸಿನಿಮಾ ಪೋಸ್ಟರ್

ಕಾರೊಂದರ ಹೆಡ್ ಲೈಟ್ ಬೆಳಕಿನಲ್ಲಿ ಕಾಣುತ್ತಿರುವ ದಟ್ಟ ಕಾಡಿನ ದಾರಿ. ಪಕ್ಕದ ಕೊಳದಲ್ಲಿ ಪ್ರತಿಫಲಿಸುತ್ತಿರುವ ಚಂದ್ರಬಿಂಬ. ಮುಗಿಲೆತ್ತರದಲ್ಲಿ ಹಾರುತ್ತಿರುವ ಮೂರು ಹಕ್ಕಿಗಳನ್ನು ಬಿಟ್ಟರೆ ಮನುಷ್ಯರ ಸುಳಿವೇ ಇಲ್ಲದ ಅರಣ್ಯ ಪಂಕ್ತಿ. ಜನಸಂಚಾರದ ಸುಳಿವೇ ಇಲ್ಲದ ನೀರವ ಕಾಡಿನ ಕತ್ತಲನ್ನು ಸೀಳಿಕೊಂಡು ಸಾಗುತ್ತಿರುವ ವಾಹನದ ಚಲನೆಯು ಮಾತ್ರ ಕ್ಯಾಮೆರಾದಲ್ಲಿ ಚಿತ್ರೀಕರಣಗೊಳ್ಳುತ್ತಿದೆ.

ಹಾಗಾದರೆ ಚಿತ್ರೀಕರಿಸುತ್ತಿರುವವರು ಯಾರು ಹಾಗೂ ಯಾಕಾಗಿ ಚಿತ್ರೀಕರಿಸುತ್ತಿದ್ದಾರೆ? ಕ್ಯಾಮೆರಾದ ಬ್ಯಾಟರಿಯು ಮುಕ್ತಾಯದ ಅಂಚಿನಲ್ಲಿರುವುದು, ಬಹಳ ಹೊತ್ತಿನಿಂದ ಕಾರಿನ ಚಲನೆಯು ರೆಕಾರ್ಡ್ ಆಗುತ್ತಿರುವುದನ್ನು ಕೂಡಾ ಸೂಚಿಸುತ್ತಿರುವಂತಿದೆ. ಇದು 2019ರ ಜನವರಿ ಕೊನೆಯಲ್ಲಿ ಬಿಡುಗಡೆಗೆ ಸಜ್ಜಾಗಿರುವ ಸೈಕಾಲಾಜಿಕಲ್ ಕ್ರೈಮ್ ಥ್ರಿಲ್ಲರ್ 'ಮನರೂಪ' ಸಿನೆಮಾದ ಪೋಸ್ಟರ್ ನೀಡುವ ಸುಳಿವು. ಈ ಪೋಸ್ಟರ್ ಅನ್ನ ಹಿರಿಯ ನಟ ಶ್ರೀನಾಥ್ ಅವರು ಬಿಡುಗಡೆ ಮಾಡಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಕೂಡ ಈ ವೇಳೆ ಉಪಸ್ಥಿತರಿದ್ದರು.

Manaroopa title poster released

ಹೊಸಬರ ಪ್ರಯತ್ನವಾದ 'ಮನರೂಪ' ಚಿತ್ರವು ತನ್ನ ರೋಚಕ ಹಾಗೂ ಅಪರೂಪದ ಪೋಸ್ಟರ್ ಮೂಲಕ ಸಿನಿಪ್ರಿಯರಲ್ಲಿ ಚಿತ್ರದ ಕುರಿತು ಅಪಾರ ಕುತೂಹಲವನ್ನು ಹುಟ್ಟುಹಾಕಿದೆ. ಪೋಸ್ಟರ್ ಅನ್ನು ಹತ್ತಿರದಿಂದ ಕೂಲಂಕಶವಾಗಿ ವೀಕ್ಷಿಸಿದಾಗ ಕಾಣುವ 'ಎಪಿಸೋಡ್ ನೆವರ್ ಎಂಡ್ಸ್' ಎಂಬ ಟ್ಯಾಗ್‍ಲೈನ್ ಚಿತ್ರದಲ್ಲಿರುವ ರೋಚಕ ಸಸ್ಪೆನ್ಸ್ ಅಂಶದ ಕುರಿತು ಸುಳಿವನ್ನು ನೀಡುತ್ತದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಈ ಪೋಸ್ಟರ್ ಹೊಸ ಬಗೆಯಲ್ಲಿ ಸಂರಚನೆಗೊಂಡಿದೆ. ಕಲಾವಿದ ನವೀನ್ ರೇವಣಸಿದ್ಧಪ್ಪ ಅವರು ಈ ಪೋಸ್ಟರ್ ಡಿಸೈನ್ ಮಾಡಿದ್ದಾರೆ.

ಇವೆಲ್ಲದರ ಜೊತೆಗೆ, ಆ ದಟ್ಟ ಕಾಡಿನಲ್ಲಿ ಅಂತಹ ನೀರವ ರಾತ್ರಿಯಲ್ಲಿ ಸಾಗುತ್ತಿರುವ ಕಾರಿನಲ್ಲಿ ಯಾರೆಲ್ಲಾ ಇದ್ದಾರೆ? ಎಲ್ಲಿಗೆ, ಯಾಕಾಗಿ ಹೋಗುತ್ತಿದ್ದಾರೆ? ರೆಕಾರ್ಡ್ ಮಾಡುತ್ತಿರುವವರು ಯಾರು? ಅವರ ಉದ್ದೇಶವಾದರೂ ಏನು ಎಂಬ ಹತ್ತಾರು ಪ್ರಶ್ನೆಗಳನ್ನು 'ಮನರೂಪ' ಸಿನಿಮಾದ ಪೋಸ್ಟರ್ ಸೃಷ್ಠಿಸುತ್ತದೆ.

Manaroopa title poster released

ಮಾನವ ಸ್ವಭಾವದ ವಿವಿಧ ಮಜಲುಗಳನ್ನು ಅದರಲ್ಲೂ ವಿಶೇಷವಾಗಿ ಯುವ ಮನಸ್ಸಿನ ವಿವಿಧ ಛಾಯೆಗಳನ್ನು ಶೋಧಿಸುವ ಪ್ರಯತ್ನದ ಭಾಗವಾಗಿ ರೂಪತಳೆದಿರುವ ಹೊಸಯುಗದ ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರ 'ಮನರೂಪ', ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತದೆ ಎಂದು ಚಿತ್ರದ ನಿರ್ದೇಶಕ ಕಿರಣ್ ಹೆಗಡೆ ಹೇಳುತ್ತಾರೆ.

ಸಾರ್ವಜನಿಕ ಸಂಪರ್ಕ ಕ್ಷೇತ್ರದಿಂದ ನಿರ್ದೇಶನದತ್ತ ಮುಖಮಾಡಿರುವ ಕಿರಣ್ ಹೆಗಡೆಯವರ ಪ್ರಕಾರ, ಚಿತ್ರದ ಪೋಸ್ಟರ್ ಸಿನಿಪ್ರಿಯರ ಕುತೂಹಲವನ್ನು ಚಿತ್ರದತ್ತ ಆಕರ್ಷಿಸುವುದರ ಜೊತೆಗೆ ಚಿತ್ರಕ್ಕೆ ಕೇಂದ್ರವೆನಿಸಿರುವ ಕಾಡಿನ ಪರಿಸರದ ಔಚಿತ್ಯವನ್ನು ಚಂದ್ರಬಿಂಬದ ಪ್ರತಿಫಲನದ ಮೂಲಕ ತಿಳಿಸುತ್ತದೆ. ಅವರೇ ಹೇಳುವಂತೆ, ಇಂದಿನ ಯುವಜನರು ತಮ್ಮ ಅಸ್ಮಿತೆಯ ಬಗ್ಗೆಯೇ ಅನುಮಾನಗಳನ್ನು ಹೊಂದಿದ್ದಾರೆ. ಮನ:ಶಾಸ್ತ್ರಜ್ಞರಿಗೂ ಅವರ ಕೆಲವು ಭಾವನೆ ಮತ್ತು ನಡವಳಿಕೆಗಳನ್ನು ಅರಿಯುವುದು ಕಷ್ಟವಾಗಿದೆ. ಚಿತ್ರವು ಯುವಜನಾಂಗದ ಈ ಸಂದಿಗ್ಧ ಮನೋಭಾವ, ಒಂಟಿಭಾವ, ಸ್ವಮೋಹದ ಕಾರಣಗಳನ್ನು ಹುಡುಕುತ್ತಾ ಪ್ರತಿಯೊಬ್ಬ ವೀಕ್ಷಕನಿಗೂ ಚಿತ್ರದ ಪಾತ್ರದೊಂದಿಗೆ ತನ್ನನ್ನು ತಾನು ಕಂಡುಕೊಳ್ಳುವ ಅವಕಾಶವನ್ನು ಒದಗಿಸುತ್ತದೆ.

Manaroopa title poster released

ಸಿ.ಎಮ್.ಸಿಆರ್. ಮೂವೀಸ್ ನಿಮಿಸುತ್ತಿರುವ 'ಮನರೂಪ' ಚಿತ್ರವು ಯುವಸಮುದಾಯದ ಸ್ವಗೀಳಿನ ಸುತ್ತಲೇ ಹುಟ್ಟಿಕೊಳ್ಳುವ ಭ್ರಾಮಕ ಜಗತ್ತಿನ ಸಂಭಾವ್ಯತೆಗಳನ್ನು ತೆರೆದಿಡುತ್ತಾ, ಇಂದಿನ ಸಮಾಜದ ಸಮಸ್ಯೆಗಳಿಗೆ ಕನ್ನಡಿ ಹಿಡಿಯುತ್ತಾ ಸಾಗುತ್ತದೆ.

ಮನರೂಪದ ಮೂಲಕ ಚಂದನವನಕ್ಕೆ ಪರಿಚಯಗೊಳ್ಳುತ್ತಿರುವ ದಿಲೀಪ್ ಕುಮಾರ್ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ಜನಪ್ರಿಯರಾಗಿರುವ ಅನುಷಾ ರಾವ್ ಮತ್ತು ಈಗಾಗಲೇ ಹಲವು ಚಿತ್ರಗಳಲ್ಲಿ ಅಭಿನಯಿಸಿದ ಅನುಭವ ಹೊಂದಿರುವ ನಿಷಾ ಬಿ. ಆರ್. ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನವೀನ್ ದಂಡೋತಿ ಮತ್ತು ಶಿವಪ್ರಸಾದ್ ಐದು ಜನರ ಸ್ನೇಹಿತರ ಬಳಗದ ಉಳಿದಿಬ್ಬರು ಸದಸ್ಯರಾಗಿ ಬಣ್ಣ ಹಚ್ಚಿದ್ದಾರೆ. ಅಮೋಘ ಸಿದ್ದಾರ್ಥ, ಗಜ ನೀನಾಸಮ್ ಮತ್ತು ಪ್ರಜ್ವಲ್ ಗೌಡ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೆ, ರಂಗಭೂಮಿ ಕಲಾವಿದರಾದ ರಮಾನಂದ ಐನಕೈ ಹಾಗೂ ವಿಶಿಷ್ಟ ಪಾತ್ರಕ್ಕೆ ಜನಪ್ರಿಯ ನಿರ್ದೇಶಕ, ನಟ ಬಿ ಸುರೇಶ್ ಜೀವ ತುಂಬಿದ್ದಾರೆ.

Manaroopa title poster released

ಚಿತ್ರವು ಸಾಗಿದಂತೆ ಕಾಡಿನ ನಿಗೂಢ ಪರಿಸರದಲ್ಲಿ ಅಡಗಿದ್ದ ಸಂಗತಿಗಳು ಬಿಚ್ಚಿಕೊಳ್ಳುತ್ತಾ, ಕಾಡಿನ ಪರ್ವತಪಂಕ್ತಿಗಳು, ಹೊಳೆ ತೊರೆಗಳೇ ಚಿತ್ರಕ್ಕೆ ಹಿನ್ನೆಲೆಯನ್ನು ಒದಗಿಸುತ್ತಾ ಕಥೆಗೆ ಒತ್ತಾಸೆಯಾಗಿ ನಿಲ್ಲುತ್ತವೆ. ಪತ್ರಕರ್ತ, ಸಾಹಿತಿ ಮಹಾಬಲ ಸೀತಾಳಭಾವಿ ಅವರು ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಗೋವಿಂದರಾಜ್ ‍ರವರ ಕ್ಯಾಮೆರಾ ಕಣ್ಣಿನಲ್ಲಿ ದಟ್ಟ ಕಾಡಿನ ನಿಗೂಢತೆ, ನೀರವತೆ ಹಾಗೂ ಮುಕ್ತತೆ ಮನೋಜ್ಞವಾಗಿ ಮೂಡಿಬಂದಿದ್ದರೆ, ಸರವಣರವರು ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ.

More from Filmibeat

English summary
Manaroopa title poster released: A psychological crime thriller film revolving around different shades of human being set to enthrall audience.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X