ಬಡವಾದ ಮಂಡ್ಯ ರಾಜಕಾರಣ: ಚುನಾವಣೆಯಲ್ಲಿ ಸ್ಫರ್ಧಿಸುವಂತೆ 'ಅಭಿ'ಗೆ ಅಭಿಮಾನಿಗಳ ಒತ್ತಡ.!
ಮೈಸೂರು, ನವೆಂಬರ್ 28 : ಮಂಡ್ಯದ ರಾಜಕಾರಣದಲ್ಲೇ ಹೊಸ ಸಂಚಲನವನ್ನು ಉಂಟು ಮಾಡಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಕಳೆದ 3 ದಿನಗಳ ಕೆಳಗಷ್ಟೇ ವಿಧಿವಶರಾದರು. ಅವರ ಸಾವಿನ ರೋದನೆಯ ಬಳಿಕ ಮಂಡ್ಯದ ರಾಜಕಾರಣ ಆಕರ್ಷಣೆ ಕಳೆದುಕೊಂಡಂತಾಗಿದೆ.
ಎಂತಹ ಸನ್ನಿವೇಶದಲ್ಲೇ ಆಗಲಿ.. ಯಾವುದನ್ನೂ ಸೀರಿಯಸ್ಸಾಗಿ ಸ್ವೀಕರಿಸಿದೇ ತಮ್ಮ ಹಾಸ್ಯ ಚಟಾಕಿಯಿಂದಲೇ ಜಿಲ್ಲೆಯ ರಾಜಕಾರಣವನ್ನು ಆಳೆತ್ತರಕ್ಕೆ ಕೊಂಡೊಯ್ದಿದ್ದ ಅಂಬಿಯನ್ನು ಎಂದಿಗೂ ಜನ ಮರೆಯುವುದಿಲ್ಲ.
ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧೆ ಮಾಡುವಂತೆ ಕೈ ನಾಯಕರು ಎಷ್ಟೇ ಗೋಗರೆದೂ ತಮ್ಮ ಪಟ್ಟನ್ನು ಕಿಂಚಿತ್ತೂ ಕದಲಿಸಿದೆ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಣೆ ಮಾಡಿದ್ದರು. ಆದರೆ ಆ ನಂತರವೂ ಜಿಲ್ಲೆಯ ಬಗ್ಗೆ, ರಾಜನೀತಿ ಬಗ್ಗೆ ತಮ್ಮ ವಿಶೇಷ ಧಾಟಿಯಿಂದ ಹೇಳಿಕೆ ನೀಡುತ್ತಿದ್ದರು. ಅಂಬರೀಶ್ ಗೈರುಹಾಜರಿ ಜನರಿಗೆ ಗೊತ್ತಾಗಿರಲಿಲ್ಲ. ಈಗ ಅವರು ನಿಧನ ಹೊಂದಿದ ಕಾರಣ ಅವರ ಜಾಗವನ್ನು ತುಂಬುವ ಇನ್ನೊಬ್ಬ ರಾಜಕಾರಣಿ ಜಿಲ್ಲೆಯಲ್ಲಿ ಸಿಗುವುದಿಲ್ಲ. ಸದ್ಯ ಜಿಲ್ಲೆಯಲ್ಲಿ ಒಂದು ರೀತಿಯ ಶೂನ್ಯ ಆವರಿಸಿದಂತಾಗಿದೆ. ಹೀಗಾಗಿ, ಮುಂಬರುವ ಚುನಾವಣೆಯಲ್ಲಿ ಅಂಬರೀಶ್ ಪುತ್ರ ಅಭಿಷೇಕ್ ಸ್ಪರ್ಧಿಸಲಿ ಅನ್ನೋದು ಅಭಿಮಾನಿಗಳ ಇಚ್ಛೆ. ಮುಂದೆ ಓದಿರಿ...

ಪಕ್ಷಾತೀತ ನಾಯಕ ಅಂಬರೀಶ್
ಚುನಾವಣೆ ಸಂದರ್ಭಗಳಲ್ಲೂ ಬೇರೆ ಪಕ್ಷಗಳ ಮುಖಂಡರೊಂದಿಗೆ ಆತ್ಮೀಯವಾಗಿರುತ್ತಿದ್ದ ಅಂಬರೀಶ್ ಅವರು ಪಕ್ಷಾತೀತ ನಾಯಕರಾಗಿದ್ದವರು. ಎಂದಿಗೂ ಚುನಾವಣಾ ದ್ವೇಷ, ಕೆಸರೆರಚಾಟವನ್ನು ಅವರು ಮಾಡುತ್ತಿರಲಿಲ್ಲ. ಅಂಬರೀಶ್ ಕಾಂಗ್ರೆಸ್ ನಲ್ಲಿದ್ದರೂ ಅವರ ಆಪ್ತರು, ಅಭಿಮಾನಿಗಳು ಜೆಡಿಎಸ್ ನಲ್ಲಿದ್ದರು. ಆದರೆ ಅಂಬರೀಶ್ ಎಲ್ಲರನ್ನು ಒಂದೇ ದೃಷ್ಟಿಕೋನದಿಂದ ನೋಡುತ್ತಿದ್ದರು.

ನಾವಿಕನಿಲ್ಲದ ದೋಣಿ
ನಾವಿಕನಿಲ್ಲದ ದೋಣಿಯಂತಾದ ಮಂಡ್ಯ ರಾಜಕಾರಣದ ಹಡಗು 7 ವಿಧಾನಸಭಾ ಕ್ಷೇತ್ರಗಳಲ್ಲಿ ಸೋಲು, ಲೋಕಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿಯಿಂದಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ನ ಸ್ಥಿತಿ ಅನಿಶ್ಚಿತತೆಯಿಂದ ಕೂಡಿದೆ. ಕಾರ್ಯಕರ್ತರು ಅಸುರಕ್ಷಿತ ಭಾವನೆಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಂಬರೀಶ್ ಸಾವು ಕಾಂಗ್ರೆಸ್ ಪಕ್ಷಕ್ಕೆ ಬಲುದೊಡ್ಡ ನಷ್ಟವಾಗಿದೆ. ಈಗಿನ ಕಾಂಗ್ರೆಸ್ ಸ್ಥಿತಿಯನ್ನು ನಾವಿಕನಿಲ್ಲದ ದೋಣಿ ಎಂದರೂ ತಪ್ಪಾಗದು.

ಕಾಂಗ್ರೆಸ್ ದೋಣಿ ಮುನ್ನಡೆಸುವವರು ಯಾರು.?
ವಿಧಾನಸಭಾ ಚುನಾವಣೆಯಲ್ಲಿ ಸೋತ ಮುಖಂಡರಾರೂ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಲು ಮುಂದೆ ಬಂದಿಲ್ಲ. ಒಲ್ಲದ ಮನಸ್ಸಿನಿಂದಲೇ ಮೈತ್ರಿ ಒಪ್ಪಿಕೊಂಡ ಮುಖಂಡರು ಈಗಲೂ ರಾಜ್ಯಮಟ್ಟದ ಮುಖಂಡರ ಮೇಲೆ ಅಸಮಾಧಾನ ಹೊಂದಿದ್ದಾರೆ. ಹೀಗಾಗಿ ಜಿಲ್ಲೆಯ ಕಾಂಗ್ರೆಸ್ ದೋಣಿಯನ್ನು ಮುನ್ನಡೆಸುವವರಾರೂ ಎಂಬ ಪ್ರಶ್ನೆ ಎದುರಾಗಿದೆ.

ನಾಯಕನ ಯುಗಾಂತ್ಯ
ಅಂಬಿ ನಿಧನದಿಂದ ಮಂಡ್ಯದ ಆಕರ್ಷಕ ನಾಯಕನೊಬ್ಬನ ಯುಗಾಂತ್ಯವಾಗಿದೆ. ಹಲವು ದಶಕಗಳ ಕಾಲ ಅಂಬರೀಶ್ ಜನಸೇವೆ ಮಾಡಿದ್ದರು. ಅವರ ಸಾವು ಜಿಲ್ಲೆಗೆ ಬಲುದೊಡ್ಡ ನಷ್ಟ. ಅಂತೆಯೇ ಕಾಂಗ್ರೆಸ್ ಪಕ್ಷಕ್ಕೂ ನಷ್ಟವಾಗಿದೆ. ಅಂಬರೀಶ್ ಅನುಪಸ್ಥಿತಿಯಲ್ಲಿ ಅವರ ಹೆಸರು ಹೇಳಿಕೊಂಡು ವೈಯಕ್ತಿಕ ಕೆಲಸ ಮಾಡಿಕೊಳ್ಳುತ್ತಿದ್ದ ಒಂದಿಷ್ಟು ಬೆಂಬಲಿಗರು ಜಿಲ್ಲೆಯಲ್ಲಿದ್ದಾರೆ. ಇವರೆಲ್ಲರೂ ಅಂಬರೀಶ್ ಗೆ ಕೆಟ್ಟ ಹೆಸರು ತಂದುಕೊಟ್ಟಿದ್ದರು. ಅವರ ಒಳ್ಳೆಯ ಗುಣಗಳನ್ನು ದುರುಪಯೋಗ ಮಾಡಿಕೊಂಡಿದ್ದರು. ಆದರೇ ಸದ್ಯ ಆ ಪರಿಸ್ಥಿತಿ ಇನ್ಮುಂದೆ ಉಂಟಾಗುವುದು ಅಸಾಧ್ಯದ ಮಾತೇ ಸರಿ.

ಮುಂದಿನ ಅಭ್ಯರ್ಥಿಯಾಗುತ್ತಾರಾ ಅಭಿಷೇಕ್ ?
ಇನ್ನು ಕಳೆದೆರಡು ದಿನಗಳ ಕೆಳಗಷ್ಟೇ ಅಂಬರೀಷ್ ಮೃತದೇಹ ಜಿಲ್ಲಾ ಕ್ರೀಡಾಂಗಣದಲ್ಲಿದ್ದಾಗ ಮಂಡ್ಯದ ಜನರು ಮುಂದಿನ ಎಂ.ಪಿ ಅಭ್ಯರ್ಥಿ ಅಭಿಷೇಕ್ ಗೌಡ ಎಂದು ಕೂಗಿ ಸಾರುತ್ತಿದ್ದರು. ಈ ಕೂಗು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿ ಎಲ್ಲಾ ಪಕ್ಷಗಳ ಮುಖಂಡರ ಕಿವಿಗೆ ಬಿತ್ತು. ಅಂಬರೀಶಣ್ಣನ ರಾಜಕಾರಣದ ನಡೆಯನ್ನು ಅವರ ಪುತ್ರ ಅಭಿಷೇಕ್ ಮುನ್ನಡೆಸಬೇಕು. ಅಪ್ಪನಂತೆಯೇ ಚಿತ್ರರಂಗದಲ್ಲಿ ಇದ್ದುಕೊಂಡೇ ಅವರು ರಾಜಕೀಯ ಮಾಡಬಹುದು. ಅಪ್ಪನಂತೆಯೇ ಮಗನ ಮೇಲೂ ಮಂಡ್ಯ ಜಿಲ್ಲೆಯ ಜನರಿಗೆ ಅಪಾರ ಪ್ರೀತಿ ಇದೆ. ಅವರು ಮುಂದಿನ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದಾದರೂ ಪಕ್ಷದಿಂದ ಕಣಕ್ಕಿಳಿಯಬೇಕು ಎಂದು ಮಂಡ್ಯದ ಅನೇಕರು ಒತ್ತಾಯಿಸಿದ್ದಾರೆ. ಆದರೆ ಅಭಿಷೇಕ್ ಸ್ಫರ್ಧೆ ಮಾಡುತ್ತಾರಾ ಅಥವಾ ಇಲ್ಲವೋ ಎಂಬುದನ್ನು ಖುದ್ದು ಅವರೇ ಸ್ಪಷ್ಟಪಡಿಸದರೆ ಸೂಕ್ತ.!


Click it and Unblock the Notifications











