ರಾಜಕೀಯ ಬಿಟ್ಟು ಸಿನಿಮಾರಂಗಕ್ಕೆ ಕಾಲಿಟ್ಟ ಡಾ.ಕಾವೇರಿ: ಮಂಡ್ಯ ರಮೇಶ್ ಪುತ್ರಿ ಸಾಥ್
ಸಿನಿಮಾ ಲೋಕನೇ ಹಾಗೆ, ಯಾರು ಬೇಕಾದರೂ ಎಂಟ್ರಿ ಕೊಡಬಹುದು. ನಟನೆ, ನಿರ್ದೇಶನ, ನಿರ್ಮಾಣ ಹೀಗೆ ಹತ್ತು ಹಲವಾರು ಆಯ್ಕೆಗಳಿವೆ. ಸ್ಟಾರ್ ಆಗಬೇಕು ಎಂದು ಕನಸು ಕಾಣುವವರು ಒಂದೆಡೆ ಆದರೆ, ತೆರೆ ಹಿಂದೆ ಆದರೂ ಸಹಿ ಬಣ್ಣದ ಲೋಕದಲ್ಲಿ ಕೆಲಸ ಮಾಡಬೇಕು ಎನ್ನುವವರು ಮತ್ತೊಂದೆಡೆ. ಸಿನಿಮಾ ಲೋಕಕ್ಕೆ ಸಾಕಷ್ಟು ಮಂದಿ ಎಂಟ್ರಿ ಕೊಡುತ್ತಾರೆ. ಆದರೆ ಬೆರಳೆಣಿಕೆಯಷ್ಟು ಜನರು ಮಾತ್ರ ಯಶಸ್ಸು ಕಂಡು, ಉಳಿದುಕೊಳ್ಳುತ್ತಾರೆ.
ಇದೀಗ ಸಿನಿಮಾದ ಮೇಲಿನ ಆಸಕ್ತಿಯಿಂದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆಯೊಬ್ಬರು ರಾಜಕೀಯ ತೊರೆದು ಸಿನಿಮಾರಂಗದಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಹೌದು, ಕೊಡಗಿನಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆಯಾಗಿದ್ದ ಡಾ.ಕಾವೇರಿ ಇದೀಗ ರಾಜಕೀಯ ಬಿಟ್ಟು ಬಣ್ಣದ ಲೋಕಕ್ಕೆ ನಿರ್ಮಾಪಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.
ತಮ್ಮ ಸ್ನೇಹಿತರ ಜೊತೆಗೂಡಿ ಡಾ.ಕಾವೇರಿ 'ಸ್ವಾಮಿ ಅಂಡ್ ಫ್ರೆಂಡ್ಸ್' ಸಿನಿಮಾ ಮೂಲಕ ಚೊಚ್ಚಲ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಕಾವೇರಿ ಅವರಿಗೆ ಪ್ರತಿಭಾನ್ವಿತ ತಂಡ ಸಾಥ್ ನೀಡಿದೆ. ವಿಶೇಷ ಎಂದರೆ ಈ ಚಿತ್ರದ ಮೂಲಕ ಖ್ಯಾತ ನಟ ಮಂಡ್ಯ ರಮೇಶ್ ಅವರ ಪುತ್ರಿ ದಿಶಾ ನಾಯಕಿಯಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ದಿಶಾ ಈಗಾಗಲೇ ರಂಗಭೂಮಿಯಲ್ಲಿ ಸಕ್ರೀಯರಾಗಿದ್ದಾರೆ.

ಚಿತ್ರದಲ್ಲಿ ಬಹುತೇಕ ರಂಗಭೂಮಿ ಕಲಾವಿದರೆ ಕಾಣಿಸಿಕೊಳ್ಳುತ್ತಿರುವುದು ಈ ಸಿನಿಮಾದ ವಿಶೇಷ. ಇನ್ನು ಬಿ. ಸುರೇಶ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕನಾಗಿ ರಿಷಿಕ್ ಕಾಣಿಸಿಕೊಳ್ಳುತ್ತಿದ್ದಾರೆ. ನಟನೆ ಜೊತೆಗೆ ರಿಷಿಕ್ ನಿರ್ದೇಶನ ಮತ್ತು ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತು ಕೊಂಡಿದ್ದಾರೆ.
ಶಿವು ಚಾವಡಿ, ಅವಿ ತೇಜ, ಅವಿ ವರ್ಮ, ಚಂದ್ರು ಸೇರಿದಂತೆ ಅನೇಕರು ಬಣ್ಣಹಚ್ಚುತ್ತಿದ್ದಾರೆ. ಈಗಾಗಲೇ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿರುವ ಸಿನಿಮಾತಂಡ ಕೊಡಗು ಮೈಸೂರು ಭಾಗದಲ್ಲಿ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿದೆ. ಕೊರೊನಾ ಮುನ್ನೆಚ್ಚರಿಕೆಯೊಂದಿಗೆ ಸಿನಿಮಾತಂಡ ಚಿತ್ರೀಕರಣಕ್ಕೆ ಹೊರಡಲು ಸಿದ್ಧವಾಗಿದೆ.


Click it and Unblock the Notifications