ಕನ್ನಡ ಚಿತ್ರರಂಗ ಬಿಟ್ಟು ಹೊರ ಹೋಗ್ತಾರ ಡಾಲಿ? ಬೇಸತ್ತ ಧನಂಜಯ್ ಆಡಿದ ಮಾತು ಹಾಗೇ ಇದೆ!
ಕನ್ನಡ ಚಿತ್ರರಂಗ.. ಇಲ್ಲಿ ಸಾಮಾನ್ಯ ಕಲಾವಿದನಾಗಿ ಪ್ರವೇಶಿಸಿ ಮುಂದಿನ ದಿನಗಳಲ್ಲಿ ಸ್ಟಾರ್ ನಟ ಹಾಗೂ ನಟಿಯರಾಗಿ ನಿಲ್ಲಬೇಕೆಂದರೆ ಯಾವ ಗಾಡ್ ಫಾದರ್ ಅಗತ್ಯವೂ ಇಲ್ಲ. ಇದಕ್ಕೆ ಸ್ಪಷ್ಟ ಹಾಗೂ ತಾಜಾ ಉದಾಹರಣೆಗಳೆಂದರೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಧನಂಜಯ್ ಕೂಡ. ಈ ಇಬ್ಬರೂ ಸಹ ಶೂನ್ಯದಿಂದ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು ಹಾಗೂ ಇವರ ಕುಟುಂಬಸ್ಥರಾರೂ ಕೂಡ ಈ ಹಿಂದೆ ಚಿತ್ರಗಳಲ್ಲಿ ಕೆಲಸ ಮಾಡಿದವರಲ್ಲ.
ಹೀಗೆ ಬಣ್ಣದ ಬದುಕಿನ ಕನಸನ್ನು ಹೊತ್ತು ಗಾಂಧಿನಗರಕ್ಕೆ ಪ್ರವೇಶಿಸಿದ ಹಲವಾರು ಪ್ರತಿಭೆಗಳು ಇಂದು ಸ್ಟಾರ್ ಕಲಾವಿದರಾಗಿ ಮೆರೆಯುತ್ತಿದ್ದಾರೆ. ಹೀಗೆ ಸಾಲು ಸಾಲು ಕಷ್ಟಗಳನ್ನು ಎದುರಿಸಿದ ನಂತರ ಸ್ಟಾರ್ ಪಟ್ಟ ಸಿಕ್ಕ ಡಾಲಿ ಧನಂಜಯ್ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದ ಮೂಲಕ ಟಾಲಿವುಡ್ ಅಂಗಳಕ್ಕೂ ಪ್ರವೇಶ ಮಾಡಿದ್ದರು. ಹೀಗೆ ಸಾಕಷ್ಟು ಖ್ಯಾತಿ ಗಳಿಸಿರುವ ಧನಂಜಯ್ ಬಡವ ರಾಸ್ಕಲ್ ಮೂಲಕ ನಿರ್ಮಾಪಕನಾಗಿಯೂ ಸಹ ಬಡ್ತಿ ಪಡೆದುಕೊಂಡರು.
ಬಡವ ರಾಸ್ಕಲ್ ದೊಡ್ಡಮಟ್ಟದ ಯಶಸ್ಸು ಸಾಧಿಸಿದ ನಂತರ ನಿರ್ಮಾಪಕನಾಗಿ ಡಾಲಿ ಧನಂಜಯ್ ಹೆಡ್ ಬುಷ್ ಎಂಬ ಮತ್ತೊಂದು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕಳೆದ ಚಿತ್ರಕ್ಕಿಂತ ಈ ಬಾರಿ ಹೆಚ್ಚು ಬಂಡವಾಳ ಹೂಡಿರುವ ಧನಂಜಯ್ ತಮ್ಮ ಹೆಡ್ ಬುಷ್ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಅದರಂತೆ ಚಿತ್ರ ಒಳ್ಳೆಯ ಓಪನಿಂಗ್ ಕೂಡ ಪಡೆದುಕೊಂಡಿತ್ತು. ಹೀಗೆ ಎಲ್ಲಾ ಒಳ್ಳೆಯ ರೀತಿಯಲ್ಲಿಯೇ ಸಾಗುತ್ತಿರುವಾಗಲೇ ಹೆಡ್ ಬುಷ್ ಚಿತ್ರ ವಿವಾದವೊಂದಕ್ಕೆ ಸಿಲುಕಿದೆ. ಚಿತ್ರದಲ್ಲಿ ವೀರಗಾಸೆ ಕಲೆಗೆ ಹಾಗೂ ಕರಗಕ್ಕೆ ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತಾಗಿ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಧನಂಜಯ್ ಆಡಿದ ಮಾತುಗಳನ್ನು ಕೇಳಿ ಕನ್ನಡ ಸಿನಿ ಪ್ರೇಕ್ಷಕ ವಲಯ ಅಕ್ಷರಶಃ ಬೇಸರಕ್ಕೊಳಗಾಗಿದೆ.

'ನಾನಿಲ್ಲಿ ಇರುವುದೇ ಇಷ್ಟವಿಲ್ಲವೇನೋ'
ನ್ಯೂಸ್ ಫಸ್ಟ್ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಡಾಲಿ ಧನಂಜಯ್ ನನ್ನ ವಿಚಾರವಾಗಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ನಾನು ಕನ್ನಡ ಚಿತ್ರರಂಗದಲ್ಲಿ ಹಾಗೂ ಕರ್ನಾಟಕದ ನೆಲದಲ್ಲಿ ಇರುವುದು ಹಲವರಿಗೆ ಇಷ್ಟವಿಲ್ಲವೇನೋ ಎನಿಸುತ್ತಿದೆ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ. ಡಾಲಿ ಧನಂಜಯ್ ಅವರ ಈ ಸಾಲುಗಳನ್ನು ಕೇಳಿದ ಕನ್ನಡ ಸಿನಿ ರಸಿಕರು ನಾವು ನಿಮ್ಮೊಂದಿಗಿದ್ದೇವೆ ಯಾವುದಕ್ಕೂ ಎದೆಗುಂದಬೇಡಿ ಎಂದು ಕಾಮೆಂಟ್ ಮೂಲಕ ಧೈರ್ಯ ತುಂಬುವ ಕೆಲಸಕ್ಕೆ ಕೈಹಾಕಿದ್ದಾರೆ.

'ಚಿತ್ರವನ್ನು ಚಿತ್ರದ ರೀತಿ ನೋಡಿ, ಓರ್ವ ಕಲಾವಿದನನ್ನು ತುಳಿಯಬೇಡಿ'
ಇನ್ನು ಡಾಲಿ ಧನಂಜಯ್ ವಿರುದ್ಧ ಹಲವೆಡೆ ಆಕ್ರೋಶ ವ್ಯಕ್ತವಾಗಿದೆ. ಚಿತ್ರದಿಂದ ವೀರಗಾಸೆ ಕಲೆಗೆ ಹಾಗೂ ಕರಗಕ್ಕೆ ಅವಮಾನವಾಗುವಂತೆ ಇರುವ ದೃಶ್ಯಗಳನ್ನು ತೆಗೆದು ಹಾಕಿ ಎಂಬ ಕೂಗು ಕೇಳಿಬಂದಿದೆ. ಅಷ್ಟೇ ಅಲ್ಲದೆ ಧನಂಜಯ್ ಅವರ ಕಟ್ ಔಟ್ಗೆ ಮಸಿ ಬಳಿದು ಚಪ್ಪಲಿ ಎಸೆದು ಕೆಲವರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿನಿರಸಿಕರು ನಟನ ವಿರುದ್ಧ ಇಷ್ಟು ದೊಡ್ಡ ಮಟ್ಟದಲ್ಲಿ ಆಕ್ರೋಶ ಹೊರ ಹಾಕುವಂತದ್ದು ಚಿತ್ರದಲ್ಲೇನೂ ಇಲ್ಲ, ಚಿತ್ರಕತೆಗೆ ಅನುಗುಣವಾಗುವಂತೆ ಚಿತ್ರೀಕರಿಸಲಾಗಿದೆ ಚಿತ್ರವನ್ನು ಚಿತ್ರದ ರೀತಿ ನೋಡಿ, ದುಡುಕಿ ಓರ್ವ ಕಲಾವಿದನನ್ನು ತುಳಿಯಬೇಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚಿತ್ರದ ದಿನವೇ ನಮ್ಮ ವಿರುದ್ಧ ಪಿತೂರಿ ನಡೆದಿದೆ ಎಂದಿದ್ದರು ಧನಂಜಯ್ ಹಾಗೂ ಯೋಗಿ
ಇನ್ನು ಡಾಲಿ ಧನಂಜಯ್ ಹಾಗೂ ನಟ ಲೂಸ್ ಮಾದ ಯೋಗಿ ಹೆಡ್ ಬುಷ್ ಚಿತ್ರದ ಬಿಡುಗಡೆಯ ದಿನವೇ ಮುಖ್ಯ ಚಿತ್ರಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಚಿತ್ರದ ವಿರುದ್ಧ ಪಿತೂರಿ ನಡೆಯುತ್ತಿದೆ ಎಂಬ ವಿಷಯವನ್ನು ಹಂಚಿಕೊಂಡಿದ್ದರು. ಏನೇನೋ ನಡೆಯುತ್ತಿದೆ ಎಲ್ಲಾ ನಮ್ಮ ಗಮನಕ್ಕೆ ಬರುತ್ತಿದೆ ಎಂದು ನಟ ಡಾಲಿ ಧನಂಜಯ್ ಹೇಳಿದ್ದರು. ಲೂಸ್ ಮಾದ ಯೋಗಿ ನಮ್ಮನ್ನು ತುಳಿಯುವ ಪ್ರಯತ್ನ ಪಡುತ್ತಿದ್ದಾರೆ ಆದರೆ ಅವರು ಎಷ್ಟೇ ತುಳಿದರೂ ನಾವು ಮೈಕೊಡವಿಕೊಂಡು ಎದ್ದು ಬರುತ್ತೇವೆ ಎಂದು ಹೇಳಿಕೆ ನೀಡಿದ್ದರು.


Click it and Unblock the Notifications











