'ಮಾಸ್ತಿಗುಡಿ' ದುರಂತ: ನಾಗಶೇಖರ್, ರವಿವರ್ಮಗೆ ಷರತ್ತುಬದ್ಧ ಜಾಮೀನು
'ಮಾಸ್ತಿಗುಡಿ' ಚಿತ್ರೀಕರಣದಲ್ಲಿ ಇಬ್ಬರು ಖಳನಟರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹಸ ನಿರ್ದೇಶಕ ರವಿವರ್ಮ ಹಾಗೂ ಚಿತ್ರದ ನಿರ್ದೇಶಕ ನಾಗಶೇಖರ್ ಅವರಿಗೆ ಇಂದು ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ನವೆಂಬರ್ 7 ರಂದು ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ 'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಖಳನಟರಾದ ಅನಿಲ್ ಹಾಗೂ ಉದಯ್ ಸಾವಿಗೀಡಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಸುಂದರ್ ಪಿ ಗೌಡ ಸೇರಿದಂತೆ ಐವರನ್ನ ವಶಕ್ಕೆ ಪಡೆಯಲಾಗಿತ್ತು. ಇವರಲ್ಲಿ ನಾಗಶೇಖರ್ ಹಾಗೂ ರವಿವರ್ಮ ನವೆಂಬರ್ 12 ರಂದು ಮಾಗಡಿ ಪೊಲೀಸರ ಎದುರು ಸ್ವತಃ ತಾವೇ ಶರಣಾಗಿದ್ದರು.

'ಮಾಸ್ತಿಗುಡಿ' ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ರಾಮನಗರ ಜಿಲ್ಲಾ ನ್ಯಾಯಾಲಯ, ಜಾಮೀನುಗಾಗಿ ನಾಗಶೇಖರ್ ಹಾಗೂ ರವಿವರ್ಮ ಸಲ್ಲಿಸಿದ್ದ ಅರ್ಜಿಯನ್ನ ತಿರಸ್ಕರಿಸಿತ್ತು. ತದನಂತರ ಹೈಕೋರ್ಟ್ ಮೊರೆ ಹೋಗಿದ್ದ ಇಬ್ಬರಿಗೂ ಈಗ ಹೈಕೋರ್ಟ್ ಏಕಸದಸ್ಯ ಪೀಠ ಷರತ್ತುಬದ್ಧ ಜಾಮೀನು ನೀಡಿದೆ.

ಹೈಕೋರ್ಟ್ ವಿಧಿಸಿರುವ ಷರತ್ತು ಅನ್ವಯ, ನಾಗಶೇಖರ್ ಹಾಗೂ ರವಿವರ್ಮ ಯಾವುದೇ ಕಾರಣಕ್ಕೂ ನಗರವನ್ನ ಬಿಟ್ಟು ಹೋಗಬಾರದು. ಪೊಲೀಸರ ವಿಚಾರಣೆಗೆ ಸಂಪೂರ್ಣವಾಗಿ ಸಹಕರಿಸಬೇಕು ಎಂದು ಸೂಚನೆ ನೀಡಿ, ಇಬ್ಬರಿಂದಲೂ ತಲಾ ಒಂದು ಲಕ್ಷ ರೂಪಾಯಿ ಬಾಂಡ್ ಸ್ವೀಕರಿಸಿದೆ.
ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದನೇ ಆರೋಪಿಯಾಗಿರುವ ನಿರ್ಮಾಪಕ ಸುಂದರ್ ಪಿ ಗೌಡ, ಹಾಗೂ ಮತ್ತಿಬ್ಬರು ಕೂಡ ಜಾಮೀನುಗಾಗಿ ಅರ್ಜಿ ಸಲ್ಲಿಸಿದ್ದು ಇನ್ನೂ ವಿಚಾರಣೆ ಹಂತದಲ್ಲಿದೆ.


Click it and Unblock the Notifications











