ಮೊದಲ ಬಾರಿ ಮಗನ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ ಮೇಘನಾ ರಾಜ್
ತಾಯಿಯಾಗಿರುವ ಚಿರು ಪತ್ನಿ ಮೇಘನಾ ರಾಜ್ ಇದೇ ಮೊದಲ ಬಾರಿಗೆ ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದಾರೆ.
Recommended Video
ಕಳೆದ ಕೆಲವು ತಿಂಗಳುಗಳಿಂದ ಸತತ ನೋವು ಕಂಡಿದ್ದ ಮೇಘನಾ ರಾಜ್, ಗಂಡು ಮಗುವಿಗೆ ಜನ್ಮ ನೀಡಿ ಈಗ ಮಗನ ಜೊತೆಗೆ ಸಂತಸದ ಕ್ಷಣಗಳನ್ನು ಕಳೆಯುತ್ತಿದ್ದಾರೆ.
ಮೇಘನಾ ರಾಜ್ ಮಗನಿಗೆ ಇಂದು ತೊಟ್ಟಿಲ ಶಾಸ್ತ್ರ ಕಾರ್ಯಕ್ರಮ ಮಾಡಲಾಯಿತು. ತವರು ಮನೆ ಕಡೆಯಿಂದ ತೊಟ್ಟಿಲ ಕಾರ್ಯ ಮಾಡಿದ್ದು, ಕಾರ್ಯಕ್ರಮದ ನಂತರ, ಬಹಳ ದಿನಗಳು ಆದಮೇಲೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು ಮೇಘನಾ ರಾಜ್.

ಮಗನಿಗೆ ಇನ್ನೂ ಹೆಸರು ಇಟ್ಟಿಲ್ಲ: ಮೇಘನಾ
ಮಗನಿಗೆ ಇನ್ನೂ ಹೆಸರು ಇಟ್ಟಿಲ್ಲ. ಚಿರು ಮಗನಲ್ವಾ ಹಾಗಾಗಿ ವಿಶೇಷವಾದ ಹೆಸರನ್ನು ಇಡಬೇಕೆಂದಿದ್ದೇವೆ. ಆದರೆ ಹೆಸರು ಜಾತಕ ಪ್ರಕಾರವೇ ಇಡುತ್ತೇವೆ. ಒಳ್ಳೆಯ ಹೆಸರು ಆಗಿರಬೇಕು, ಕರೆಯಲೂ ಸಹ ಚೆನ್ನಾಗಿರಬೇಕು, ಶೀಘ್ರದಲ್ಲಿಯೇ ಸಮಯ ನೋಡಿಕೊಂಡು ನಾಮಕರಣ ಮಾಡುತ್ತೇವೆ ಎಂದರು ಮೇಘನಾ ರಾಜ್.

ಮಗ ಅಳುವುದು ಕಡಿಮೆ, ನಗುತ್ತಲೇ ಇರುತ್ತಾನೆ: ಮೇಘನಾ
ಮಗನ ಬಗ್ಗೆ ಮಾತನಾಡಿದ ಮೇಘನಾ, ನನ್ನ ಮಗ ಅಳುವುದು ಬಹಳ ಕಡಿಮೆ, ನಗುತ್ತಲೇ ಇರುತ್ತಾನೆ, ನಿದ್ದೆಯಲ್ಲಿಯೂ ನಗುತ್ತಿರುತ್ತಾನೆ. ಮಗನನ್ನು ನೋಡಿದವರೆಲ್ಲಾ ಚಿರು ಸರ್ಜಾ ಪಡಿಯಚ್ಚು ಎನ್ನುತ್ತಿದ್ದಾರೆ ಎಂದು ನಗುತ್ತಾ ಹೇಳಿದರು ಮೇಘನಾ.

ಮಗನಿಗಾಗಿ ವಿಶೇಷ ತೊಟ್ಟಿಲು
ಇಂದು ತೊಟ್ಟಿಲು ಶಾಸ್ತ್ರ ಮಾಡಿದ್ದಾರೆ, ಇದು ತಾಯಿ ಮನೆ ಕಡೆಯಿಂದ ಮಾಡುವ ಶಾಸ್ತ್ರ. ಮಗನಿಗೆ ಗದಗದಿಂದ ವಿಶೇಷ ತೊಟ್ಟಿಲು ತರಿಸಿದ್ದೆವು. ನಾಮಕರಣ ಆದಷ್ಟು ಬೇಗ ಒಳ್ಳೆಯ ಸಮಯ, ಮುಹೂರ್ತ ನೋಡಿ ಮಾಡುತ್ತೇವೆ ಎಂದಿದ್ದಾರೆ ಮೇಘನಾ.

ಮೊಮ್ಮಗನಿಗಾಗಿ ತಿರುಪತಿಗೆ ಹೋಗಿದ್ದ ಸುಂದರ್ ರಾಜ್
ತಂದೆ ಸುಂದರ್ ರಾಜ್ ಬಗ್ಗೆ ಮಾತನಾಡಿದ ಮೇಘನಾ, 'ಅಪ್ಪ ತಿರುಪತಿಗೆ ಹೋಗಿದ್ದಿದ್ದು ನನಗಾಗಿ ಅಲ್ಲ, ಮೊಮ್ಮಗನಿಗಾಗಿ ಹರಕೆ ತೀರಿಸಲು ಹೋಗಿದ್ದರು' ಎಂದರು. ಜೂನ್ 17 ರಂದು ಚಿರಂಜೀವಿ ಸರ್ಜಾ ಕಾಲವಾದಾಗ ಪತ್ನಿ ಮೇಘನಾ ರಾಜ್ ಗರ್ಭಿಣಿ ಆಗಿದ್ದರು. ಅಕ್ಟೋಬರ್ 22 ಮೇಘನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.


Click it and Unblock the Notifications











