ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ: ಚಿತ್ರರಂಗದ ಬೆಂಬಲ
ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷವು ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ. ಪಾದಯಾತ್ರೆಗೆ ಬೆಂಬಲ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹಲವು ಸಂಘ, ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ. ಅಂತೆಯೇ ಚಿತ್ರೋದ್ಯಮದ ಬೆಂಬಲಕ್ಕೂ ಕೋರಿದ್ದಾರೆ.
Recommended Video
ಮೇಕೆದಾಟು ಪಾದಯಾತ್ರೆಗೆ ಬೆಂಬಲ ನೀಡಬೇಕೆ? ಯಾವ ರೀತಿಯ ಬೆಂಬಲ ಎಂಬಿತ್ಯಾದಿ ವಿಷಯಗಳನ್ನು ಚರ್ಚಿಸಲು ಇಂದು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಿನಿಮಾ ಉದ್ಯಮದ ಪ್ರಮುಖರು ಸಭೆ ನಡೆಸಿದ್ದಾರೆ.
ಮೇಕೆದಾಟು ಯೋಜನೆಯ ಅಗತ್ಯವನ್ನು ಮನಗಂಡು ಯಾವುದೇ ಪಕ್ಷಕ್ಕೆ ಬೆಂಬಲ ನೀಡುವ ಬದಲಿಗೆ ಯೋಜನೆಯ ಅನುಷ್ಟಾನಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ''ನಾವು ಯಾವುದೇ ಪಕ್ಷದ ಪರ ಅಥವಾ ವಿರುದ್ಧ ಈ ಹೋರಾಟಕ್ಕೆ ಬೆಂಬಲ ನೀಡುತ್ತಿಲ್ಲ. ಬದಲಿಗೆ ರಾಜ್ಯಕ್ಕೆ ಮೇಕೆದಾಟು ಯೋಜನೆಯ ಅಗತ್ಯ ಮನಗಂಡು ಯೋಜನೆಗೆ ಬೆಂಬಲ ನೀಡುತ್ತಿದ್ದೇವೆ'' ಎಂದಿದ್ದಾರೆ.
''ಚಿತ್ರರಂಗದವರು ಯಾವ ದಿನವಾದರೂ ಸರಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಹುದು ಯಾರಿಗೂ ಒತ್ತಾಯವಿಲ್ಲ. ಆದರೆ ಎಲ್ಲರಿಗೂ ಮನವಿಯನ್ನಂತೂ ಮಾಡಲಾಗುತ್ತದೆ. ಕೊನೆಯ ದಿನದ ಕಾರ್ಯಕ್ರಮದಲ್ಲಿ ಒಟ್ಟಾಗಿ ಪಾಲ್ಗೊಂಡರೆ ಉತ್ತಮ ಎಂಬ ಸಲಹೆ ದಾಟಿಸಲಾಗಿದೆ'' ಎಂದು ಮಾಹಿತಿ ನೀಡಿದರು.
''ಇದು ಬಹಳ ಸೂಕ್ಷ್ಮ ಸಮಯ, ಕೊರೊನಾ ಹೆಚ್ಚುತ್ತಿರುವ ಸಮಯದಲ್ಲಿ ನಾವು ಯಾರ ಮೇಲೆಯೂ ಬಲವಂತ ಹೇರಲು ಸಾಧ್ಯವಿಲ್ಲ. ಇದು ಅಂಟು ರೋಗ ಮತ್ತು ಪ್ರಾಣಕ್ಕೆ ಕುತ್ತು ತಂದೊಡ್ಡುವ ಭೀತಿ ಇರುವ ಕಾಯಿಲೆ ಹಾಗಾಗಿ ಯಾರಿಗೂ ಬಲವಂತ ಇಲ್ಲ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದು ಅವರವರ ಆಯ್ಕೆಗೆ ಬಿಟ್ಟ ವಿಚಾರ. ಅಲ್ಲದೆ ದೊಡ್ಡ ನಟರು ಬಂದಾಗ ಜನ ಹೆಚ್ಚಾಗಿ ನೂಕು-ನುಗ್ಗಲು ಉಂಟಾಗುತ್ತದೆ. ಅದು ನಟರಿಗೂ ಸಮಸ್ಯೆ, ಜನರಿಗೂ ಸಮಸ್ಯೆ. ನಮ್ಮಿಂದ ಬೇರೆಯವರಿಗೆ ಕೊರೊನಾ ಬಂತು ಎಂಬ ಆಪಾದನೆ ನಮಗೆ ಬೇಡ'' ಎಂದಿದ್ದಾರೆ ಮುಖ್ಯ ಮಂತ್ರಿ ಚಂದ್ರು.
ರಾಕ್ ಲೈನ್ ವೆಂಕಟೇಶ್ ಅವರು ಚಿತ್ರರಂಗದ ಗಣ್ಯರೊಂದಿಗೆ, ನಟರೊಟ್ಟಿಗೆ, ನಟಿಯರೊಟ್ಟಿಗೆ ಈ ವಿಷಯವಾಗಿ ಸಂವಹನ ಮಾಡುತ್ತಿದ್ದಾರೆ. ಈಗಾಗಲೇ ಹಲವು ನಟರು ಮೇಕೆದಾಟು ಯೋಜನೆಗೆ ಬೆಂಬಲ ನೀಡಿದ್ದಾರೆ. ಚಿತ್ರರಂಗದ ಹಲವು ಮಂದಿ ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











