ಸೆಂಚುರಿ ಸ್ಟಾರ್ ಶಿವಣ್ಣನ ಜೊತೆ ಮಿಥುನ್ ಚಕ್ರವರ್ತಿ
ಭಾರತೀಯ ಚಿತ್ರರಂಗದ ಅಗ್ರಗಣ್ಯ ನಟರಲ್ಲಿ ಒಬ್ಬರಾಗಿರುವ ಮಿಥುನ್ ಚಕ್ರವರ್ತಿ ಕನ್ನಡಕ್ಕೆ ಅಡಿಯಿಡಲಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಭಕ್ತಿಪ್ರಧಾನ ಚಿತ್ರ 'ಸಂತೆಯಲ್ಲಿ ನಿಂತ ಕಬೀರ' ಚಿತ್ರದಲ್ಲಿ ಅವರು ಗುರು ರಮಾನಂದರಾಗಿ ಕಾಣಿಸಲಿದ್ದಾರೆ.
ಇಂದ್ರಬಾಬು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದ್ದು, ಶಿವರಾಜ್ ಕುಮಾರ್ ಅವರ ವೃತ್ತಿಬದುಕಿನಲ್ಲಿ ಈ ಚಿತ್ರ ಹೊಸ ಮೈಲಿಗಲ್ಲಾಗಲಿದೆ. ಈ ಪಾತ್ರಕ್ಕೆ ಬಿಗ್ ಬಿ ಅಮಿತಾಬ್ ರನ್ನು ಕರೆತರಲು ಮುಂದಾಗಿದ್ದರು ನಿರ್ದೇಶಕರು. [ಸಂತನಾಗಿ 'ಸಂತೆಯಲ್ಲಿ ನಿಂತ ಕಬೀರ' ಶಿವಣ್ಣ]
ಆದರೆ ಈಗ ಮಿಥುನ್ ಚಕ್ರವರ್ತಿ ಅವರನ್ನು ಸಂಪರ್ಕಿಸಲಾಗಿದೆ. ಮಿಥುನ್ ಚಕ್ರವರ್ತಿ ಕಡೆಯಿಂದ ಗ್ರೀನ್ ಸಿಗ್ನಲ್ ಸಿಗುವುದೊಂದು ಬಾಕಿ ಇದೆ. ಸ್ವಾಮಿ ನಿತ್ಯಾನಂದರನ್ನು ಹೋಲುವ ಪಾತ್ರದಲ್ಲಿ ಓ ಮೈ ಗಾಡ್ ಚಿತ್ರದಲ್ಲಿ ಮಿಥುನ್ ಚಕ್ರವರ್ತಿ ಮಿಂಚಿದ್ದರು.

ಮಿಥುನ್ ಚಕ್ರವರ್ತಿ ಅವರ ಆ ಪಾತ್ರ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. ಇದೀಗ ಅವರು ಸಂತ ಕಬೀರರ ಗುರುಗಳಾಗಿ ಸ್ಯಾಂಡಲ್ ವುಡ್ ಗೆ ಅಡಿಯಿಡುವ ದಿನಗಳು ದೂರವಿಲ್ಲ. ಇನ್ನು ಕಬೀರ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಕ್ಲೈಮ್ಯಾಕ್ಸ್ ಹಾಗೂ ಹಾಡುಗಳ ಚಿತ್ರೀಕರಣ ಎರಡನೇ ಹಂತದಲ್ಲಿ ಚಿತ್ರೀಕರಿಸಿಕೊಳ್ಳಲಾಗುತ್ತದೆ.
ಚಿತ್ರದ ಶೀರ್ಷಿಕೆ ಸೂಚಿಸುವ ಹಾಗೆ, ಇದು 'ಸಂತ ಕಬೀರ್ ದಾಸ್'ನ ಜೀವನ ಚರಿತ್ರೆ. ಭೀಷ್ಮ ಸಹಾನಿ ಅವರ 'ಕಬೀರ ಕಡಾ ಭಾಝಾರ್' ಕೃತಿಯನ್ನಾಧರಿಸಿ 'ಸಂತೆಯಲ್ಲಿ ನಿಂತ ಕಬೀರ' ಚಿತ್ರಕಥೆ ರಚಿಸಲಾಗಿದೆ.
ಕಬೀರ್ ದಾಸ್ ಆಗಿ ಶಿವಣ್ಣ ಕಾಣಿಸಿಕೊಳ್ಳುತ್ತಿದ್ದರೆ, ಅವರ ತಂದೆ ಪಾತ್ರದಲ್ಲಿ ಓಂ ಪುರಿ ಮತ್ತು ತಾಯಿಯಾಗಿ ಅಕ್ಷತಾ ರಾವ್ ಅಭಿನಯಿಸಲಿದ್ದಾರೆ. ಶಿವಣ್ಣನಿಗೆ ಜೋಡಿಯಾಗಿ ಮಲೆಯಾಳಂ ನಟಿ ಸನುಷ ಇದ್ದಾರೆ. ಕಾಲಿವುಡ್ ನಟ ಶರತ್ ಕುಮಾರ್, ಅವಿನಾಷ್, ಶರತ್ ಲೋಹಿತಾಶ್ವ, ದತ್ತಣ್ಣ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.
ಕಬೀರ್ ದಾಸ್ ಯಶೋಗಾಥೆಯನ್ನ ಕಲಾತ್ಮಕವಾಗಿ ಕಟ್ಟಿಕೊಡುವುದಕ್ಕೆ ರೆಡಿಯಾಗಿರುವುದು ಇಂದ್ರಬಾಬು, ಇದೀಗ ಹೆಸರು ಬದಲಾಯಿಸಿಕೊಂಡಿರುವ 'ಕಬ್ಬಡಿ' ಖ್ಯಾತಿಯ ನರೇಂದ್ರ ಬಾಬು. ಕುಮಾರಸ್ವಾಮಿ ಪತ್ತಿಕೊಂಡ 'ಸಂತೆಯಲ್ಲಿ ನಿಂತ ಕಬೀರ' ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. (ಏಜೆನ್ಸೀಸ್)


Click it and Unblock the Notifications











