ರೇಣುಕಾಚಾರ್ಯ ಬೆಂಬಲಿಗರಿಂದ ಹೊನ್ನಾಳಿಯಲ್ಲಿ ಪುನೀತ್ಗೆ ಸಂಗೀತ ನಮನ
ಅಪ್ಪು ಎಲ್ಲರನ್ನೂ ಅಗಲಿ 11 ದಿನಗಳಾಗಿವೆ. ಬೆಳಗ್ಗೆಯಿಂದಲೇ ಪುನೀತ್ ರಾಜ್ಕುಮಾರ್ ಮನೆಯಲ್ಲಿ ವಿಧಿ ವಿಧಾನದಂತೆ ಪೂಜಾ ಕಾರ್ಯಗಳು ನೆರವೇರುತ್ತಿವೆ. ಅಪ್ಪು ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಸಮಾಧಿಗೆ ಆಗಮಿಸುವುದು ಇನ್ನೂ ನಿಂತಿಲ್ಲ. ಪ್ರತಿ ದಿನ ಸಾವಿರಾರು ಮಂದಿ ಸರದಿಯಲ್ಲಿ ನಿಂತು ಪುನೀತ್ ಸಮಾಧಿಗೆ ಭೇಟಿ ನೀಡುತ್ತಿದ್ದಾರೆ. ಇನ್ನೊಂದು ಕಡೆ ರಾಜ್ಯದ ಹಲವೆಡೆ ಅಭಿಮಾನಿಗಳು, ರಾಜಕೀಯ ಮುಖಂಡರು ಪುನೀತ್ ರಾಜ್ಕುಮಾರ್ಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಮಾಜಿ ಸಚಿವ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕುಟುಂಬದೊಂದಿಗೆ ಬಂದು ಪುನೀತ್ ರಾಜ್ಕುಮಾರ್ ಸಮಾಧಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದರು. ಈಗ ಶಾಸಕ ರೇಣುಕಾಚಾರ್ಯ ಬೆಂಬಲಿಗರು ಅಪ್ಪುಗೆ ಸಂಗೀತ ನಮನದ ಮೂಲಕ ಶ್ರದ್ಧಾಂಜಲಿ ಅರ್ಪಿಸಲು ಮುಂದಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ರೇಣುಕಾಚಾರ್ಯ ಸೇರಿದಂತೆ, ಚಿತ್ರರಂಗದ ಗಣ್ಯರು ಆಗಮಿಸಲಿದ್ದಾರೆ.
ಹೊನ್ನಾಳಿಯಲ್ಲಿ ಸಂಜೆ ಅಪ್ಪುಗೆ ಸಂಗೀತ ನಮನ
ಕರುನಾಡಿನ ಯುವರತ್ನ, ಕನ್ನಡಿಗರ ಕಣ್ಮಣಿ, ಹೃದಯವಂತ ಪುನೀತ್ ರಾಜ್ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬೃಹತ್ ವೇದಿಕೆ ಸಜ್ಜಾಗಿದೆ. ಶಾಸಕ ಹಾಗೂ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿರುವ ರೇಣುಕಾಚಾರ್ಯ ಕ್ಷೇತ್ರ ಹೊನ್ನಾಳಿಯಲ್ಲಿ ಸಂಗೀತ ನಮನ ಕಾರ್ಯಕ್ರಮ ಇಂದು ಸಂಜೆ (ನವೆಂಬರ್ 08 ) ನಡೆಯಲಿದೆ. ಎಂಪಿ ರೇಣುಕಾಚಾರ್ಯ ಬೆಂಬಲಿಗರು ಈ ಶ್ರದ್ಧಾಂಜಲಿ ಹಾಗೂ ಸಂಗೀತ ನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ರಾಜೇಶ್ ಕೃಷ್ಣನ್ ತಂಡದಿಂದ ಸಂಗೀತ ನಮನ: ತಾರೆಯರು ಭಾಗಿ
ಪುನೀತ್ ರಾಜ್ಕುಮಾರ್ ಸಂಗೀತ ನಮನ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ರಾಜೇಶ್ ಕೃಷ್ಣನ್ ಹಾಗೂ ಅವರ ತಂಡ. ರಾಜೇಶ್ ಕೃಷ್ಣನ್ ಜೊತೆ ಅಜಯ್ ವಾರಿಯರ್ ಸೇರಿದಂತೆ ಕನ್ನಡದ ಗಾಯಕರು ಸಂಗೀತ ನಮನ ಸಲ್ಲಿಸಲಿದ್ದಾರೆ. ಇವರೊಂದಿಗೆ ಪುನೀತ್ರನ್ನು ಆಡಿಸಿ ಬೆಳೆಸಿದ ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಹಾಗೂ ಹಾಸ್ಯ ನಟ ಟೆನ್ನಿಸ್ ಕೃಷ್ಣ ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇಂದು (ನವೆಂಬರ್ 08) ಸಂಜೆ 5 ಗಂಟೆಯಿಂದ ಸಂಗೀತ ನಮನ ಕಾರ್ಯಕ್ರಮ ಆರಂಭಗೊಳ್ಳಲಿದೆ. ಸ್ವತಃ ರೇಣುಕಾಚಾರ್ಯ ಅವರೇ ಮುಂದೆ ನಿಂತು ಕಾರ್ಯಕ್ರಮದ ಸಕಲ ಸಿದ್ಧತೆಯನ್ನು ಮಾಡಿದ್ದಾರೆ.

ನೇತ್ರದಾನಕ್ಕೆ ಮುಂದಾಗಿದ್ದ ರೇಣುಕಾಚಾರ್ಯ ಇಡೀ ಕುಟುಂಬ
ಶ್ರದ್ಧಾಂಜಲಿ ಹಾಗೂ ಸಂಗೀತ ನಮನ ಕಾರ್ಯಕ್ರಮ ಅಷ್ಟೇ ಅಲ್ಲ. ಇದೇ ವೇದಿಕೆ ಮೇಲೆ ನೇತ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶಾಸಕ ಎಂ ಪಿ ರೇಣುಕಾಚಾರ್ಯ ಕೆಲ ದಿನಗಳ ಹಿಂದೆ ಕುಟುಂಬ ಸಮೇತ ಪುನೀತ್ ರಾಜ್ಕುಮಾರ್ ಸಮಾಧಿಗೆ ಭೇಟಿ ನೀಡಿದ್ದರು. " ಅಪ್ಪುವನ್ನು ಮಾದರಿಯನ್ನಾಗಿಟ್ಟುಕೊಂಡು ನಮ್ಮ ಕುಟುಂಬದ ಎಲ್ಲಾ ಸದಸ್ಯರೂ ನೇತ್ರದಾನ ಮಾಡುವ ನಿರ್ಣಯ ಮಾಡಿದ್ದೇವೆ'' ಎಂದು ಮಾಧ್ಯಮಗಳಿಗೆ ಹೇಳಿದ್ದರು. ಅಲ್ಲದೆ "ಅಪ್ಪು ಅವರ ಅಕಾಲಿಕ ಮರಣ ಕುಟುಂಬಕ್ಕೆ, ಕನ್ನಡ ನಾಡಿನ ಜನರಿಗೆ, ಅವರ ಅಭಿಮಾನಿಗಳಿಗೆ ದುಃಖ ತಂದಿದೆ. ಪುನೀತ್ ರಾಜ್ಕುಮಾರ್ ಅವರ ಸಮಾಜ ಸೇವೆಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಸರ್ಕಾರಿ ಶಾಲೆಗಳು, ಗೋಶಾಲೆಗಳು, ಆಶ್ರಮ, ಬಡವರ ವಿದ್ಯಾಭ್ಯಾಸಕ್ಕೆ ಹಣ ನೀಡಿವ ಮೂಲಕ ಸೇವೆಗಳನ್ನು ಮಾಡಿದ್ದಾರೆ. ಅಪ್ಪು ಮುಂದೆ ನಾವು ಏನೂ ಅಲ್ಲ. ಪುನೀತ್ ಸಹಾಯ ಮಾಡುತ್ತಿದ್ದ ಮೈಸೂರಿನ ಶಕ್ತಿಧಾಮಕ್ಕೆ ತಾನೂ ಕೈಲಾದ ಸಹಾಯ ಮಾಡುತ್ತೇನೆ'' ಎಂದಿದ್ದರು ರೇಣುಕಾಚಾರ್ಯ.

ಈಗ ರೇಣುಕಾಚಾರ್ಯವರ ಬೆಂಬಲಿಗರು ಪುನೀತ್ ರಾಜ್ಕುಮಾರ್ ಅವರಿಗೆ ನಮನ ಸಲ್ಲಿಸಲು ಮುಂದಾಗಿದ್ದಾರೆ. ಹೊನ್ನಾಳಿಯ ಕೆಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ವೇದಿಕೆ ಸಜ್ಜಾಗಿದೆ. ಸಿನಿಮಾ ಕ್ಷೇತ್ರದ ಗಣ್ಯರ ಜೊತೆಗೆ ಸ್ಥಳೀಯ ರಾಜಕೀಯ ಮುಖಂಡರು ಹಾಗೂ ಹೊನ್ನಾಳಿಯ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.


Click it and Unblock the Notifications











