ಪುನೀತ್ ರಾಜ್ಕುಮಾರ್ಗೆ 650 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಶ್ರದ್ಧಾಂಜಲಿ
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿಗೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಪುನೀತ್ ರಾಜ್ಕುಮಾರ್ ನಮ್ಮೊಂದಿಗೆ ಇಲ್ಲ ಅನ್ನೋ ಸತ್ಯವನ್ನು ಇನ್ನೂ ಯಾರೂ ಒಪ್ಪಿಕೊಳ್ಳಲು ರೆಡಿಯಿಲ್ಲ. ಆದರೆ, ವಿಧಿ ಆಡಿದ ಈ ಘೋರ ಆಟವನ್ನು ಶಪಿಸದೆ ಬೇರೆ ವಿಧಿಯಿಲ್ಲ. ಅಪ್ಪು ಅಪಾರ ಅಭಿಮಾನಿ ಬಳಗವನ್ನು ಅಗಲಿ 10 ದಿನಗಳಾಗಿದೆ. ಇದೇ ನೋವಲ್ಲಿ ನವೆಂಬರ್ 07ರಂದು ಪ್ರದರ್ಶಕರು ವಲಯದಿಂದ ಥಿಯೇಟರ್ ಮಾಲೀಕರು ಹಾಗೂ ಚಿತ್ರಮಂದಿರದ ಸಿಬ್ಬಂದಿಗಳಿಂದ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮೊದಲೇ ತಿಳಿಸಿದಂತೆ ಕರ್ನಾಟಕದಾದ್ಯಂತ ಏಕಕಾಲಕ್ಕೆ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಪ್ರದರ್ಶಕರ ವಲಯ ತೀರ್ಮಾನ ಮಾಡಿತ್ತು. ಬೆಂಗಳೂರಿನಿಂದ ಹಿಡಿದು ಬೆಳಗಾವಿವರೆಗೂ ಎಲ್ಲಾ ಸೆಂಟರ್ಗಳಲ್ಲೂ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಗಿದೆ.
ಕರ್ನಾಟಕ ರಾಜ್ಯಾದ್ಯಂತ 650ಕ್ಕೂ ಹೆಚ್ಚು ಚಿತ್ರಮಂದಿರಗಳಿವೆ. ಇಷ್ಟೂ ಚಿತ್ರಮಂದಿರಗಳಲ್ಲಿ ಮೊದಲೇ ನಿರ್ಧರಿಸಿದಂತೆ ಏಕಕಾಲಕ್ಕೆ ಪುನೀತ್ ರಾಜ್ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಗಿದೆ. ಚಿತ್ರಮಂದಿರದ ಮಾಲೀಕರು ತಮ್ಮ ಚಿತ್ರಮಂದಿರದಲ್ಲಿ ಪುನೀತ್ ರಾಜ್ಕುಮಾರ್ ಅವರ ಫೋಟೊ ಇಟ್ಟು ಪುಷ್ಪ ನಮನ ಸಲ್ಲಿಸಿದ್ದಾರೆ. ಅಂತಯೇ ಪೋಟೋಗೆ ದೀಪ ಬೆಳಗಿ ಶ್ರದ್ಧಾಂಜಲಿ ಕೋರಲಾಗಿದೆ. ಸಂಜೆ ಆರು ಗಂಟೆಯಿಂದಲೇ ಚಿತ್ರಮಂದಿರದಲ್ಲಿ ಶ್ರದ್ಧಾಂಜಲಿ ನೆರವೇರಿಸಲಾಗಿದೆ.

ನಾಗೇಂದ್ರ ಪ್ರಸಾದ್ ರಚಿಸಿದ ಗೀತೆ ಪ್ರಸಾರ
ಪುನೀತ್ ರಾಜ್ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿಯೇ ಕನ್ನಡದ ಖ್ಯಾತ ಸಿನಿ ಸಾಹಿತಿ ಡಾ. ನಾಗೇಂದ್ರ ಪ್ರಸಾದ್ ಗೀತೆಯೊಂದನ್ನು ರಚಿಸಿದ್ದರು. ಅಪ್ಪು ಶ್ರದ್ಧಾಂಜಲಿ ಎಂಬ ಹಾಡನ್ನು ಥಿಯೇಟರ್ಗಳ ಮುಂದೆ ಹಾಡಲಾಯಿತು. ಅಪಾರ ಸಂಖ್ಯೆಯಲ್ಲಿ ಚಿತ್ರಮಂದಿರ ಮುಂದೆ ಸೇರಿದ್ದ ಅಭಿಮಾನಿಗಳು ಚಿತ್ರಮಂದಿರದ ಒಳಗೆ ಮೊಬೈಲ್ ಲೈಟ್ ಬಳಸಿಯೂ ಪವರ್ ಸ್ಟಾರ್ಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ.
ಅಪ್ಪುಗೆ ಥಿಯೇಟರ್ ಮಾಲೀಕರೊಂದಿಗಿತ್ತು ಅವಿನಾಭವ ಸಂಬಂಧ
ಪುನೀತ್ ರಾಜ್ಕುಮಾರ್ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ ಚಿತ್ರಮಂದಿರದ ಮುಂದೆ ಹಬ್ಬದ ವಾತಾವರಣವಿರುತ್ತಿತ್ತು. ಪುನೀತ್ ನಟಿಸಿದ ಪ್ರತಿ ಸಿನಿಮಾವೂ 400 ಚಿತ್ರಮಂದಿರಗಳಲ್ಲಿ ತೆರೆಕಂಡಿವೆ. ಆ ಎಲ್ಲಾ ಚಿತ್ರಮಂದಿರಗಳಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅಲ್ಲದೆ ಸಿನಿಮಾ ಬಿಡುಗಡೆಯಾದಾಗ ಸ್ವತ: ಪುನೀತ್ ರಾಜ್ಕುಮಾರ್ ಕೆಲವು ಜಿಲ್ಲೆಗಳಲ್ಲಿ ವಿಜಯಯಾತ್ರೆ ಮಾಡುತ್ತಿದ್ದರು. ಹೀಗಾಗಿ ಅಪ್ಪು ಹಾಗೂ ಪ್ರದರ್ಶಕರ ನಡುವೆ ಉತ್ತಮ ಸಂಬಂಧವಿತ್ತು. ಈ ಕಾರಣಕ್ಕೆ ಪುನೀತ್ ರಾಜ್ಕುಮಾರ್ ಅಗಲಿಕೆ ನೋವಿನಲ್ಲಿ ರಾಜ್ಯದ್ಯಾಂತ ಚಿತ್ರಮಂದಿರಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.
ನವೆಂಬರ್ 08 ರಂದು ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆ
ನವೆಂಬರ್ 08ರಂದು ಪುನೀತ್ ನಿಧನ ಹೊಂದಿ 11 ದಿನಗಳಾಗುತ್ತೆ. ಹೀಗಾಗಿ ದೊಡ್ಮನೆ ಕುಟುಂಬ 11 ನೇ ದಿನ ಪುಣ್ಯ ಸ್ಮರಣೆಯಂದು ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಲಿದೆ. ಬೆಳಗ್ಗೆಯಿಂದಲೇ ಅಪ್ಪುಗೆ ಪೂಜಾ ಕಾರ್ಯಗಳು ನೆರವೇರಲಿವೆ. ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುವ ಅಣ್ಣಾವ್ರ ಕುಟುಂಬ ನಾಳೆ ಪುಣ್ಯ ಸ್ಮರಣೆ ಯಲ್ಲಿ ಭಾಗಿಯಾಗಲಿದೆ. ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಮನೆಯಲ್ಲಿ ಸಂಬಂಧಿಗಳಿಗೆ ಆಪ್ತರಿಗೆ ಅನ್ನಸಂತರ್ಪಣೆ ಮಾಡಲಾಗುತ್ತದೆ. ನವೆಂಬರ್ 08ರಂದು ಅಭಿಮಾನಿಗಳಿಗೆ ಅವಕಾಶವಿರುವುದಿಲ್ಲ. ನವೆಂಬರ್ 9ರಂದು ಅಭಿಮಾನಿಗಳಿಗಾಗಿ ಪ್ಯಾಲೇಸ್ ಗ್ರೌಂಡ್ನಲ್ಲಿ ಮಧ್ಯಾನ್ನ 12 ಗಂಟೆಯಿಂದ ಭೋಜನದ ವ್ಯವಸ್ಥೆ ಮಾಡಲಾಗಿದೆ.


Click it and Unblock the Notifications











