ದೈವಾರಾಧನೆ ಹಿಂದೂ ಧರ್ಮದ ಭಾಗ ಹೌದಾ ಅಲ್ವಾ ಗೊತ್ತಿಲ್ಲ, ಆದರೆ..: ವೀರೇಂದ್ರ ಹೆಗ್ಗಡೆ
ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಂಗಳೂರಿನಲ್ಲಿ ಕುಟುಂಬ ಸಮೇತ 'ಕಾಂತಾರ' ಸಿನಿಮಾ ವೀಕ್ಷಿಸಿದರು. ಚಿತ್ರ ವಿಭಿನ್ನವಾಗಿ ಮೂಡಿ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು ಚಿತ್ರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಕಾಂತಾರ ಸಿನಿಮಾ ವಿಶ್ವದೆಲ್ಲೆಡೆ ಭಾರೀ ಸದ್ದು ಮಾಡಿದ್ದು ಈ ಸಿನಿಮಾವನ್ನು ದೇಶದೆಲ್ಲೆಡೆ ಸಹಸ್ರಾರು ಸಂಖ್ಯೆಯಲ್ಲಿ ಈಗಾಗಲೇ ವೀಕ್ಷಿಸಿದ್ದಾರೆ. ಸಿನಿಮಾ ಅಷ್ಟರ ಮಟ್ಟಿಗೆ ಜನರನ್ನು ಸೆಳೆಯುತ್ತಿದೆ. ಶುಕ್ರವಾರ ರಾತ್ರಿ ಮಂಗಳೂರಿನ ಭಾರತ್ ಸಿನಿಮಾದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಕುಟುಂಬ ಸಮೇತರಾಗಿ ಕಾಂತಾರ ಸಿನಿಮಾ ವೀಕ್ಷಿಸಿದರು. ಸಿನಿಮಾ ವೀಕ್ಷಣೆ ಬಳಿಕ ಚಿತ್ರವನ್ನು ಹಾಗೂ ಚಿತ್ರ ತಂಡವನ್ನು ಹೊಗಳಿದ್ದು ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
ಪತ್ನಿ ಡಾ.ಹೇಮಾವತಿ ಹೆಗ್ಗಡೆ, ಮೊಮ್ಮಗಳು ಮಾನ್ಯ ಸೇರಿದಂತೆ ಕುಟುಂಬಸ್ಥರೊಂದಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಚಿತ್ರ ವೀಕ್ಷಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಾಂತಾರ ಚಿತ್ರದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.

ಸಿನಿಮಾ ನೋಡಿದ ವೀರೇಂದ್ರ ಹೆಗ್ಗಡೆ
''ಸಿನಿಮಾ ನೋಡದೆ ಬಹಳ ದಿನವಾಗಿತ್ತು. ಕಾಂತಾರದಲ್ಲಿ ದೈವಾರಾಧನೆಯನ್ನು ಬಹಳ ಚೆನ್ನಾಗಿ ರಿಷಬ್ ಶೆಟ್ಟಿ ತೋರಿಸಿದ್ದಾರೆ. ಚಿತ್ರದಲ್ಲಿ ಯುವಕರಿಗೆ ಹೊಸ ಕಥೆ, ಹಳೆಯ ಸ್ಮರಣೆ ಆಗುತ್ತದೆ. ಈ ಚಿತ್ರದಲ್ಲಿ ಹೊಸ ದೃಷ್ಠಿಕೋನವಿದೆ. ಜಾತಿ-ಮತ-ಬೇಧ ಮರೆತು ಸಹಬಾಳ್ವೆ ಮಾಡಬೇಕೆಂಬ ಸಂದೇಶ ಈ ಚಿತ್ರದಲ್ಲಿ ಇದೆ. ಕಾಂತಾರ ಚಿತ್ರ ನೋಡಿ ಬಹಳ ಸಂತೋಷವಾಗಿದೆ. ಚಿತ್ರ ನೋಡಿದ ಬಳಿಕ ಮೂಡ್ ನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಕಲಾವಿದರಿಗೂ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ'' ಮಂಗಳೂರಿನಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ದೈವಗಳು ಸತ್ಯಕ್ಕೆ ಮಾತ್ರ ಬೆಲೆ ಕೊಡುತ್ತವೆ: ವೀರೇಂದ್ರ ಹೆಗ್ಗಡೆ
''ಬೆಳೆಯುತ್ತಿರುವ ತಂತ್ರಜ್ಞಾನವನ್ನು ರಿಷಬ್ ಶೆಟ್ಟಿ ಹೇಗೆ ಬಳಸಿದ್ದಾರೆ ಅನ್ನೋದು ಚಿತ್ರದಲ್ಲಿ ನೋಡಿದ್ದೇನೆ. ಕಲಾವಿದರು, ನಿರ್ಮಾಪಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ದೈವಾರಾಧನೆಯ ನಂಬಿಕೆ ಅಧರ್ಮಕ್ಕೆ ಬೆಂಬಲ ಕೊಡೋದಿಲ್ಲ. ಸಮಾಜದಲ್ಲಿ ಸ್ವಾರ್ಥ, ಹಣ ವಶೀಕರಣ ಪ್ರಯತ್ನ ನಡೆಯುತ್ತದೆ. ಆದರೆ ದೈವಗಳು ಸತ್ಯಕ್ಕೆ ಮಾತ್ರ ಬೆಲೆ ಕೊಡುತ್ತದೆ ಅನ್ನೋದು ಚಿತ್ರದಲ್ಲೂ ಮೂಡಿ ಬಂದಿದೆ'' ಎಂದಿದ್ದಾರೆ.

ಸೂಕ್ಷ್ಮ ವಿಮರ್ಶೆಯ ಅಗತ್ಯವಿಲ್ಲ: ವೀರೇಂದ್ರ ಹೆಗ್ಗಡೆ
ಇನ್ನು ಇದೇ ಸಂಧರ್ಭದಲ್ಲಿ ದೈವಾರಾಧನೆ ಬಗ್ಗೆ ನಟ ಚೇತನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ''ದೈವಾರಾಧನೆ ಹಿಂದೂ ಧರ್ಮದ ಭಾಗ ಹೌದಾ ಅಲ್ವಾ ಅನ್ನೋದು ಗೊತ್ತಿಲ್ಲ. ಆದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲ ಸ್ವಭಾವವನ್ನು ಅರಿಯದೆ ಮಾತನಾಡಿದರೆ ಬೇರೆಯಾಗುತ್ತದೆ. ಧರ್ಮದ ಮೂಲ ಹುಡುಕುತ್ತಾ ಹೋದರೆ ಎಲ್ಲಿಯೂ ಸಿಗೋದಿಲ್ಲ. ನಂಬಿಕೆ ಆಚರಣೆ ನಡವಳಿಕೆ ಸ್ವಭಾವಿಕವಾಗಿ ಬೆಳೆದು ಬಂದಿದೆ. ಇದನ್ನು ನಾವು ಬಿಟ್ಟಿರೋಕೆ ಸಾಧ್ಯವೇ ಇಲ್ಲ. ಅವರು ಹಿಂದೂ ಧರ್ಮದ ಯಾವ ಸೂಕ್ಷ್ಮತೆಯನ್ನು ಹೋಗಿ ನೋಡಿದ್ದಾರೆ ಅನ್ನೋದು ಗೊತ್ತಿಲ್ಲ. ದೈವಾರಾಧನೆಗೆ ಎರಡು ಜಿಲ್ಲೆಯಲ್ಲಿ ವ್ಯಾಪಾಕವಾದ ನಂಬಿಕೆಯಿದೆ. ಇವತ್ತೂ ದೈವಾರಾಧನೆ ಮಾಡುತ್ತೇವೆ, ದೈವದ ನುಡಿಗೆ ಗೌರವ ಕೊಡುತ್ತೇವೆ, ದೈವ ಮೈಮೇಲೆ ಬಂದಾಗ ಮಾತಿಗೆ ಗೌರವ ಕೊಡುತ್ತೇವೆ. ಇದನ್ನು ಧರ್ಮಕ್ಕೆ, ಸೂಕ್ಷ್ಮಕ್ಕೆ ವಿಮರ್ಶೆ ಮಾಡುವ ಅಗತ್ಯವೇ ಇಲ್ಲ'' ಅಂತಾ ಹೇಳಿದ್ದಾರೆ.

ಚರ್ಚೆ ನಡೆಯುತ್ತಿದೆ
'ಕಾಂತಾರ' ಸಿನಿಮಾದಿಂದಾಗಿ ಭೂತಕೋಲ, ದೈವಗಳ ಬಗ್ಗೆ ಜೋರು ಚರ್ಚೆ ನಡೆಯುತ್ತಿದೆ. ವೈದಿಕ-ಅವೈದಿಕ ಚರ್ಚೆ, ಆದಿವಾಸಿಗಳು-ಹಿಂದು ಧರ್ಮ ಚರ್ಚೆಗಳು ಸಹ ಜೋರು ನಡೆಯುತ್ತಿದೆ. ನಟ ಚೇತನ್ ಅಹಿಂಸ ಇತ್ತೀಚೆಗೆ, ದೈವದ ಆಚರಣೆ ಹಿಂದು ಧರ್ಮದ ಆಚರಣೆ ಅಲ್ಲ ಎಂದು ಹೇಳಿರುವುದು ವಿವಾದ ಸೃಷ್ಟಿಸಿದೆ. ಚೇತನ್ ಹೇಳಿಕೆಯನ್ನು ಹಲವರು ಖಂಡಿಸಿದ್ದಾರೆ. ನಟ ಚೇತನ್ ವಿರುದ್ಧ ಹಿಂದು ಸಂಘಟನೆಯೊಂದು ಕಾರ್ಕಳದಲ್ಲಿ ದೂರು ಸಹ ನೀಡಿದೆ.


Click it and Unblock the Notifications











