ಡಾ ರಾಜ್ ಕುಟುಂಬ ನೋಡಿದ ಮೇಲೆ ಅಟ್ಟಹಾಸ ತೆರೆಗೆ

"ವೀರಪ್ಪನ್ ವ್ಯಕ್ತಿತ್ವ, ಅವನ ಕ್ರಿಯೆ, ವ್ಯವಹಾರಗಳನ್ನು ಆಧರಿಸಿ ಸಿನಿಮಾ ಮಾಡಿದ್ದರಿಂದ ಇದಕ್ಕೆ ಹಾಡುಗಳ ಅವಶ್ಯಕತೆ ನನಗೆ ಕಾಣಿಸಲಿಲ್ಲ. ಹೀಗಾಗಿ ಮೂಮೂಲಿ ಸಿನಿಮಾಗಳಂತೆ ಈ ಅಟ್ಟಹಾಸ ಚಿತ್ರದಲ್ಲಿ ಹಾಡು-ಕುಣಿತಗಳು ಕಂಡುಬರುವುದಿಲ್ಲ. ಹಿನ್ನೆಲೆ ಸಂಗೀತ ಪರಿಣಾಮಕಾರಿಯಾಗಿ ಬರಬೇಕೆಂದು ಸಂಪೂರ್ಣವಾಗಿ ಆ ಜವಾಬ್ದಾರಿಯನ್ನು ಸಂದೀಪ್ ಚೌಟರಿಗೆ ವಹಿಸಿದ್ದೆ. ಅವರು ಅತ್ಯದ್ಭುತವಾಗಿ ರೀರೆಕಾರ್ಡಿಂಗ್ ಮಾಡಿಕೊಟ್ಟಿದ್ದಾರೆ.
ಈಗಾಗಲೇ ಚಿತ್ರೀಕರಣ ಮುಗಿದಿರುವ ನನ್ನ ಅಟ್ಟಹಾಸ ಚಿತ್ರ ಸದ್ಯದಲ್ಲೇ ಸೆನ್ಸಾರ್ ಟೇಬಲ್ ಏರಲಿದೆ. ಚಿತ್ರ ಸೆನ್ಸಾರ್ ಆದ ನಂತರ, ರಾಜ್ ಕುಟುಂಬಕ್ಕೆ ಒಂದು ವಿಶೇಷ ಸಂದರ್ಶನ ನಡೆಸಿ ತದನಂತರ ಪ್ರೇಕ್ಷಕರ ಮುಂದೆ ಇಡಲಿದ್ದೇನೆ" ಎಂದಿದ್ದಾರೆ ಎಎಂಆರ್ ರಮೇಶ್. ವೀರಪ್ಪನ್, ಡಾ ರಾಜ್ ಅವರನ್ನು ಕಿಡ್ನಾಪ್ ಮಾಡಿ ಕಾಡಿನಲ್ಲಿಟ್ಟುಕೊಂಡು ನಂತರ ಬಿಡುಗಡೆ ಮಾಡಿದ್ದು ಎಲ್ಲರಿಗೂ ಗೊತ್ತು. ಹೀಗಾಗಿ ವೀರಪ್ಪನ್ ಕಥೆಯಾಧಾರಿತ ಚಿತ್ರ ಅಟ್ಟಹಾಸಕ್ಕೂ ಡಾ ರಾಜ್ ಕುಟುಂಬಕ್ಕೂ ಸಹಜವಾಗಿ ಸಂಬಂಧ ಏರ್ಪಟ್ಟಂತಾಗಿದೆ.
ಆದರೆ ಹಾಡುಗಳಿಲ್ಲದ ಈ ಚಿತ್ರವನ್ನು ಟಿವಿಯಲ್ಲಿ ಪ್ರಚಾರ ಮಾಡುವುದು ಹೇಗೆ? ಈ ಸಮಸ್ಯೆಗೆ ಸ್ವತಃ ಎಎಂಆರ್ ರಮೇಶ್ ಪರಿಹಾರ ಕಂಡುಕೊಂಡಿದ್ದಾರೆ. ಚಿತ್ರದಲ್ಲಿರುವ ಎಲ್ಲಾ ಕಲಾವಿದರನ್ನು ಬಳಸಿಕೊಂಡು ಪ್ರಮೋಶನಲ್ ಹಾಡೊಂದನ್ನು ಚಿತ್ರೀಕರಿಸಿ ಅದನ್ನೇ ವಾಹಿನಿಗಳಲ್ಲಿ ಪ್ರಸಾರ ಮಾಡುವ ಮೂಲಕ ಪ್ರಚಾರಕಾರ್ಯಕ್ಕೆ ಬಳಸಿಕೊಳ್ಳುವುದು. ಹೇಗಿದ್ದರೂ ಅಟ್ಟಹಾಸ ಚಿತ್ರದಲ್ಲಿ ಲಕ್ಷ್ಮೀ ರೈ, ಭಾವನಾ ರಾವ್ ಹಾಗೂ ವಿಜಯಲಕ್ಷ್ಮೀ ಮೂವರು ನಾಯಕಿಯರು ಇದ್ದಾರೆ.
ಹೀಗಾಗಿ ಪ್ರಮೋಶನಲ್ ಹಾಡಲ್ಲಿ ಗ್ಲಾಮರ್ ಅಂಶಕ್ಕೇನೂ ಕೊರತೆಯಾಗುವುದಿಲ್ಲ. ಈಗಾಗಲೇ ಚಿತ್ರದ ಸಂಗೀತ ನಿರ್ದೇಶಕ ಸಂದೀಪ್ ಚೌಟರಿಗೆ ಬದಲಾಗಿ ಬೇರೊಬ್ಬ ನಿರ್ದೇಶಕರಿಗೆ ಆ ಜವಾಬ್ದಾರಿಯನ್ನು ವಹಿಸಿಕೊಟ್ಟಿದ್ದಾರಂತೆ ರಮೇಶ್. ಆದರೆ ಆ ಹಾಡು ಕೇವಲ ವಾಹಿನಿಗಳಲ್ಲಿ ಪ್ರಸಾರವಾಗುವುದೇ ವಿನಃ ಚಿತ್ರದಲ್ಲಿ ಇರುವುದಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ, ಅಟ್ಟಹಾಸ ಚಿತ್ರವು ಡಾ ರಾಜ್ ಕುಟುಂಬ ನೋಡಿದ ಹೊರತೂ ಪ್ರೇಕ್ಷಕರ ಮುಂದೆ ಬರುವುದಿಲ್ಲ. (ಒನ್ ಇಂಡಿಯಾ ಕನ್ನಡ)


Click it and Unblock the Notifications











