ಯಶ್ ಜತೆ ಮುಂದಿನ ಸಿನಿಮಾ ಸುದ್ದಿ: ನಿರ್ದೇಶಕ ನರ್ತನ್ ಹೇಳಿದ್ದೇನು?
ಕೆಜಿಎಫ್ 2 ಚಿತ್ರದ ಬಳಿಕ ನಟ ಯಶ್, 'ಮಫ್ತಿ' ಚಿತ್ರದ ನಿರ್ದೇಶಕ ನರ್ತನ್ ಜತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕಳೆದ ಒಂದು ವರ್ಷದಿಂದ ಹರಿದಾಡುತ್ತಿದೆ. ಅದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ನಾಯಕಿಯಾಗಿ ತಮನ್ನಾ ಭಾಟಿಯಾ ನಟಿಸಲಿದ್ದಾರೆ ಎಂದೂ ಹೇಳಲಾಗಿತ್ತು.
Recommended Video
ಆದರೆ ನಿರ್ದೇಶಕ ನರ್ತನ್ ಈ ಕುರಿತಾದ ಅನೇಕ ಊಹಾಪೋಹಗಳನ್ನು ನಿರಾಕರಿಸಿದ್ದಾರೆ. ಇನ್ನೂ ಸ್ಕ್ರಿಪ್ಟ್ ಕುರಿತು ಚರ್ಚೆ ನಡೆಯುತ್ತಿದೆ. ಯಶ್ ಜತೆ ಈ ಸಿನಿಮಾಮಾಡುವ ವಿಚಾರ ಅಂತಿಮಗೊಂಡಿಲ್ಲ. ಹೀಗಾಗಿ ನಾಯಕಿಯ ಆಯ್ಕೆ ಕೂಡ ಅಂತಿಮವಾಗಿದೆ ಎಂಬ ವರದಿಗಳು ಅಚ್ಚರಿ ಮೂಡಿಸಿದೆ ಎಂದು ನರ್ತನ್ ಹೇಳಿದ್ದಾರೆ. ಯಶ್ ಅವರ ಮುಂದಿನ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಆಗುವ ಸಾಧ್ಯತೆ ಇದೆ. ನರ್ತನ್ ಅದೇ ನಿಟ್ಟಿನಲ್ಲಿ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡುತ್ತಿದ್ದಾರೆ. ಮುಂದೆ ಓದಿ...

ಇನ್ನೂ ಕಥೆ ಬರೆಯುತ್ತಿದ್ದೇನೆ
'ಎರಡು ವರ್ಷದಿಂದ ಯಶ್ ಅವರ ಜತೆ ಸ್ಕ್ರಿಪ್ಟ್ ಕುರಿತು ಚರ್ಚಿಸುತ್ತಿದ್ದೇನೆ. ಆದರೆ ಸಿನಿಮಾ ಲಾಂಚ್ ಮಾಡುವ ಸಮಯ ಇನ್ನೂ ನಿಗದಿಯಾಗಿಲ್ಲ. ಎಲ್ಲವೂ ಅಂತಿಮಗೊಂಡ ಬಳಿಕ ಅದನ್ನು ಪ್ರಕಟಿಸಲಾಗುತ್ತದೆ. ನಾನು ಕಥೆ ಬರೆಯುತ್ತಿದ್ದೇನೆ' ಎಂದು ನರ್ತನ್ ಹೇಳಿದ್ದಾಗಿ ವರದಿಯಾಗಿದೆ.

ಕಥೆ ಒಂದು ಹಂತಕ್ಕೆ ತಲುಪಲಿ
'ಕಥೆ ಒಂದು ಹಂತಕ್ಕೆ ತಲುಪಿದ ಬಳಿಕ ಅದನ್ನು ಯಶ್ ಅವರಿಗೆ ವಿವರಿಸುತ್ತೇನೆ. ಸಿನಿಮಾ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳಲು ನಾನು ಇನ್ನೂ ಅವರನ್ನು ಭೇಟಿ ಮಾಡಿಲ್ಲ. ಲಾಕ್ ಡೌನ್ ಅವಧಿಯಲ್ಲಿ ಈ ರೀತಿಯ ಸುದ್ದಿಗಳು ಹೇಗೆ ಹುಟ್ಟಿಕೊಳ್ಳುತ್ತವೆ ಎನ್ನುವುದು ನನಗೆ ಗೊತ್ತಿಲ್ಲ' ಎಂದು ತಿಳಿಸಿದ್ದಾರೆ.

ತಮನ್ನಾ ನಾಯಕಿಯಾಗುವ ಬಗ್ಗೆ ಗೊತ್ತಿಲ್ಲ
ಯಶ್ಗೆ ನಾಯಕಿಯಾಗಿ ತಮನ್ನಾ ನಟಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದರ ಬಗ್ಗೆ ನರ್ತನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. 'ಕೆಜಿಎಫ್ 1'ರಲ್ಲಿ ತಮನ್ನಾ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ಹಿಂದೆ ನಿಖಿಲ್ ಕುಮಾರ್ ಅಭಿನಯದ 'ಜಾಗ್ವಾರ್' ಚಿತ್ರದಲ್ಲಿಯೂ ಹಾಡೊಂದರಲ್ಲಿ ಅವರು ನರ್ತಿಸಿದ್ದರು. ನರ್ತನ್ ಚಿತ್ರದ ಮೂಲಕ ಅವರು ಕನ್ನಡದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿದೆ. ಇದರ ಬಗ್ಗೆ ತಮಗೆ ಅರಿವಿಲ್ಲ ಎಂದು ನರ್ತನ್ ಹೇಳಿದ್ದಾರೆ.

ತಮಿಳಿನಲ್ಲಿ 'ಮಫ್ತಿ'
ಕನ್ನಡದಲ್ಲಿ 'ಮಫ್ತಿ' ಚಿತ್ರ ಯಶಸ್ಸು ಕಂಡಿತ್ತು. ಇದೇ ಚಿತ್ರವನ್ನು ನರ್ತನ್, ತಮಿಳಿನಲ್ಲಿಯೂ ಮಾಡುತ್ತಿದ್ದಾರೆ. ಸಿಂಬು ನಟನೆಯ ಚಿತ್ರಕ್ಕೆ ನಿರ್ಮಾಪಕರು ಮತ್ತು ಸಿಂಬು ನಡುವಿನ ಮನಸ್ತಾಪ ಅಡ್ಡಿಯಾಗಿ ಚಿತ್ರೀಕರಣ ನಿಂತು ಹೋಗಿತ್ತು. ಲಾಕ್ ಡೌನ್ ತೆರವಾದ ಬಳಿಕ ಮತ್ತೆ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ. ಹೀಗಾಗಿ ಯಶ್ ಜತೆಗಿನ ಸಿನಿಮಾ ಇನ್ನೂ ತಡವಾಗಬಹುದು.


Click it and Unblock the Notifications











