ಕ್ರೇಜಿ ಪುತ್ರನ ಕೈ ಹಿಡಿಯುತ್ತಾ ಮುಗಿಲ್ಪೇಟೆ!
ಕ್ರೇಜಿಸ್ಟಾರ್ ಅನ್ನೋ ಹೆಸರು ಕನ್ನಡ ಚಿತ್ರರಂಗದ ಬಹುದೊಡ್ಡ ಹೆಸರು. ದಶಕಗಳ ಕಾಲ ರವಿಚಂದ್ರನ್ ಚಿತ್ರರಂಗವನ್ನ ಆಳಿದವರು. ಆದರೆ ಅದು ಯಾಕೋ ಅವರ ಮಕ್ಕಳಿಗೆ ಮಾತ್ರ ಅದೃಷ್ಟ ಅನ್ನೋದು ಇನ್ನೂ ಒಲಿದು ಬಂದಿಲ್ಲ. ರವಿಚಂದ್ರನ್ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ ಅನ್ನುವ ಸುದ್ದಿ ಬಂದಾಗಲೇ, ಕ್ರೇಜಿ ಪುತ್ರರ ಲಾಂಚ್ ಅಲ್ಲವಾ ಇದು ಪಕ್ಕಾ ಹಿಟ್ ಸಿನಿಮಾ ಅನ್ನುವ ಮಾತುಗಳು ಗಾಂಧಿನಗರದಲ್ಲಿ ಹರಿದಾಡಿದ್ದವು. ಆದ್ರೆ ಅದು ಇನ್ನೂ ಕೂಡ ಸಾಧ್ಯವಾಗಿಲ್ಲ.
ರವಿಚಂದ್ರನ್ ಮೊದಲ ಮಗ ಮನೋರಂಜನ್ ಸಾಲು ಸಾಲು ಸಿನಿಮಾ ಮಾಡುತ್ತಿದ್ದರೂ, ಅಪ್ಪನಿಗೆ ಸಿಕ್ಕ ಯಶಸ್ಸು ಮಕ್ಕಳಿಗೆ ಸಿಗುತ್ತಿಲ್ಲ. ಈಗ ಮುಗಿಲ್ಪೇಟೆ ಮೂಲಕ ಮನೋರಂಜನ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕೊಡುಗೆ ಅಪಾರ.
ಈಗ ಅವರ ಪುತ್ರ ಮನು ಕೂಡ "ಮುಗಿಲ್ ಪೇಟೆ" ಚಿತ್ರದ ಮೂಲಕ ಯಶಸ್ಸಿನ ಹೆಜ್ಜೆ ಇಡಲು ಸಜ್ಜಾಗಿದ್ದಾರೆ.

ಮನು ಅಭಿನಯದ "ಮುಗಿಲ್ ಪೇಟೆ" ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿ ಚಿತ್ರಕ್ಕೆ, ಯು/ಎ ಪ್ರಮಾಣ ಪತ್ರ ನೀಡಿದೆ. ನವೆಂಬರ್ 19 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಬೆಂಗಳೂರು, ಚಿಕ್ಕಮಗಳೂರು, ಹಾಸನ, ಸಕಲೇಶಪುರ, ಕುಂದಾಪುರ, ತೀರ್ಥಹಳ್ಳಿ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಸಂಬಂಧಗಳಿಗೆ ಬೆಲೆ ಕೊಡುವ ಕುಟುಂಬವೊಂದು, ಸಂಬಂಧಗಳನ್ನು ಕಡೆಗಾಣಿಸುವ ಕುಟುಂಬ ಮತ್ತೊಂದು. ಈ ಎರಡು ಕುಟುಂಬದ ಎರಡು ಜೀವಗಳ ನಡುವೆ ಪ್ರೀತಿ ಆದಾಗ ಏನಾಗುತ್ತದೆ ಎಂಬುವುದೆ "ಮುಗಿಲ್ ಪೇಟೆ"ಯ ಕಥಾವಸ್ತು. ಇದು ಕೌಟುಂಬಿಕ ಸನ್ನಿವೇಶ, ಪ್ರೀತಿ, ಸಾಹಸ, ಉತ್ತಮ ಹಾಸ್ಯ ಎಲ್ಲವನ್ನು ಒಳಗೊಂಡಿದೆ.

ಈ ಚಿತ್ರದ ಬಗ್ಗೆ ಮನೋರಂಜನ್ ಅಪಾರ ಕನಸು ಕಟ್ಟಿ ಕೊಂಡಿದ್ದಾರೆ. ಸಿನಿಮಾ ಯಶಸ್ಸು ಕಾಣೋ ಬಗ್ಗೆ ಮನೋರಂಜನ್ ಮಾತನಾಡಿದ್ದಾರೆ.
"ಎಲ್ಲರ ಸಹಾಯದಿಂದ ನಮ್ಮ ಚಿತ್ರ ಬಿಡುಗಡೆ ಹಂತ ತಲುಪಿದೆ. ಟ್ರೇಲರ್ ಹಾಗೂ ಹಾಡು ಜನಪ್ರಿಯವಾಗಿದೆ. ಇದನ್ನು ನೋಡಿದವರು ನನ್ನ ಪಾತ್ರ ಮೆಚ್ಚಿಕೊಂಡಿದ್ದಾರೆ. ಚಿತ್ರಕ್ಕೂ ಜನಮನ್ನಣೆ ಸಿಗುವ ಭರವಸೆ ಇದೆ ಎಂದಿದ್ದಾರೆ. ಇನ್ನೂ ಸಿನಿಮಾದಲ್ಲಿ ಸಾಧುಕೋಕಿಲ, ರಂಗಾಯಣ ರಘು, ತಾರಾ, ಅವಿನಾಶ್ ಅವರಂತಹ ಉತ್ತಮ ಕಲಾವಿದರು ಅಭಿನಯಿಸಿದ್ದಾರೆ. ಇನ್ನೂ ಈ ಚಿತ್ರದ ತುಣುಕು ಹಾಗೂ ಹಾಡುಗಳನ್ನು ನೋಡಿರುವ ರವಿಚಂದ್ರನ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರಂತೆ.
ಈ ಚಿತ್ರದ ಮತ್ತೊಂದು ವಿಶೇಷ ಅಂದರೆ ಅದು ಸಾಧುಕೋಕಿಲ. ಸಾಧು ಈ ಚಿತ್ರದಲ್ಲಿ ಹದಿನೇಳು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಈ ಮೂಲಕ ಸಾಧು ಕೋಕಿಲ ತಮ್ಮ ಸಿನಿಮಾ ಜರ್ನಿಯಲ್ಲಿ ದಾಖಲೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಸಾಧುಕೋಕಿಲ ಒಂದೇ ಚಿತ್ರದಲ್ಲಿ 17 ಅವತಾರಗಳಲ್ಲಿ ಕಾಣಿಸಿಕೊಂಡಿರೋದು.
ಮುಗಿಲ್ಪೇಟೆಗೆ ಎಸ್. ಭರತ್ ನಿರ್ದೇಶನ ಇದೆ. ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರಕ್ಕೆ ನಿರ್ಮಾಪಕಿ ರಕ್ಷ ವಿಜಯಕುಮಾರ್ ಬಂಡವಾಳ ಹೂಡಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ಚಿತ್ರಕ್ಕಿದೆ.
ಸಾಹೇಬ, ಬೃಹಸ್ಪತಿ ಚಿತ್ರಗಳ ನಂತ್ರ ಮನೋರಂಜನ್ ರವಿಚಂದ್ರನ್ ಹೊಸ ಹೆಜ್ಜೆ ಇಡುತ್ತಿದ್ದಾರೆ. ಮುಗಿಲ್ಪೇಟೆ ಚಿತ್ರ ಅಂದುಕೊಂಡತೆ ಈ ಚಿತ್ರವು ಯಶಸ್ಸು ಕಾಣಲಿದೆಯಾ ಅನ್ನೋದು ಚಿತ್ರ ರಿಲೀಸ್ ಬಳಿಕ ಗೊತ್ತಾಗಲಿದೆ.


Click it and Unblock the Notifications











