ಶಶಾಂಕ್ ಆಕ್ಷನ್ ಕಟ್ ನಲ್ಲಿ 'ಮುಂಗಾರು ಮಳೆ 2'
ಸ್ಯಾಂಡಲ್ ವುಡ್ ನಲ್ಲಿ ಅಮೋಘ ದಾಖಲೆಗೆ ಕಾರಣವಾದ ಚಿತ್ರ ಮುಂಗಾರು ಮಳೆ (2006). ಈ ಚಿತ್ರ ಹಲವರ ವೃತ್ತಿಬದುಕಿಗೆ ಹೊಸ ತಿರುವು ನೀಡಿದ್ದು ಗೊತ್ತೇ ಇದೆ. ಗೋಲ್ಡನ್ ಸ್ಟಾರ್ ಗಣೇಶ್, ಪೂಜಾಗಾಂಧಿ, ಯೋಗರಾಜ್ ಭಟ್ ಅವರ ವೃತ್ತಿಬದುಕಿನಲ್ಲಿ ಹೊಸದೊಂದು ಅಧ್ಯಾಯ ಬರೆದ ಚಿತ್ರ.
ಅದೇ ರೀತಿ ಹಿನ್ನೆಲೆ ಗಾಯಕರಾದ ಸೋನು ನಿಗಮ್, ಕೂನಲ್ ಗಾಂಜಾವಾಲಾ, ಉದಿತ್ ನಾರಾಯಣ್, ಶ್ರೇಯಾ ಘೋಷಾಲ್ ಅವರಿಗೂ ಕನ್ನಡದಲ್ಲಿ ಒಂದು ಭದ್ರ ಬುನಾದಿ ಹಾಕಿಕೊಟ್ಟಂತಹ ಚಿತ್ರ. ಗೀತಸಾಹಿತಿ ಜಯಂತ್ ಕಾಯ್ಕಿಣಿ ಹಾಗೂ ಸಂಗೀತ ನಿರ್ದೇಶಕ ಮನೋಮೂರ್ತಿ ಅವರನ್ನೂ ಹೊಸ ಮೂಸೆಯಲ್ಲಿ ತೋರಿಸಿದ ಚಿತ್ರ.

ಇಷ್ಟೆಲ್ಲಾ ವಿಶೇಷಗಳಿಂದ ಕೂಡಿದ್ದ 'ಮುಂಗಾರು ಮಳೆ ಭಾಗ 2' ಘೋಷಿಸಲಾಗಿದೆ. ಆದರೆ ಭಾಗ 2ಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಶಶಾಂಕ್. ಸದ್ಯಕ್ಕೆ ಅವರು ಕೃಷ್ಣ ಲೀಲಾ ಚಿತ್ರದಲ್ಲಿ ಬಿಜಿಯಾಗಿದ್ದು ಅದು ಮುಗಿದ ಕೂಡಲೆ 'ಮುಂಗಾರು ಮಳೆ 2' ಆರಂಭವಾಗಲಿದೆ.
ಚಿತ್ರದ ಪಾತ್ರವರ್ಗದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಇರುತ್ತಾರೆ. ಆದರೆ ನಾಯಕಿ ಯಾರು ಎಂಬುದು ಇನ್ನಷ್ಟೇ ಆಯ್ಕೆಯಾಗಬೇಕು. ಪೂಜಾಗಾಂಧಿ ಅವರ ಲುಕ್ ಅವರ ಸ್ಟೈಲ್ ಬದಲಾಗಿದೆ. ಮುಂಗಾರು ಮಳೆ ಭಾಗ 2ಕ್ಕೆ ಅವರು ಎಷ್ಟರ ಮಟ್ಟಿಗೆ ಹೊಂದಾಣಿಕೆಯಾಗುತ್ತಾರೆ ಎಂಬುದನ್ನು ಕಾದುನೋಡಬೇಕು.
ಈ ಚಿತ್ರಕ್ಕೆ ಇ ಕೆ ಪಿಕ್ಚರ್ಸ್ ಲಾಂಛನದಲ್ಲಿ ಜೆ ಗಂಗಾಧರ್ ಅವರು ನಿರ್ಮಿಸುತ್ತಿದ್ದಾರೆ. ಬಹಳ ಗ್ಯಾಪ್ ನ ಬಳಿಕ ಸ್ಯಾಂಡಲ್ ವುಡ್ ಗೆ ಬರುತ್ತಿರುವ ಅವರು ಮತ್ತೊಬ್ಬ ಈ ಕೃಷ್ಣಪ್ಪ ಆಗುತ್ತಾರಾ ಎಂಬುದನ್ನು ಕಾದುನೋಡಬೇಕು.


Click it and Unblock the Notifications











