ಬಹುಮುಖ ಪ್ರತಿಭೆ ಗುರುಕಿರಣ್ ಹೊಸ ಜಾದೂ!

ತೆಲುಗು ಚಿತ್ರರಂಗದಲ್ಲಿ ವಿಲನ್ ಆಗಿ ಎಂಟ್ರಿ ಪಡೆದಿದ್ದ ಸ್ಫುರದ್ರೂಪಿ ನಟ ದೇವ್ ಗಿಲ್ 'ಸಾಗರ್' ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದು ಈಗಾಗಲೇ ಸುದ್ದಿಯಾಗಿದೆ. ಅವರ ಪಾತ್ರಕ್ಕೆ ತಮ್ಮ ಧ್ವನಿ ನೀಡಿದ್ದಾರೆ ಗುರುಕಿರಣ್. ಮೊದಲ ಬಾರಿಗೆ ಧ್ವನಿ ನೀಡಿರುವ ಗುರುಕಿರಣ್ ಅವರಿಗೆ ಸಹಜವಾದ ಆತಂಕ ಹಾಗೂ ಕುತೂಹಲವಿದೆ.
ಪ್ರೇಕ್ಷಕರು ತಮ್ಮ ಈ ಕೆಲಸವನ್ನು ಹೇಗೆ ತೆಗೆದುಕೊಳ್ಳಬಹುದು ಎಂಬ ಕುತೂಹಲವೂ ಗುರುಕಿರಣ್ ಅವರಿಗೆ ಇದೆಯಂತೆ. "ಮೊದಲ ಬಾರಿಗೆ ಡಬ್ಬಿಂಗ್ ಮಾಡಿದ್ದೇನೆ. ಪ್ರೇಕ್ಷಕರು ಇಷ್ಟಪಡುತ್ತಾರೋ ಇಲ್ಲವೋ ಎಂಬ ಆತಂಕವಿದೆ" ಎಂದಿದ್ದಾರೆ ಗುರುಕಿರಣ್. ಗುರುಕಿರಣ್ ಅಭಿಮಾನಿಗಳಂತೂ ಚಿತ್ರ ಬಿಡುಗಡೆಯನ್ನೇ ಕಾದಿದ್ದಾರೆ.
ಕೋಟಿ ನಿರ್ಮಾಪಕ ಖ್ಯಾತಿ ರಾಮು ನಿರ್ಮಿಸುತ್ತಿರುವ 'ಸಾಗರ್' ಚಿತ್ರದ ನಾಯಕ ಪ್ರಜ್ವಲ್ ದೇವರಾಜ್. ಈ ಸಾಗರ್ ಚಿತ್ರದ ಅಡಿಬರಹ "A liar boy". ಸಾಗರ್ ಚಿತ್ರಕ್ಕೆ ಮೂವರು ನಾಯಕಿಯರು. ರಾಧಿಕಾ ಪಂಡಿತ್, ಸಂಜನಾ ಹಾಗೂ ಹರಿಪ್ರಿಯಾ. ನಟ ಆದಿ ಲೋಕೇಶ್ ಪ್ರಮುಖ ಪಾತ್ರವೊಂದನ್ನು ಪೋಷಿಸಿದ್ದಾರೆ. ಸ್ವಯಂವರ ಚಂದ್ರು ಕಾಮಿಡಿ ಪಾತ್ರದಲ್ಲಿದ್ದಾರೆ.
ಲವ್, ರೊಮಾನ್ಸ್, ಮದುವೆ.....ಹೀಗೆ ವಿವಿಧ ಅಂಶಗಳ ಸುತ್ತ ಚಿತ್ರದ ಕಥೆ ಇದೆಯಂತೆ. ಎಂ ಡಿ ಶ್ರೀಧರ್ ನಿರ್ದೇಶನದ ಈ ಚಿತ್ರಕ್ಕೆ ಬಿ ಎ ಮಧು ಅವರ ಸಂಭಾಷಣೆ ಬರೆದಿದ್ದಾರೆ. ಇನ್ನೇನು ಸದ್ಯದಲ್ಲೇ ಬಿಡುಗಡೆ ಆಗಲಿರುವ ಸಾಗರ್ ಚಿತ್ರದಲ್ಲಿ ಖಳನಾಯಕ ಪಾತ್ರದ ಗುರುಕಿರಣ್ ಧ್ವನಿಯ ಬಗ್ಗೆ ಪ್ರೇಕ್ಷಕರು ಏನೆನ್ನಬಹುದು ಎಂಬುದು ಸದ್ಯಕ್ಕೆ ಕುತೂಕಲದ ವಿಷಯ. (ಒನ್ ಇಂಡಿಯಾ ಕನ್ನಡ)


Click it and Unblock the Notifications











