ಎರಡು ವರ್ಷದ ನಂತ್ರ ಮತ್ತೆ ಬಂದ ನಾಗತಿಹಳ್ಳಿ ಚಂದ್ರಶೇಖರ್
'ಅಮೇರಿಕಾ..ಅಮೇರಿಕಾ', 'ನನ್ನ ಪ್ರೀತಿಯ ಹುಡುಗಿ', 'ಅಮೃತಧಾರೆ' ಅಂತಹ ಸದಭಿರುಚಿಯ ಚಿತ್ರಗಳನ್ನ ಕೊಟ್ಟ ಖ್ಯಾತ ಲೇಖಕ-ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ತಮ್ಮ ಎರಡು ವರ್ಷಗಳ ತಪಸ್ಸಿನ ನಂತರ ಮತ್ತೆ ಅದ್ಭುತ ದೃಶ್ಯಕಾವ್ಯದೊಂದಿಗೆ ಪ್ರತ್ಯಕ್ಷವಾಗುತ್ತಿದ್ದಾರೆ.
ಈ ಸಲ ಅವರು ಆರಿಸಿಕೊಂಡಿರುವ ಕಾದಂಬರಿ 80 ರ ದಶಕದಲ್ಲಿ ಪ್ರಕಟಗೊಂಡ ದೊಡ್ಡೇರಿ ವೆಂಕಟಗಿರಿರಾವ್ ಅವರ 'ಇಷ್ಟಕಾಮ್ಯ'. ಸ್ವಯಂ ಲೇಖಕರಾದ ನಾಗತಿಹಳ್ಳಿ ಚಂದ್ರಶೇಖರ್ ಅವರು ಅನ್ಯ ಲೇಖಕರ ಕೃತಿಯನ್ನು ಆರಿಸಿಕೊಂಡಿರುವುದು ಗಮನಾರ್ಹ. [ಹೊಸ ಚಿತ್ರ ಕೈಗೆತ್ತಿಕೊಂಡ ನಾಗತಿಹಳ್ಳಿ ಚಂದ್ರಶೇಖರ್]

ಕಿರುತೆರೆಯಲ್ಲಿ ಅರಳುತ್ತಿರುವ 'ಅಗ್ನಿಸಾಕ್ಷಿ' ಧಾರಾವಾಹಿ ಖ್ಯಾತಿಯ ವಿಜಯ್ ಸೂರ್ಯ ಮತ್ತು 'ಅಶ್ವಿನಿ ನಕ್ಷತ್ರ' ಖ್ಯಾತಿಯ ಮಯೂರಿ ಮತ್ತು ಕಾವ್ಯ ಶೆಟ್ಟಿ ಈ ಚಿತ್ರದ ಪ್ರಮುಖ ಪಾತ್ರಧಾರಿಗಳಾಗಿ ಆಯ್ಕೆ ಆಗಿದ್ದಾರೆ.

ಐವತ್ತು ದಿನಗಳ ಒಂದೇ ಶೆಡ್ಯೂಲ್ ನಲ್ಲಿ ಚಿತ್ರೀಕರಣ ನಡೆಯಲಿದೆ. ಚಿಕ್ಕಮಗಳೂರಿನ ಸುಂದರ ಸಹ್ಯಾದ್ರಿ ಶ್ರೇಣಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಮುಂಗಾರು ಮಳೆಯ ಅಬ್ಬರ ನಿಲ್ಲುವುದಕ್ಕೆ ಚಿತ್ರತಂಡ ಕಾಯುತ್ತಿದೆ. [ನಾಗತಿಹಳ್ಳಿ ಚಂದ್ರಶೇಖರ್ ಟೆಂಟ್ ಶಾಲೆ ಆರಂಭ]

ಈ ಬಾರಿಯ ಫಿಲ್ಮ್ ಫೇರ್ ಪ್ರಶಸ್ತಿ ವಿಜೇತ ಅಜನೀಶ್ ಲೋಕನಾಥ್ ರಾಗ ಸಂಯೋಜನೆಯಲ್ಲಿ ತೊಡಗಿದ್ದಾರೆ. ಎರಡು ವರ್ಷಗಳ ಗ್ಯಾಪ್ ನಲ್ಲಿ ಹಲವಾರು ರೀಮೇಕ್ ಚಿತ್ರಗಳನ್ನ ನಿರ್ದೇಶಿಸುವ ಅವಕಾಶಗಳು ಬಂದರೂ, ಅದನ್ನ ಒಪ್ಪದೆ ನಾಗತಿಹಳ್ಳಿ ಚಂದ್ರಶೇಖರ್ ಈ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರಂತೆ. 'ಇಷ್ಟಕಾಮ್ಯ' ಕಾದಂಬರಿ ಆಧಾರಿತ ಈ ಚಿತ್ರಕ್ಕೆ ಸರಳ ಕನ್ನಡ ಹೆಸರಿನ ಅನ್ವೇಷಣೆಯಲ್ಲಿದ್ದಾರೆ 'ಮೇಷ್ಟ್ರು' ನಾಗತಿಹಳ್ಳಿ.


Click it and Unblock the Notifications











