ಎನ್ಟಿಆರ್ ಮೂರನೇ ತಲೆಮಾರಿನ ಕುಡಿ ರಂಗಪ್ರವೇಶ

ಈ ಮೂಲಕ ಟಾಲಿವುಡ್ ಚಿತ್ರರಂಗ ಮತ್ತೊಬ್ಬ ಬಡಾ ಸ್ಟಾರ್ ಪುತ್ರನ ಆಗಮನದ ನಿರೀಕ್ಷೆಯಲ್ಲಿದೆ. ಈಗಾಗಲೆ ತೆಲುಗು ಚಿತ್ರರಂಗದಲ್ಲಿ ಚಿರಂಜೀವಿ ಪುತ್ರ ರಾಮ್ ಚರಣ್ ಹಾಗೂ ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗ ಚೈತನ್ಯ ಹೊಸ ಹವಾ ಎಬ್ಬಿಸಿದ್ದಾರೆ. ಈಗ ಎನ್ಟಿಆರ್ ಕುಟುಂಬದ ವಾರಸ್ದಾರನ ಆಗಮನವಾಗುತ್ತಿದೆ.
ತೆಲುಗು ಚಿತ್ರರಂಗದ ನಟ ನಂದಮೂರಿ ಬಾಲಕೃಷ್ಣ ಅವರ ಲೇಟೆಸ್ಟ್ ಚಿತ್ರ 'ಶ್ರೀಮನ್ನಾರಾಯಣ' ಆಡಿಯೋ ಬಿಡುಗಡೆ ಸಮಾರಂಭ ಹೈದರಾಬಾದಿನಲ್ಲಿ ಸೋಮವಾರ (ಆ.6) ವರ್ಣರಂಜಿತವಾಗಿ ನಡೆಯಿತು. ಈ ಸಂದರ್ಭದಲ್ಲಿ ಬಾಲಯ್ಯ ತಮ್ಮ ಪುತ್ರರತ್ನ ಮೋಕ್ಷಜ್ಞನನ್ನು ಕರೆತಂದಿದ್ದರು.
ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಮೋಕ್ಷಜ್ಞನನ್ನು ವೇದಿಕೆಗೆ ಕರೆತರಬೇಕು ಎಂದು ಅಭಿಮಾನಿಗಳು ಬಾಲಯ್ಯನನ್ನು ವಿನಂತಿಸಿಕೊಂಡರು. ಬಳಿಕ ತಮ್ಮ ಪುತ್ರನನ್ನು ವೇದಿಕೆಗೆ ಕರೆತಂದು ಎಲ್ಲರಿಗೂ ಪರಿಚಯಿಸಿದರು. "ನಿಮ್ಮೆಲ್ಲರ ಆಸೆ ಶೀಘ್ರದಲ್ಲೇ ನೆರವೇರಲಿದೆ" ಎಂದು ಅವರು ಭರವಸೆ ನೀಡಿದರು.
ಸಾರ್ವಜನಿಕ ಸಮಾರಂಭಕ್ಕೆ ಅವರು ಇದೇ ಮೊದಲ ಬಾರಿಗೆ ತಮ್ಮ ಪುತ್ರನ ಜೊತೆ ಆಗಮಿಸಿದ್ದದ್ದು ವಿಶೇಷ. 2014ರ ವೇಳೆಗೆ ತಮ್ಮ ಪುತ್ರರತ್ನನನ್ನು ರಜತ ಪರದೆಗೆ ಪರಿಚಯಿಸಲಿದ್ದಾರಂತೆ. ಅಲ್ಲಿಯವರೆಗೆ ಮೋಕ್ಷಜ್ಞನನ್ನು ಲಂಡನ್ ಗೆ ಕಳುಹಿಸಿ ಮಾರ್ಷಲ್ ಆರ್ಟ್ಸ್, ಡಾನ್ಸ್, ನಟನೆಯಲ್ಲಿ ತರಬೇತಿ ಕೊಡಿಸಲಿರುವುದಾಗಿ ಬಾಲಯ್ಯ ಆತ್ಮೀಯ ವರ್ಗ ತಿಳಿಸಿದೆ.
ತಮ್ಮ ಪುತ್ರರತ್ನನನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದ ಬಳಿಕ ಬಾಲಯ್ಯ ಸಕ್ರಿಯ ರಾಜಕೀಯದಲ್ಲಿ ತೊಡಗಿಕೊಳ್ಳಲಿದ್ದಾರೆ. ತೆಲುಗು ದೇಶಂ ಪಕ್ಷಕ್ಕಾಗಿ ಅವರು ಅಹರ್ನಿಶಿ ದುಡಿಯಲಿದ್ದಾರೆ ಎನ್ನಲಾಗಿದೆ.
ತಾವು ರಾಜಕೀಯದಲ್ಲಿ ತೊಡಗಿಕೊಂಡು ತಮ್ಮ ಮಗನಿಗೆ ಚಿತ್ರರಂಗದಲ್ಲಿ ಭದ್ರ ಬುನಾದಿ ಹಾಕಿಕೊಡಬೇಕು ಎಂಬ ಉದ್ದೇಶ ಅವರದು. ಸದ್ಯಕ್ಕೆ ತನ್ನ ಮಗನ ಚೊಚ್ಚಲ ಚಿತ್ರದ ಕತೆ, ನಿರ್ದೇಶಕ, ಚಿತ್ರಕತೆಯ ಹುಡುಕಾಟದಲ್ಲಿದ್ದು ಚಿರಂಜೀವಿ ಮಗ ರಾಮ್ ಚರಣ್ ಗೆ ಪೈಪೋಟಿ ನೀಡಲು ವೇದಿಕೆ ಸಿದ್ಧವಾಗುತ್ತಿದೆ.


Click it and Unblock the Notifications











