ಆಷಾಡಕ್ಕೆ ಮುನ್ನ ಕನ್ನಡ ಚಿತ್ರೋದ್ಯಮದಲ್ಲಿ ಏನಿದು ಕಲರವ!
ಶ್ರಾವಣಮಾಸದಿ ಪಂಚಾಮೃತ ಅಭಿಷೇಕ, ಧನುರ್ಮಾಸದಲಿ ಪೂಜೆ ಪುನಸ್ಕಾರ ಎನ್ನುವ ಹಾಡಿದೆ. ಅದರಂತೇ, ಆಷಾಡ ಮಾಸದಲಿ ಯಾವುದೇ ಒಳ್ಳೆ ಕೆಲಸವನ್ನು ಶುರುಮಾಡಬಾರದು ಎನ್ನುವ ಧಾರ್ಮಿಕ ನಂಬಿಕೆ ನಮ್ಮಲ್ಲೂ ಇದೆ.
ಅಧಿಕ ಆಷಾಡ ಮಾಸ ಇದೇ ಜೂನ್ ಹದಿನೇಳರಿಂದ ಆರಂಭವಾಗಲಿದೆ. ಈ ಬಾರಿ ಆಷಾಡ ಮಾಸ ವಾಡಿಕೆಯ ಒಂದು ತಿಂಗಳಿನಿಂದ ಹೊರತಾಗಿ ಇನ್ನೂ ಒಂದು ತಿಂಗಳು ಹೆಚ್ಚು ಚಾಲ್ತಿಯಲ್ಲಿರುವುದರಿಂದ ಸ್ಯಾಂಡಲ್ ವುಡ್ ನಲ್ಲಿ ಭಾರೀ ಸಂಚಲನ ಉಂಟಾಗಿದೆ.
ನಂಬಿದ್ರೆ ನಂಬಿ ಬಿಟ್ರೆ ಬಿಡಿ ಆಷಾಡ ಮಾಸಕ್ಕೆ ಮುನ್ನ ಮೂವತ್ತಕ್ಕೂ ಹೆಚ್ಚು ಕನ್ನಡ ಚಿತ್ರ ಸೆಟ್ಟೇರುತ್ತಿರುವುದು / ಮಹೂರ್ತ ಫಿಕ್ಸ್ ಆಗಿರುವುದು ಸದ್ಯ ಗಾಂಧಿನಗರದಲ್ಲಿನ ಬಹುಚರ್ಚಿತ ಸುದ್ದಿ. (ನಿರ್ಮಾಪಕರ ಸತ್ಯಾಗ್ರಹದ ಬಗ್ಗೆ ಶಿವಣ್ಣ ಹೇಳಿದಿಷ್ಟು)
ಇದು ಆಷಾಡ ನಂಬಿಕೆಯವರ ಸುದ್ದಿಯಾದರೆ, ಇದಕ್ಕೆಲ್ಲಾ ಡೋಂಟ್ ಕೇರ್ ಎನ್ನುವ ಚಿತ್ರತಂಡದ ಎಷ್ಟು ಚಿತ್ರಗಳು ಇನ್ನು ಹತ್ತು ದಿನದಲ್ಲಿ ಸೆಟ್ಟೇರುತ್ತೋ ಎನ್ನುವುದರ ಬಗ್ಗೆ ಖಚಿತ ಮಾಹಿತಿಯಿಲ್ಲ.
ಆಷಾಡ ಮಾಸಕ್ಕೆ ಮುನ್ನ ಮಹೂರ್ತ ಮಾಡುವವರು ಒಂದು ಕಡೆಯಾದರೆ, ಮಹೂರ್ತಕ್ಕೆ ಚಾಲನೆ ನೀಡಿ ಚಿತ್ರೀಕರಣಕ್ಕೆ ಕೂಡಾ ಕೆಲವೊಂದು ಚಿತ್ರತಂಡ ಸಿದ್ದತೆ ನಡೆಸಿವೆ.
ಮಹೂರ್ತಕ್ಕೆ ಸಿದ್ದವಾಗಿರುವ / ಮಹೂರ್ತ ಈಗಾಗಲೇ ಮುಗಿಸಿರುವ ಪ್ರಮುಖ ಚಿತ್ರಗಳ ಪಟ್ಟಿಯನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ. ಎಲ್ಲಾ ಚಿತ್ರಗಳಿಗೆ ಒಳ್ಳೆದಾಗಲಿ, ಕನ್ನಡ ಚಿತ್ರೋದ್ಯಮ ಬೆಳಗಲಿ..

ಶಶಾಂಕ್ ನಿರ್ದೇಶನದ ಚಿತ್ರ
ಕೃಷ್ಣಲೀಲಾ ಚಿತ್ರದ ಭರ್ಜರಿ ಯಶಸ್ಸಿನ ನಂತರ ನಿರ್ದೇಶಕ ಶಶಾಂಕ್ ಕೈಗೆತ್ತಿಕೊಂಡಿರುವ ಚಿತ್ರ 'ಮುಂಗಾರು ಮಳೆ 2' . ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಚಿತ್ರಕ್ಕೆ ಇದೇ 11ರಂದು ಮಹೂರ್ತ ನಡೆಯಲಿದೆ ಮತ್ತು ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಭರ್ಜರಿ
ಧ್ರುವ ಸರ್ಜಾ, ರಚಿತಾ ರಾಮ್ ಅಭಿನಯದ "ಭರ್ಜರಿ' ಚಿತ್ರಕ್ಕೆ ಜೂನ್ ಹನ್ನೆರಡರಂದು ಮಹೂರ್ತ. ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶಿಸಿದರೆ, ಕೆ ಪಿ ಶ್ರೀಕಾಂತ್ , ಕನಕಪುರ ಶ್ರೀನಿವಾಸ್ ನಿರ್ಮಿಸುತ್ತಿದ್ದಾರೆ.

ಖದರ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಖದರ್ ಚಿತ್ರಕ್ಕೆ ಜೂನ್ ಏಳಕ್ಕೆ ಮಹೂರ್ತ ಮುಗಿದಿದೆ. ಇದು ಸುರೇಶ್ ನಿರ್ಮಾಣದ ಚಿತ್ರ ಮತ್ತು ಕುಮಾರ್ ಎಸ್ ರಾಜ್ ಚಿತ್ರದ ನಿರ್ದೇಶಕ.

ಕಿಚ್ಚ ಕ್ರಿಯೇಶನ್ಸ್
ಕಿಚ್ಚ ಸುದೀಪ್ ಅವರ ಮೂರು ಚಿತ್ರಗಳ ಮುಹೂರ್ತ ಸಮಾರಂಭ ಜೂನ್ ಎಂಟರಂದು ನೆರವೇರಿದೆ. 'ಗಜಕೇಸರಿ' ಕೃಷ್ಣ ನಿರ್ದೇಶನದಲ್ಲಿ ಮೂಡಿಬರಲಿರುವ 'ಹೆಬ್ಬುಲಿ', 'ಮಿಲನ' ಪ್ರಕಾಶ್ ಆಕ್ಷನ್ ಕಟ್ ಹೇಳಲಿರುವ ಇನ್ನೂ ಹೆಸರಿಡದ ಚಿತ್ರ ಮತ್ತು ಯುವ ನಟ ರಾಹುಲ್ ಮುಖ್ಯಭೂಮಿಕೆಯಲ್ಲಿ, ಸುದೀಪ್ ವಿಶೇಷ ಪಾತ್ರದಲ್ಲಿ ನಟಿಸಲಿರುವ ತಮಿಳಿನ 'ಜಿಗರ್ತಾಂಡ' ರೀಮೇಕ್ ಚಿತ್ರದ ಮುಹೂರ್ತ ಒಟ್ಟಿಗೆ ನಡೆದೋಗಿದೆ.

ಹ್ಯಾಪಿ ಬರ್ತ್ ಡೇ
ಚೆಲುವರಾಯಸ್ವಾಮಿ ಮಗ ಸಚಿನ್ ಅಭಿನಯದ ಹ್ಯಾಪಿ ಬರ್ತ್ ಡೇ ಚಿತ್ರಕ್ಕೆ ಮಹೂರ್ತ ಜೂನ್ ಹನ್ನೆರಡರಂದು ನಿಗದಿಯಾಗಿದೆ. ಸುಖಧರೆ ಫಿಲಂಸ್ ಬ್ಯಾನರಿನಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಮಹೇಶ್ ಸುಖಧರೆ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.

ಲಕ್ಷ್ಮಣ
ಎಚ್ ಎಂ ರೇವಣ್ಣ ಅವರ ಪುತ್ರ ಅನೂಪ್ ಅಭಿನಯದ ಲಕ್ಷ್ಮಣ ಚಿತ್ರಕ್ಕೆ ಇದೇ ಶುಕ್ರವಾರ (ಜೂನ್ 12) ಅದ್ದೂರಿ ಚಾಲನೆ ಸಿಗಲಿದೆ. ವತ್ಸಲಾ ರೇವಣ್ಣ ನಿರ್ಮಿಸುತ್ತಿರುವ ಈ ಚಿತ್ರವನ್ನು ಆರ್ ಚಂದ್ರು ನಿರ್ದೇಶಿಸುತ್ತಿದ್ದಾರೆ.

ಜಸ್ಸಿ
ಪವನ್ ಒಡೆಯರ್ ನಿರ್ದೇಶನದ ಜಸ್ಸಿ ಚಿತ್ರದ ಮಹೂರ್ತ ಈಗಾಗಲೇ ಸದ್ದಿಲ್ಲದೇ ನಡೆದಿದೆ. ಚಿತ್ರಕ್ಕೆ ಧನಂಜಯ್ ನಾಯಕ ಮತ್ತು ಪರುಲ್ ಯಾದವ್ ನಾಯಕಿ.

ರವಿಕುಮಾರ್ ನಿರ್ದೇಶನದ ಚಿತ್ರ
ತಮಿಳಿನ ಖ್ಯಾತ ನಿರ್ದೇಶಕ ರವಿಕುಮಾರ್ ನಿರ್ದೇಶಿಸುತ್ತಿರುವ ಇನ್ನೂ ಟೈಟಲ್ ಅಂತಿಮವಾಗದ ಚಿತ್ರದಲ್ಲಿ ಸುದೀಪ್ ನಟಿಸಲಿದ್ದಾರೆ. ಚಿತ್ರದ ಮಹೂರ್ತಕ್ಕೆ ಜೂನ್ ಹನ್ನೆರಡು ದಿನಾಂಕ ನಿಗದಿಯಾಗಿದೆ. ಸೂರಪ್ಪ ಬಾಬು ಈ ಚಿತ್ರವನ್ನು ನಿರ್ಮಿಸಲಿದ್ದಾರೆ.

ಮಹೂರ್ತಕ್ಕೆ ಸಿದ್ದವಾಗಿರುವ/ ಮಹೂರ್ತ ಮುಗಿಸಿರುವ ಕೆಲವು ಚಿತ್ರಗಳ ಪಟ್ಟಿ
"ಶುರುವಾಗಿದೆ' ಎನ್ನುವ ಟೈಟಲಿನ ಹೊಸಬರ ಚಿತ್ರ.
"ಗೂಳಿಹಟ್ಟಿ' ಚಿತ್ರ ನಿರ್ದೇಶಕ ಶಶಾಂಕ್ ರಾಜ್ ಅವರ ಹೊಸ ಚಿತ್ರಕ್ಕೂ ಮಹೂರ್ತ.
"ಅಂದಗಾತಿ' ಎನ್ನುವ ಟೈಟಲಿನ ಚಿತ್ರಕ್ಕೆ ಸತೀಶ್ ಮಂಗಳೂರು ನಿರ್ದೇಶಕರು.
"ತಲೆ ಬಾಚ್ಕೊಳ್ಳಿ ಪೌಡರ್ ಹಾಕ್ಕಳಿ' ಎಂದು ಹೆಸರಿಡಲಾಗಿರುವ ಚಿತ್ರಕ್ಕೆ ವೇಣುಗೋಪಾಲ್ ನಿರ್ದೇಶಕರು.

ಇನ್ನೂ ಕೆಲವು ಚಿತ್ರಗಳು
ಹಾಸ್ಯ ನಟ ಚಿಕ್ಕಣ್ಣ ಪ್ರಮುಖ ಭೂಮಿಕೆಯಲ್ಲಿರುವ ಹೊಸ ಚಿತ್ರ
ಪುರುಷೋತ್ತಮ್ ನಿರ್ದೇಶನದ 'ಮತ್ತೆ ಬಂದ ವೀರಪ್ಪನ್'
ಹೊಸ ಪ್ರತಿಭೆ ಕುಮಾರ್ ನಿರ್ದೇಶನದ"ಕೃಷ್ಣಾಚಾರಿ'.


Click it and Unblock the Notifications











