ರಾಜ್ ಬಳಿ ಇರುವಾಗ ಬೇಸರವೇ ಇಲ್ಲ ಎಂದ ಮೋಹಕ ತಾರೆ ರಮ್ಯಾ

2003ರಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ ಅಭಿ ಮೂಲಕ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಮೋಹಕತಾರೆ ರಮ್ಯಾ 2016ರಲ್ಲಿ ಬಿಡುಗಡೆಗೊಂಡ ನಾಗರಹಾವು ಚಿತ್ರದ ಬಳಿಕ ಮತ್ತೆ ತೆರೆಮೇಲೆ ಕಾಣಿಸಿಕೊಂಡಿಲ್ಲ. ನಾಗರಹಾವು ಬಳಿಕ ರಾಜಕೀಯದ ಕಡೆ ಮುಖ ಮಾಡಿದ ರಮ್ಯಾ ಇದೀಗ ರಾಜಕೀಯವನ್ನು ಬದಿಗೊತ್ತಿ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ.
ಹೌದು, ಕಳೆದ ಹಲವು ತಿಂಗಳುಗಳಿಂದ ಚಿತ್ರಗಳು ಹಾಗೂ ಕಲಾವಿದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಪೋಸ್ಟ್ ಮಾಡುತ್ತಿದ್ದ ಮೋಹಕ ತಾರೆ ರಮ್ಯಾ ಇತ್ತೀಚೆಗಷ್ಟೇ ಆ್ಯಪಲ್ ಬಾಕ್ಸ್ ಸ್ಟುಡಿಯೋಸ್ ಎಂಬ ತನ್ನ ಹೊಸ ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಘೋಷಿಸಿದರು ಹಾಗೂ ಇದರ ಬೆನ್ನಲ್ಲೇ ತನ್ನ ಮುಂದಿನ ನಟನೆ ಹಾಗೂ ನಿರ್ಮಾಣದ ಚಿತ್ರವನ್ನು ಸಹ ರಮ್ಯಾ ಘೋಷಿಸಿದರು.
'ಸ್ವಾತಿ ಮುತ್ತಿನ ಮಳೆಹನಿಯೇ' ಎಂದು ರಮ್ಯಾ ಅಭಿನಯದ ಮುಂದಿನ ಚಿತ್ರಕ್ಕೆ ಹೆಸರಿಡಲಾಗಿದ್ದು, ಈ ಚಿತ್ರಕ್ಕೆ ಗರುಡಗಮನ ವೃಷಭವಾಹನ ಖ್ಯಾತಿಯ ರಾಜ್ ಬಿ ಶೆಟ್ಟಿ ನಿರ್ದೇಶನವಿರಲಿದೆ ಹಾಗೂ ರಾಜ್ ಬಿ ಶೆಟ್ಟಿ ಈ ಚಿತ್ರದಲ್ಲಿ ನಾಯಕನಾಗಿಯೂ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ರಾಜ್ ಬಿ ಶೆಟ್ಟಿ ಹಾಗೂ ನಟಿ ರಮ್ಯಾ ಜೋಡಿ ತೆರೆಮೇಲೆ ಮೋಡಿ ಮಾಡುವ ನಿರೀಕ್ಷೆ ಸಿನಿಪ್ರೇಕ್ಷಕರಲ್ಲಿ ಉಂಟಾಗಿದೆ.
ಸದ್ಯ ನಟಿ ಮೋಹಕತಾರೆ ರಮ್ಯಾ ಈ ಚಿತ್ರಕ್ಕೆ ನಿರ್ಮಾಪಕಿ ಹಾಗೂ ರಾಜ್ ಬಿ ಶೆಟ್ಟಿ ಈ ಚಿತ್ರಕ್ಕೆ ನಿರ್ದೇಶಕನಾಗಿರುವ ಕಾರಣ ಇಬ್ಬರೂ ಒಟ್ಟಿಗೆ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳನ್ನು ಆರಂಭಿಸಿದ್ದಾರೆ. ಇದೇ ವೇಳೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖಾತೆಗಳಲ್ಲಿ ತಾವು ಐಪ್ಯಾಡ್ ಉಪಯೋಗಿಸುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದು, ರಾಜ್ ಸುತ್ತಮುತ್ತ ಇರುವಾಗ ಬೇಸರವಾಗುವುದೇ ಇಲ್ಲ ಎಂದು ರಾಜ್ ಬಿ ಶೆಟ್ಟಿ ಅವರನ್ನು ಉಲ್ಲೇಖಿಸಿ ಬರೆದುಕೊಂಡಿದ್ದಾರೆ. ಇನ್ನು ರಮ್ಯಾ ಐಪ್ಯಾಡ್ ಮೂಲಕ ವಿಡಿಯೋ ಕರೆಯಲ್ಲಿ ಮಾತನಾಡುತ್ತಿರುವ ಹಾಗಿದ್ದು, ರಮ್ಯ ಮತ್ತು ರಾಜ್ ಬಿ ಶೆಟ್ಟಿ ಪರಸ್ಪರ ವೀಡಿಯೋ ಕರೆಯಲ್ಲಿ ನಿರತರಾಗಿದ್ದರು ಎಂಬ ಅಭಿಪ್ರಾಯವನ್ನು ಅಭಿಮಾನಿಗಳು ಕಾಮೆಂಟ್ ಮೂಲಕ ವ್ಯಕ್ತಪಡಿಸಿದ್ದಾರೆ.


Click it and Unblock the Notifications











