ಕನ್ನಡ ಚಿತ್ರರಂಗ : ದುರಂತಗಳನ್ನು ನೆನೆಯಬಾರದು, ಆದರೆ ವಿಧಿಯಿಲ್ಲ
ಒಂದು ಜಾಗದಲ್ಲಿ ನೂರು ಜನ ಸೇರುತ್ತಾರೆ ಅಂದ್ರೆ ಮುಂಜಾಗ್ರತ ಕ್ರಮಗಳನ್ನು ಅವಶ್ಯಕವಾಗಿ ಕೈಗೊಳ್ಳಲೇಬೇಕು. ಉಡಾಫೆ ಮಾಡಿದರೆ ದುರ್ಘಟನೆಗಳು ನಡೆಯುವುದು ಗ್ಯಾರೆಂಟಿ. ಹೀಗಿರುವಾಗ, ಚಿತ್ರೀಕರಣದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದರೇ ಹೇಗೆ.?
ಅದರಲ್ಲೂ, ಒಂದು ಸಾಹಸಮಯ ದೃಶ್ಯದ ಶೂಟಿಂಗ್ ನಡೆಯುತ್ತಿರುವಾಗ, ಅದರಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರ ಜವಾಬ್ದಾರಿ ಚಿತ್ರದ ನಿರ್ಮಾಪಕ, ನಿರ್ದೇಶಕ ಹಾಗೂ ಸಾಹಸ ನಿರ್ದೇಶಕರದ್ದು.!
'ಸಿನಿಮಾ ಚೆನ್ನಾಗಿ ಮೂಡಿಬಂದರೆ ಸಾಕು, ಯಾರು ಹೇಗೆ ಬೇಕಾದರೂ ಹಾಳಾಗಿ ಹೋಗಲಿ' ಅಂತ ನಿರ್ಲಕ್ಷ್ಯ ಮಾಡಿದರೆ ಬಲಿಯಾಗುವುದು ಬಡಪಾಯಿ ಜೀವಗಳು.! ಇದಕ್ಕೆ ತಾಜಾ ಉದಾಹರಣೆ 'ಮಾಸ್ತಿ ಗುಡಿ' ಚಿತ್ರದ ದುರಂತ. ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]
'ಮಾಸ್ತಿ ಗುಡಿ' ನಿರ್ದೇಶಕ ನಾಗಶೇಖರ್, ಸಾಹಸ ನಿರ್ದೇಶಕ ರವಿವರ್ಮ ಮೆರೆದ ಬೇಜವಾಬ್ದಾರಿತನದಿಂದ ಖಳನಟರಾದ ಅನಿಲ್ ಮತ್ತು ಉದಯ್ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ರೀತಿ, ಚಿತ್ರೀಕರಣದ ವೇಳೆ ಸ್ಯಾಂಡಲ್ ವುಡ್ ನಲ್ಲಿ ದುರ್ಘಟನೆಗಳು ನಡೆದಿರುವುದು ಇದೇ ಮೊದಲಲ್ಲ. ಅಂತಹ ದುರ್ಘಟನೆಗಳನ್ನ ಇಂದು ನೆನಪು ಮಾಡಿಕೊಳ್ಳದೇ ಬೇರೆ ವಿಧಿ ಇಲ್ಲ.

'ಲಾಕಪ್ ಡೆತ್' ಚಿತ್ರೀಕರಣದ ವೇಳೆ ಅನಾಹುತ
1996ರಲ್ಲಿ ದೇವರಾಜ್ ಅಭಿನಯದ 'ಲಾಕಪ್ ಡೆತ್' ಚಿತ್ರದ ಚಿತ್ರೀಕರಣದ ವೇಳೆ, ಇಬ್ಬರು ಸ್ಟಂಟ್ ಮ್ಯಾನ್ ಗಳು ಗಾಯಗೊಂಡಿದ್ದರು. ಎಂ ಜಿ ರಸ್ತೆಯಲ್ಲಿ ಶೂಟಿಂಗ್ ಮಾಡುತ್ತಿರುವಾಗ ಬಸ್ ಮೇಲೆ ಬೈಕ್ ಹಾರಿಸುವ ದೃಶ್ಯದಲ್ಲಿ ಇಬ್ಬರು ಸ್ಟಂಟ್ ಮ್ಯಾನ್ ಗಳು ಕೆಳಗೆ ಬಿದ್ದು, ತೀವ್ರ ಗಾಯಗೊಂಡಿದ್ದರು.

ಬಿ.ಸಿ ಪಾಟೀಲ್ ಅವರ ಚಿತ್ರದಲ್ಲಿ ಆಗಿತ್ತು ಆಕ್ಸಿಡೆಂಟ್
1998 ರಲ್ಲಿ ನಟ, ನಿರ್ಮಾಪಕ ಬಿ.ಸಿ ಪಾಟೀಲ್ ಅಭಿನಯದ 'ನಿರ್ಣಯ' ಚಿತ್ರೀಕರಣದ ವೇಳೆ ದೊಡ್ಡ ಅನಾಹುತವಾಗಿತ್ತು. ಮಲ್ಲೇಶ್ವರಂನಲ್ಲಿ ಶೂಟಿಂಗ್ ಮಾಡುತ್ತಿರುವಾಗ ಎರಡು ಕಾರುಗಳ ನಡುವೆ ಪರಸ್ಪರ ಡಿಕ್ಕಿಯಾಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕ್ಯಾಮೆರಾಗಳು ಒಡೆದುಹೋಗಿತ್ತು.

ಸಾಯಿಕುಮಾರ್ ಚಿತ್ರದಲ್ಲಿ 'ಬಾಂಬ್ ಸ್ಪೋಟದ ಅವಘಡ'
1999ರಲ್ಲಿ ಸಾಯಿಕುಮಾರ್ ಅಭಿನಯದ 'ಟಿಕೆಟ್ ಟಿಕೆಟ್' ಚಿತ್ರೀಕರಣ ಸಂದರ್ಭದಲ್ಲಿ, ಸಾಹಸ ಕಲಾವಿದರಿಗೆ ಗಂಭೀರ ಗಾಯವಾಗಿತ್ತು. ಅಬ್ಬಯ್ಯನಾಯ್ಡು ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ 'ಕಲರ್ ಬಾಂಬ್' ಸ್ಫೋಟಗೊಂಡು ಸ್ಟಂಟ್ ಮ್ಯಾನ್ ಗಳಿಗೆ ಗಾಯವಾಗಿತ್ತು. [ಮೂರು ಬಾರಿ ಯಮಲೋಕದ ಕದ ತಟ್ಟಿದ್ದ ನಟ ಸಾಯಿಕುಮಾರ್!]

ಕಾರ್ ಆಕ್ಸಿಡೆಂಟ್
2009 ರಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ 'ಸವಾರಿ' ಚಿತ್ರೀಕರಣ ನಡೆಯುತ್ತಿತ್ತು. ಚಿತ್ರದ ಸಾಹಸ ದೃಶ್ಯವೊಂದರಲ್ಲಿ ಕಾರೊಂದನ್ನ ಜಿಗಿಸುವಾಗ ಎಡವಟ್ಟಾಗಿ ಕಾರು ಸಂಪೂರ್ಣವಾಗಿ ಜಖಂಗೊಂಡಿತ್ತು. ಅದೃಷ್ಟವಶಾತ್ ಯಾವ ಅಪಾಯವೂ ಸಂಭವಿಸಿರಲಿಲ್ಲ.

ಗಂಗೆಯಲ್ಲಿ ಕೊಚ್ಚಿಹೋದ ಲೈಟ್ ಮ್ಯಾನ್
2012 ಲೂಸ್ ಮಾದ ಯೋಗೇಶ್ ಅಭಿನಯದ 'ಅಂಬರ' ಚಿತ್ರದ ಚಿತ್ರೀಕರಣ ವೇಳೆ, ಹೃಷಿಕೇಶದಲ್ಲಿ ಸದಾಶಿವಯ್ಯ ಎನ್ನುವ ಲೈಟ್ ಮ್ಯಾನ್ ಗಂಗೆಯಲ್ಲಿ ಕೊಚ್ಚಿಕೊಂಡು ಹೋಗಿದ್ದರು.

ಮಾಲಾಶ್ರೀಗೆ ಎದುರಾಗಿತ್ತು ಸಂಕಟ
2013 ರಲ್ಲಿ ಆಕ್ಷನ್ ಕ್ವೀನ್ ಮಾಲಾಶ್ರೀ ಅಭಿನಯದ 'ಶಕ್ತಿ' ಚಿತ್ರದ ಶೂಟಿಂಗ್ ವೇಳೆ, ಸ್ವತಃ ಮಾಲಾಶ್ರೀ ಅವರು ಅಪಾಯದಲ್ಲಿ ಸಿಲುಕಿಹಾಕಿಕೊಂಡಿದ್ದ ಘಟನೆ ನಡೆದಿತ್ತು. ಮಂಡ್ಯದ ಜಿಲ್ಲೆಯ ಶಿವನ ಸಮುದ್ರದ ಬಳಿ ನೀರಿನ ರಭಸಕ್ಕೆ ಮಾಲಾಶ್ರೀ ಅವರು ಸಿಕ್ಕಿಹಾಕಿಕೊಂಡಿದ್ದರಾದರೂ ಕೊನೆಗೆ ಚಿತ್ರತಂಡದವರು ಸೇಫ್ ಆಗಿ ಕರೆತಂದರು.

ಬುಲೆಟ್ ಪ್ರಕಾಶ್ ಗೆ ಗಾಯ
2015 ರಲ್ಲಿ ಮಂಡ್ಯ ಬಳಿ ಪ್ರಜ್ವಲ್ ದೇವರಾಜ್ ಅಭಿನಯದ 'ಭುಜಂಗ' ಚಿತ್ರದ ಚಿತ್ರೀಕರಣ ವೇಳೆ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರಿಗೆ ಗಾಯವಾಗಿತ್ತು. ಬೈಕ್ ನಲ್ಲಿ ಹಾರುವ ಸನ್ನಿವೇಶವನ್ನ ಶೂಟ್ ಮಾಡುತ್ತಿದ್ದ ಸಂದರ್ಭದಲ್ಲಿ ಬುಲೆಟ್ ಪ್ರಕಾಶ್ ಕೆಳಗೆ ಬಿದ್ದು, ಗಾಯಗೊಂಡಿದ್ದರು.

ಕುದುರೆಯಿಂದ ಬಿದ್ದಿದ್ದ ದರ್ಶನ್
2013ರಲ್ಲಿ ದರ್ಶನ್ ಅಭಿನಯದ 'ಬೃಂದಾವನ'ದ ಚಿತ್ರೀಕರಣ ವೇಳೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುದುರೆಯಿಂದ ಆಯಾತಪ್ಪಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದರು. ತದ ನಂತರ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದ ಚೇತರಿಕೆ ಕಂಡಿದ್ದರು.

ಸುದೀಪ್ ಗೆ ಪದೇ ಪದೇ ಗಾಯ
'ಕೆಂಪೇಗೌಡ' ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ, ಬಾಂಬ್ ಸಿಡಿದಿದ್ದರಿಂದ ಪಕ್ಕದಲ್ಲಿದ ಸುದೀಪ್ ಗಾಯಗೊಂಡಿದ್ದರು. ನಂತರ ಚಿಕಿತ್ಸೆ ಪಡೆದು ಕೆಲ ದಿನಗಳ ಕಾಲ ವಿಶ್ರಾಂತಿಯಲ್ಲಿದ್ದರು. ಇನ್ನೂ 'ಮಾಣಿಕ್ಯ' ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಬೈಕ್ ಸ್ಟಂಟ್ ಮಾಡುವಾಗ ಸುದೀಪ್ ಗೆ ಮತ್ತೆ ಗಾಯವಾಗಿತ್ತು. ಆಗಲು ಚಿಕಿತ್ಸೆ ಪಡೆದಿದ್ದರು.


Click it and Unblock the Notifications











