ಮಂತ್ರಿ, ಒರಾಯನ್ ಮಾಲ್ ನಲ್ಲಿ 'ಕಾಲಾ' ಪ್ರದರ್ಶನ ರದ್ದು: ಹೊರಬಂದ ಅಭಿಮಾನಿಗಳು.!
Recommended Video

ಕಾವೇರಿ ವಿವಾದದ ಕುರಿತಾಗಿ ಸೂಪರ್ ಸ್ಟಾರ್ ರಜನಿಕಾಂತ್ ಕೊಟ್ಟ ವಿವಾದಾತ್ಮಕ ಹೇಳಿಕೆಯಿಂದಾಗಿ ಅವರ 'ಕಾಲಾ' ಚಿತ್ರ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ಕಂಟಕ ಎದುರಾಗಿದೆ.
ಇವತ್ತು ವಿಶ್ವದಾದ್ಯಂತ 'ಕಾಲಾ' ಸಿನಿಮಾ ಬಿಡುಗಡೆ ಆಗಬೇಕಿತ್ತು. ವಿಶ್ವದ ವಿವಿದೆಡೆ 'ಕಾಲಾ' ಬಿಡುಗಡೆ ಆಗಿದ್ದರೂ, ಕರ್ನಾಟಕದಲ್ಲಿ ಮಾತ್ರ ಈ ಚಿತ್ರಕ್ಕೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.
ರಜನಿಕಾಂತ್ ವಿರುದ್ಧ ರೊಚ್ಚಿಗೆದ್ದಿರುವ ಕನ್ನಡ ಪರ ಸಂಘಟನೆಗಳು ಇಂದು ಕರ್ನಾಟಕದಲ್ಲಿ ಬಳ್ಳಾರಿ ಬಿಟ್ಟರೆ ಬೇರೆ ಯಾವ ಮೂಲೆಯಲ್ಲೂ 'ಕಾಲಾ' ಪ್ರದರ್ಶನ ಆಗದಂತೆ ನೋಡಿಕೊಂಡಿದ್ದಾರೆ. ಮೈಸೂರು ಸೇರಿದಂತೆ ಎಷ್ಟೋ ಕಡೆ 'ಕಾಲಾ' ಚಿತ್ರವನ್ನ ಪ್ರದರ್ಶನ ಮಾಡದಿರಲು ಚಿತ್ರಮಂದಿರದ ಮಾಲೀಕರೇ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ ಮಾತ್ರ ಈ ಪರಿಸ್ಥಿತಿ, ಮಲ್ಟಿಪ್ಲೆಕ್ಸ್ ಗಳಲ್ಲಿ 'ಕಾಲಾ' ಪ್ರದರ್ಶನಕ್ಕೆ ಅವಕಾಶ ಇದೆ ಅಂತ ಇಂದು ಬೆಳಗ್ಗೆ ಬೆಂಗಳೂರಿನ ಮಂತ್ರಿ ಸ್ಕ್ವೇರ್ ಮಾಲ್ ಹಾಗೂ ಒರಾಯನ್ ಮಾಲ್ ಗೆ ಹೋದ ರಜನಿಕಾಂತ್ ಅಭಿಮಾನಿಗಳಿಗೆ ಅಲ್ಲೂ ನಿರಾಸೆ ಆಯ್ತು.! ಮುಂದೆ ಓದಿರಿ...

ಮಂತ್ರಿ ಮಾಲ್ ನಲ್ಲಿ ಕಾದ ಅಭಿಮಾನಿಗಳು
'ಕಾಲಾ' ಚಿತ್ರವನ್ನ ಕಣ್ತುಂಬಿಕೊಳ್ಳಬೇಕು ಎಂದು ಇಂದು ಬೆಳಗ್ಗೆಯೇ ಬೆಂಗಳೂರಿನ ಮಂತ್ರಿ ಸ್ಕ್ವೇರ್ ಮಾಲ್ ನಲ್ಲಿ ಅಭಿಮಾನಿಗಳು ಕ್ಯೂ ನಿಂತಿದ್ದರು. ಕೆಲವರಂತೂ 'ಕಾಲಾ' ಗೆಟಪ್ ನಲ್ಲೇ ಹಾಜರ್ ಆಗಿದ್ದರು. ಮಂತ್ರಿ ಸ್ಕ್ವೇರ್ ಮಾಲ್ ನಲ್ಲಿ ಪೊಲೀಸ್ ಭದ್ರತೆ ಇದ್ದರೂ, 'ಕಾಲಾ' ಚಿತ್ರಕ್ಕೆ ಟಿಕೆಟ್ ಕೊಡಲು ಮಂತ್ರಿ ಮಾಲ್ ಸಿಬ್ಬಂದಿ ನಿರಾಕರಿಸಿದರು.

ಒರಾಯನ್ ಮಾಲ್ ನಲ್ಲೂ ಇದೇ ಕಥೆ.!
ಅತ್ತ ಒರಾಯನ್ ಮಾಲ್ ನಲ್ಲೂ 'ಕಾಲಾ' ಚಿತ್ರ ಪ್ರದರ್ಶನಗೊಳ್ಳಲಿಲ್ಲ. ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರಿಂದ, ರಿಸ್ಕ್ ತೆಗೆದುಕೊಳ್ಳಲು ತಯಾರು ಇಲ್ಲದ ಮಾಲ್ ಸಿಬ್ಬಂದಿ 'ಕಾಲಾ' ಚಿತ್ರವನ್ನ ಪ್ರದರ್ಶನ ಮಾಡದೇ ಇರಲು ನಿರ್ಧರಿಸಿದ್ದಾರೆ.

ಮಂತ್ರಿ ಮಾಲ್ ಮುಂದೆ ಕರವೇ ಕಾರ್ಯಕರ್ತರ ಪ್ರತಿಭಟನೆ
ಇನ್ನೂ ಮಂತ್ರಿ ಸ್ಕ್ವೇರ್ ಮಾಲ್ ಮುಂದೆ ಕರವೇ ಕಾರ್ಯಕರ್ತರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಪ್ರತಿಭಟನೆ ನಡೆಸಿದರು. 'ಕಾಲಾ' ಚಿತ್ರದ ಕರ್ನಾಟಕ ವಿತರಣೆ ಹಕ್ಕು ಪಡೆದಿದ್ದ ಕನಕಪುರ ಶ್ರೀನಿವಾಸ್ ವಿರುದ್ಧ ಕರವೇ ಕಾರ್ಯಕರ್ತರು ಧಿಕ್ಕಾರ ಕೂಗಿದರು.

ಏನಂತಾರೆ ಸಾರಾ ಗೋವಿಂದು.?
''ಕರ್ನಾಟಕದ ಎಲ್ಲ ಕನ್ನಡ ಪರ ಹೋರಾಟಗಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕಾವೇರಿ ನಿರ್ವಹಣಾ ಮಂಡಳಿ ಬೇಕು, ಕಾವೇರಿ ನೀರು ಬೇಕು ಅಂತ್ಹೇಳಿ ಕಾವೇರಿ ಮುಂದಿಟ್ಟುಕೊಂಡು ರಜನಿಕಾಂತ್ ರಾಜಕೀಯ ಮಾಡಿದರು. ಅದಕ್ಕೆ ಕನ್ನಡಿಗರು ಇವತ್ತು ತಕ್ಕ ಉತ್ತರ ನೀಡಿದ್ದಾರೆ. ಕಾವೇರಿ ಬಗ್ಗೆ ನಿಮಗೆ ಎಷ್ಟು ಹಕ್ಕು ಇದೆಯೋ, ನಮಗೂ ಅಷ್ಟೇ ಹಕ್ಕು ಇದೆ. ರಜನಿಕಾಂತ್ ಅವರು ತಮ್ಮ ಹೇಳಿಕೆಯನ್ನ ವಾಪಸ್ ತೆಗೆದುಕೊಳ್ಳಲಿ. ಕಾವೇರಿ ಸಮಸ್ಯೆ ಬಗ್ಗೆ ಕರ್ನಾಟಕ ಹಾಗೂ ತಮಿಳುನಾಡು ಪರಸ್ಪರ ಕೂತು ಬಗೆಹರಿಸಿಕೊಳ್ತೀವಿ ಅಂದ್ರೆ ನಮಗೆ ಅಭ್ಯಂತರ ಇಲ್ಲ'' ಎಂದರು ಸಾರಾ ಗೋವಿಂದು.

ಒರಾಯನ್ ಮಾಲ್ ಮುಂದೆ ವಾಟಾಳ್ ನಾಗರಾಜ್ ಬಂಧನ
'ಕಾಲಾ' ಚಿತ್ರದ ಬಿಡುಗಡೆ ವಿರೋಧಿಸಿ ಬೆಂಗಳೂರಿನ ಒರಾಯನ್ ಮಾಲ್ ಮುಂದೆ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದರು.

'ಜುರಾಸಿಕ್ ವರ್ಲ್ಡ್' ಚಿತ್ರ ಪ್ರದರ್ಶನ
'ಕಾಲಾ' ಚಿತ್ರದ ಬದಲು ಮಲ್ಟಿಪ್ಲೆಕ್ಸ್ ಗಳಲ್ಲಿ 'ಜುರಾಸಿಕ್ ವರ್ಲ್ಡ್' ಪ್ರದರ್ಶನ ಆಗುತ್ತಿದೆ. 'ಕಾಲಾ' ಚಿತ್ರವನ್ನ ನೋಡಲು ಬಂದಿದ್ದ ರಜನಿ ಅಭಿಮಾನಿಗಳು ನಿರಾಸೆಯಿಂದ ಮಾಲ್ ನಿಂದ ಹೊರನಡೆದರು.


Click it and Unblock the Notifications











