ಮೈಸೂರಿನಲ್ಲಿ 'ಕಾಲಾ' ಬಿಡುಗಡೆ ಇಲ್ಲ: ಚಿತ್ರಮಂದಿರ ಮಾಲೀಕರ ಒಗ್ಗಟ್ಟು ಪ್ರದರ್ಶನ.!
ಮೈಸೂರು, ಜೂನ್ 7 : ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ತಮಿಳು ಚಲನಚಿತ್ರ 'ಕಾಲಾ' ಪ್ರದರ್ಶನಕ್ಕೆ ಕರ್ನಾಟಕದಲ್ಲಿ ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
''ನಟ ರಜನಿಕಾಂತ್ ಅವರು ಕಾವೇರಿ ನದಿ ಕುರಿತು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಇದು ಖಂಡನೀಯ. ಕಾವೇರಿ ಸಮಸ್ಯೆಯನ್ನು ಎರಡು ರಾಜ್ಯಗಳು ಸೌಹಾರ್ದದಿಂದ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಭಾವನಾತ್ಮಕವಾಗಿ ವಿವಾದ ಸೃಷ್ಟಿಸುತ್ತಿರುವ ರಜನಿಕಾಂತ್ ಕನ್ನಡಿಗರ ಪಾಲಿನ ಖಳನಾಯಕ'' ಎಂದು ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವೇದಿಕೆಯ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ, ''ಕಾವೇರಿ ನದಿ ನೀರು ಹಂಚಿಕೆ ವಿವಾದ ನ್ಯಾಯಾಲಯದಲ್ಲಿದೆ. ಅಲ್ಲದೆ, ಸುಪ್ರೀಂ ಕೋರ್ಟ್ 'ಸ್ಕೀಂ' ರೂಪಿಸುವಂತೆ ಸೂಚಿಸಿದೆ. ಹೀಗಿರುವಾಗ ನ್ಯಾಯಾಲಯವನ್ನು ಗೌರವಿಸಬೇಕು. ಅದನ್ನು ಬಿಟ್ಟು ಸಿನಿಮಾ ನಿರ್ಮಿಸಿ ಕನ್ನಡಿಗರ ಮನಸ್ಸು ನೋಯಿಸಬಾರದು'' ಎಂದು ಖಂಡಿಸಿದರು.

''ರಜನಿಕಾಂತ್ ಅವರು ರಾಜಕೀಯಕ್ಕಾಗಿ ಕಾವೇರಿ ವಿಚಾರವನ್ನು ಬಳಸಿಕೊಳ್ಳುತ್ತಿದ್ದಾರೆ. ಅವರು ಎರಡು ರಾಜ್ಯಗಳ ಸಂಬಂಧ ಹಾಳು ಮಾಡುತ್ತಿದ್ದಾರೆ. ಇದೇ ರೀತಿಯ ಟೀಕೆ ಮುಂದುವರಿದರೆ ರಜನಿಕಾಂತ್ ಅಭಿನಯದ ಯಾವುದೇ ಚಿತ್ರಗಳು ಮೈಸೂರಿನಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡದಂತೆ ಮಾಡಲಾಗುವುದು'' ಎಂದು ಎಚ್ಚರಿಸಿದರು.
'ಕಾಲಾ' ಚಿತ್ರದ ಬಿಡುಗಡೆ ವಿರೋಧಿಸಿ ಪ್ರತಿಭಟನೆ ತೀವ್ರಗೊಂಡ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಸಿನಿಮಾ ಪ್ರದರ್ಶನ ಮಾಡದಿರಲು ಚಲನಚಿತ್ರ ಮಂದಿರದ ಮಾಲೀಕರು ನಿರ್ಧರಿಸಿ, ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಹಾಗ್ನೋಡಿದ್ರೆ, ಮೈಸೂರಿನ ಡಿ.ಆರ್.ಸಿ ಮಲ್ಟಿಪ್ಲೆಕ್ಸ್ ಸೇರಿದಂತೆ ಕೆಲ ಚಿತ್ರಮಂದಿರಗಳಲ್ಲಿ 'ಕಾಲಾ' ಪ್ರದರ್ಶನಗೊಳ್ಳಬೇಕಿತ್ತು. ಆದ್ರೆ, ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂಬ ಮುನ್ಸೂಚನೆ ಅರಿತು ಸ್ವಯಂ ಪ್ರೇರಣೆಯಿಂದ ಪ್ರದರ್ಶನಕ್ಕೆ ನಿರಾಸಕ್ತಿ ತೋರಿದ್ದಾರೆ ಚಿತ್ರಮಂದಿರಗಳ ಮಾಲೀಕರು.
''ಕಾಲಾ' ಚಿತ್ರ ಲೈಸನ್ಸ್ ಪಡೆದುಕೊಂಡಿದ್ದೇವೆ. ಆದರೆ ಸದ್ಯಕ್ಕೆ ಪ್ರದರ್ಶನ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ 'ಕಾಲಾ' ಪ್ರದರ್ಶನಕ್ಕೆ ಅವಕಾಶ ಕೊಡ್ತಾರಾ ಅಂತ ಕಾದು ನೋಡಬೇಕು'' ಎಂದು ಡಿ.ಆರ್.ಸಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರದ ವ್ಯವಸ್ಥಾಪಕಿ ವೈಶಾಲಿ ಪದಕಿ ಹೇಳಿದ್ದಾರೆ.


Click it and Unblock the Notifications











