ಕನ್ನಡದ ಖ್ಯಾತ ಚಿತ್ರ ನಿರ್ದೇಶಕ, ಸಾಹಿತಿ ಗೀತಪ್ರಿಯ ನಿಧನ
ಕನ್ನಡ ಚಿತ್ರೋದ್ಯಮದ ಮತ್ತೊಂದು ಹಿರಿಯ ಕೊಂಡಿ ಕಳಚಿಬಿದ್ದಿದೆ. ಗೀತಪ್ರಿಯ ಎಂದೇ ಹೆಸರುವಾಸಿಯಾಗಿರುವ ಖ್ಯಾತ ನಿರ್ದೇಶಕ ಲಕ್ಷ್ಮಣ್ ರಾವ್ ಮೊಹಿತೆ (84) ನಿಧನ ಹೊಂದಿದ್ದಾರೆ.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗೀತಪ್ರಿಯ ಬೆಂಗಳೂರಿನ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಭಾನುವಾರ (ಜ 17) ಸಂಜೆ ಕೊನೆಯುಸಿರೆಳೆದಿದ್ದಾರೆ. (ಗೀತಪ್ರಿಯ ಚಿಕಿತ್ಸೆಗೆ ಬಿಬಿಎಂಪಿ ರು.1 ಲಕ್ಷ ಚೆಕ್)

ಹಿರಿಯ ನಿರ್ದೇಶಕ, ಚಿತ್ರಸಾಹಿತಿ, ಲೇಖಕ ಮತ್ತು ಚಿತ್ರ ಸಂಭಾಷಣೆಕಾರ ಗೀತಪ್ರಿಯ ಕನ್ನಡ, ತುಳು ಮತ್ತು ಹಿಂದಿ ಸೇರಿದಂತೆ 28 ಚಿತ್ರಗಳನ್ನು ನಿರ್ದೇಶಿಸಿದ್ದರು.
1955ರಲ್ಲಿ ಸ್ನೇಹಿತ ವಿಜಯಭಾಸ್ಕರ್ ಮೂಲಕ ಸಾಹಿತ್ಯ ಬರೆಯಲು ಆರಂಭಿಸಿದ ಗೀತಪ್ರಿಯ, 1968ರಲ್ಲಿ ಬಿಡುಗಡೆಯಾದ ಡಾ. ರಾಜ್ ಅಭಿನಯದ ಮಣ್ಣಿನಮಗ ಚಿತ್ರದ ಮೂಲಕ ನಿರ್ದೇಶಕರಾದರು.
ಮಣ್ಣಿನಮಗ ಚಿತ್ರದ 'ಇದೇನು ಸಭ್ಯತೆ, ಇದೇನು ಸಂಸ್ಕೃತಿ' ಎನ್ನುವ ಹಾಡು ಭಾರೀ ಜನಪ್ರಿಯ ಪಡೆದಿತ್ತು. ಮಣ್ಣಿನಮಗ, ಬೆಸುಗೆ, ಹೊಂಬಿಸಿಲು ಸೇರಿದಂತೆ ಐವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಗೀತಪ್ರಿಯ ಸಾಹಿತ್ಯ ಬರೆದಿದ್ದಾರೆ.
ಬೆಟ್ಟದಹುಲಿ, ಒಂದೇ ಬಳ್ಳಿಯ ಹೂವುಗಳು, ಹೊಂಬಿಸಲು, ಪುಟಾಣಿ ಏಜೆಂಟ್ 123, ಭಾಗ್ಯಚಕ್ರ, ಬೆಟ್ಟದಹುಲಿ, ಬೆಸುಗೆ, ಶ್ರಾವಣ ಸಂಭ್ರಮ ಮುಂತಾದವು ಗೀತಪ್ರಿಯ ನೀಡಿದ ಹಿಟ್ ಚಿತ್ರಗಳಲ್ಲಿರುವ ಪಟ್ಟಿಯಲ್ಲಿ ಇರುವಂತದ್ದು.
ಪುಟ್ಟಣ್ಣ ಕಣಗಾಲ್, ರಾಜ್ಯ ಸರಕಾರದ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೀತಪ್ರಿಯ ಪಡೆದಿದ್ದಾರೆ. ಇವರ ಚೊಚ್ಚಲ ನಿರ್ದೇಶನದ ಮಣ್ಣಿನಮಗ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿತ್ತು.


Click it and Unblock the Notifications











