ಶಂಕರ್ ನಾಗ್ ಸವಿಸವಿ ನೆನಪಿನ 'ಒಗ್ಗರಣೆ ಶಂಕರ' ಆರಂಭ
ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ, ಅಪ್ರತಿಮ ಕನಸುಗಾರ ಶಂಕರ್ ನಾಗ್ ಹೆಸರು ಕೇಳಿದರೆ ಸಾಕು ಚಿತ್ರರಸಿಕರ ರೋಮಗಳು ನೆಟ್ಟಗೆ ನಿಲ್ಲುತ್ತವೆ. ಅವರ ಬಗ್ಗೆ ಮಾತು, ಚರ್ಚೆ ಆರಂಭವಾದರೆ ಮುಗಿಸುವುದು ಕಷ್ಟ. ಶಂಕ್ರಣ್ಣನ ಚಿತ್ರಗಳು, ಪಾತ್ರಗಳನ್ನು ಮೆಲುಕು ಹಾಕುತ್ತಿದ್ದರೆ ಸಮಯ ಸರಿದದ್ದೇ ಗೊತ್ತಾಗುವುದಿಲ್ಲ.
ಶಂಕ್ರಣ್ಣನ ಬಗ್ಗೆ ಗಂಟೆಗಟ್ಟಲೆ ಮಾತು, ಚರ್ಚೆ ಆಡುತ್ತಾ ಜೊತೆಗೆ ಕಾಫಿ, ತಿಂಡಿ ಸವಿಯುವ ಸ್ಥಳ ಯಾವುದಾದರೂ ಇದೆಯೇ ಎಂದು ಅಭಿಮಾನಿಗಳು ಹಂಬಲಿಸುತ್ತಿದ್ದರು. ಅವರ ಬಯಕೆ ಇದೀಗ ಈಡೇರಿದೆ. ಶಂಕರ್ ನಾಗ್ ಹೆಸರಿನ ಹೋಟೆಲ್ ಆರಂಭವಾಗಿದೆ.
ಬೆಂಗಳೂರಿನ ಬಸವೇಶ್ವರನಗರದಲ್ಲಿ 'ಒಗ್ಗರಣೆ ಶಂಕರ' ಎಂಬ ಹೋಟೆಲ್ ಆರಂಭವಾಗಿದೆ. ರೇಡಿಯೋ ಜಾಕಿ ಅವಿನಾಶ್ ಭಾರದ್ವಾಜ್ ಅವರು ಈ ಹೋಟೆಲನ್ನು ಉದ್ಘಾಟಿಸಿದರು. ಈ ಹೋಟೆಲ್ ನಲ್ಲಿ ಶಂಕರ್ ನಾಗ್ ಅವರಿಗೆ ಸಂಬಂಧಿಸಿದ ಮಾಹಿತಿ, ಚಿತ್ರಗಳು ಲಭ್ಯ. [ಚಿತ್ರ ಕೃಪೆ: ಅವಿನಾಶ್ ಭಾರದ್ವಾಜ್]

ಶಂಕರ್ ನಾಗ್ ಅವರ ಮೂಲ ಹೆಸರು ಅವಿನಾಶ್
ಶಂಕರ್ ನಾಗ್ ಅವರ ಮೂಲ ಹೆಸರು ಅವಿನಾಶ್ ಎಂಬುದು ಗೊತ್ತಾಗಿದ್ದೇ ಇಲ್ಲಿ ಉದ್ಘಾಟನೆಗೆ ಬಂದ ಬಳಿಕ ಎನ್ನುತ್ತಾರೆ ಅವಿನಾಶ್ ಭಾರದ್ವಾಜ್.

ಶಂಕ್ರಣ್ಣನ ಸ್ಮರಣಾರ್ಥ ಹೋಟೆಲ್ ಆರಂಭ
ಶಂಕರ್ ನಾಗ್ ಅವರ ಸ್ಮರಣಾರ್ಥ ಈ ಹೋಟೆಲ್ ಆರಂಭಿಸಲಾಗಿದೆ. ಈ ಮೂಲಕ ಶಂಕ್ರಣ್ಣನ ಪ್ರೀತಿಗೆ ತಮ್ಮದೂ ಒಂದು ಕಿರು ಕಾಣಿಕೆ ಇರಲಿ ಎಂಬುದು ಹೋಟೆಲ್ ಮಾಲೀಕರ ಅಭಿಮತ.

ಅಭಿಮಾನಿಗಳ ಪತ್ರಕ್ಕೆ ಕಾರಿನಲ್ಲೇ ಉತ್ತರ
ಶಂಕರ್ ದಿನಕ್ಕೆ 3 ರಿಂದ 4 ಗಂಟೆ ಮಾತ್ರ ನಿದ್ರಿಸುತ್ತಿದ್ದರು. ಅಭಿಮಾನಿಗಳ ಪತ್ರಕ್ಕೆ ಕಾರಿನಲ್ಲಿ ಪ್ರಯಾಣಿಸುವಾಗ ಉತ್ತರಿಸುತ್ತಿದ್ದರು. ಕಾಸ್ಟ್ಯೂಮರ್ ನಿಂದ ಶೂ ಹಾಕಿಸಿಕೊಳ್ಳುತ್ತಿರಲಿಲ್ಲ. ಸಮಯದ ಉಳಿತಾಯಕ್ಕೆ ಬಟ್ಟೆ ಬದಲಾಯಿಸಲು ಗ್ರೀನ್ ರೂಂ ಗೆ ಹೋಗತ್ತಿರಲಿಲ್ಲ. ಅವರ ಒಡನಾಡಿಗಳು ಇವೆಲ್ಲವನ್ನೂ ಹೇಳುತ್ತಾರೆ.

ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ಕಲ್ಪಿಸಿದವರು
ಸದಾ ಕ್ರಿಯಾಶೀಲರಾಗಿದ್ದ ಶಂಕರ್ ನಾಗ್ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ಕಲ್ಪಿಸಿದವರು. ಕಿರುತೆರೆಯಲ್ಲೂ ಹೊಸ ಹೊಸ ಪ್ರಯೋಗಗಳನ್ನು ಮಾಡಿದವರು. ಮುಖ್ಯವಾಗಿ ಯುವ ನಿರ್ದೇಶಕರು, ಕಲಾವಿದರಿಗೆ ಸ್ಫೂರ್ತಿಯಾಗಿದ್ದವರು. ಕನ್ನಡ ಚಿತ್ರೋದ್ಯಮದ ಬಗ್ಗೆ ಶಂಕರಣ್ಣನಂತೆ ವಿಭಿನ್ನವಾಗಿ ಆಲೋಚಿಸಿದವರು ಕಡಿಮೆ.

ಆಟೋ ಡ್ರೈವರುಗಳ ಆರಾಧ್ಯದೈವ
ಬೆಂಗಳೂರಿನ ಆಟೋಗಳಿಗೂ ಶಂಕರ್ ನಾಗ್ ಅವರಿಗೂ ಬಿಡಿಸಲಾರದ ನಂಟು. 'ಆಟೋರಾಜ' ಚಿತ್ರದಲ್ಲಿ ನಾಯಕನ ವಿಶಿಷ್ಟ ಗುಣ ಮೆರೆದು, ಎಂದೆಂದಿಗೂ ಆಟೋ ಡ್ರೈವರುಗಳ ಆರಾಧ್ಯದೈವವಾದರು. ಅವರ ಹೃದಯ ಸಿಂಹಾಸನದಲ್ಲಿ ಭದ್ರವಾದ ಸ್ಥಾನವನ್ನೂ ಪಡೆದರು.


Click it and Unblock the Notifications











