ಹುಚ್ಚ 2 ನಾಯಕಿ ಶ್ರಾವ್ಯಾಗೆ ಹೀರೋ ಸಿಕ್ಕಿದ ಕಣ್ರಿ!
ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ಎನ್ ಓಂ ಪ್ರಕಾಶ್ ರಾವ್ ಅವರ ತಮ್ಮ ಮಗಳು ಶ್ರಾವ್ಯಾ ಅವರನ್ನು ನಾಯಕಿಯನ್ನಾಗಿ ಹುಚ್ಚ 2 ಚಿತ್ರ ನಿರ್ದೇಶಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಚಿತ್ರದ ನಾಯಕ ಯಾರು? ಎಂಬ ಕುತೂಹಲಕ್ಕೆ ಸದ್ಯಕ್ಕೆ ತೆರೆ ಬಿದ್ದಿದೆ. ಮದರಂಗಿ ಚಿತ್ರ ಖ್ಯಾತಿಯ ಕೃಷ್ಣ ಈಗ 'ಹುಚ್ಚ' ನಾಗಿ ಕಾಣಿಸಿಕೊಳ್ಳಲಿದ್ದಾರೆ.
ಲೂಸುಗಳು' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟ ಮುದ್ದು ಮುಖದ ಬೆಡಗಿ ಶ್ರಾವ್ಯಾ ಅವರು ಈ ಹಿಂದೆ ತಮ್ಮ ಅಪ್ಪನ ನಿರ್ದೇಶನದ 'ಕಟ್ಟೆ' ಚಿತ್ರದಲ್ಲೂ ನಟಿಸಿದ್ದನ್ನು ಮರೆಯುವಂತಿಲ್ಲ. ರೇಖಾದಾಸ್ ಅವರ ಪ್ರೀತಿಯ ಮಗಳು ಶ್ರಾವ್ಯಾ ಅವರು ರೋಜ್ ಚಿತ್ರದ ನಂತರ'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರಕ್ಕೆ ಕೆಲಸ ಮಾಡಿರುವ ಹರೀಶ್ ನಿರ್ದೇಶನದ 'ಬಜಾರ್', ಸಂತೋಷ ನಿರ್ದೇಶನದ 'ದಾದಾ ಇಸ್ ಬ್ಯಾಕ್' ಚಿತ್ರಗಳ ಜೊತೆಗೆ ಹುಚ್ಚ 2 ನಲ್ಲೂ ನಟಿಸುತ್ತಿದ್ದಾರೆ. [ಎರಡನೇ ಇನ್ನಿಂಗ್ಸ್ ಆರಂಭಿಸಿದ ಶ್ರಾವ್ಯಾ]

ಹೊಸ ನಾಯಕ: ಹುಚ್ಚ 2 ಚಿತ್ರಕ್ಕೆ ಡೈರೆಕ್ಟರ್ ಸ್ಪೆಷಲ್ ಚಿತ್ರ ಖ್ಯಾತಿಯ ಧನಂಜಯ್ ಅವರು ಹೀರೋ ಆಗಬೇಕಿತ್ತು. ಅದರೆ, 'ರಾಟೆ', 'ಬಾಕ್ಸರ್' ಹಾಗೂ ಅಲ್ಲಮ ಚಿತ್ರಗಳಲ್ಲಿ ನಿರತರಾಗಿರುವುದರಿಂದ ಹುಚ್ಚ 2 ಚಿತ್ರಕ್ಕೆ ಸಹಿ ಹಾಕಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಅದರೆ, ಹುಚ್ಚ 2ಗಾಗಿ ಫೋಟೋ ಶೂಟ್ ನಡೆಸಿದ್ದ ಧನಂಜಯ್ ಅವರು ಚಿತ್ರದಿಂದ ಹೊರನಡೆದಿದ್ದು ಏಕೆ ಎಂಬುದು ಗಾಂಧಿನಗರದವರೇ ಹೇಳಬೇಕು.
ಸದ್ಯಕ್ಕೆ ಈ ಜಾಗಕ್ಕೆ ಮದರಂಗಿ ಚಿತ್ರ ಖ್ಯಾತಿಯ ಕೃಷ್ಣ ಬಂದಿದ್ದಾರೆ. ಕೃಷ್ಣ ಕೂಡಾ ಕನ್ನಡ ಚಿತ್ರರಂಗದಲ್ಲಿ ಈಗ ಬಹುಬೇಡಿಕೆಯ ನಟ. 'ಮುಂಬೈ', 'ಚಾರ್ಲಿ', 'ಜಾಲಿ ಬಾರು ಪೋಲಿ ಗೆಳೆಯರು', ಚಿನ್ನ ಚಿನ್ನ ಆಸೆ ಮುಂತಾದ ಚಿತ್ರಗಳ ನಂತರ ಹುಚ್ಚ 2 ಚಿತ್ರಕ್ಕೆ ಕೃಷ್ಣ ಸಹಿ ಹಾಕಿದ್ದಾರೆ. ಹುಚ್ಚ 2 ಪಾತ್ರಧಾರಿಯಾಗಿ ಕೃಷ್ಣ ಏನು ಮೋಡಿ ಮಾಡುತ್ತಾರೋ ಕಾದು ನೋಡಬೇಕಿದೆ. ['ಐರಾವತ' ಅರ್ಜುನ್ ಗೆ ಅಮಲು ನೆತ್ತಿಗೇರ್ತಾ?]
ಅಂದ ಹಾಗೆ ಹುಚ್ಚ 2 ಚಿತ್ರ ಕಿಚ್ಚ ಸುದೀಪ್ ಅಭಿನಯದ ಹುಚ್ಚ ಚಿತ್ರದ ಮುಂದುವರೆದ ಭಾಗವಲ್ಲ ಅಥವಾ ಆ ಚಿತ್ರದ ಕಥೆಯನ್ನೂ ಹೊಂದಿಲ್ಲ, ತಮಿಳಿನಲ್ಲಿ ಜೀವಾ ನಟಿಸಿರುವ 'ರಾಮ್' ಚಿತ್ರದ ಕಥೆಯನ್ನು ಕಣ್ಣಿಗೆ ಒತ್ತಿಕೊಂಡು ಭಟ್ಟಿ ಇಳಿಸುತ್ತಿದ್ದಾರೆ ದಿವಂಗತ ನಟ ಎನ್ ಎಸ್ ರಾವ್ ಅವರ ಸುಪುತ್ರ ಓಂ ಪ್ರಕಾಶ್ ರಾವ್.


Click it and Unblock the Notifications











