ಚಿರಂಜೀವಿ ಸರ್ಜಾ ಅಗಲಿ ಒಂದು ತಿಂಗಳು: ನಗುಮೊಗದ ಚಿರುವನ್ನು ಆಪ್ತರು ಸ್ಮರಿಸಿದ್ದು ಹೀಗೆ...
ಚಿರಂಜೀವಿ ಸರ್ಜಾ ಎಂಬ ನಗುಮೊಗದ ನಟ ನಮ್ಮನ್ನು ಅಗಲಿ ಇಂದಿಗೆ ಒಂದು ತಿಂಗಳು. ಜೂನ್ 7ರ ಮಧ್ಯಾಹ್ನ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಸಾವು ಎಂಬ ಸುದ್ದಿ ಮೊದಲೇ ನೋವಿನಲ್ಲಿದ್ದ ಜನರಿಗೆ ಬರಸಿಡಿಲಿನಂತೆ ಅಪ್ಪಳಿಸಿತ್ತು. ಚಿಕ್ಕವಯಸ್ಸಿನಲ್ಲಿಯೇ ಹಠಾತ್ತಾಗಿ ಕಣ್ಮರೆಯಾದ ಚಿರಂಜೀವಿ ಅವರನ್ನು ಕಳೆದುಕೊಂಡ ದುಃಖ ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಲ್ಲಿ ಗಾಢವಾಗಿದೆ.
Recommended Video
ಚಿರಂಜೀವಿ ಸರ್ಜಾ ನಿಧನರಾಗಿ ಒಂದು ತಿಂಗಳು ಕಳೆದ ಸಂದರ್ಭದಲ್ಲಿ ಅವರ ಮನೆಯವರು, ಸ್ನೇಹಿತರು, ಆಪ್ತರು ಅವರನ್ನು ವಿಶೇಷವಾಗಿ ಸ್ಮರಿಸಿಕೊಳ್ಳುವ ಮೂಲಕ ಅಗಲಿದ ಚೇತನಕ್ಕೆ ವಿಶಿಷ್ಟವಾಗಿ ವಂದನೆ ಸಲ್ಲಿಸಿದ್ದಾರೆ. ನಗುಮೊಗದ ಯುವ ಪ್ರತಿಭೆ ಚಿರು, ತಮ್ಮ ಹೆಸರಿನಂತೆ ಚಿರಂಜೀವಿ ಆಗಿ ಉಳಿಯಲಿಲ್ಲ. ಆದರೆ ಅವರ ನಗುವನ್ನು ಚಿರಾಯುವಾಗಿಡಲು ಮನೆಯವರು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಸಾಕ್ಷಿಯೆಂಬಂತೆ ಇರುವುದು ಚಿರು ಚಿತ್ರದ ಮುಂದೆ ತೆಗೆಸಿಕೊಂಡಿರುವ ಫೋಟೊಗಳು... ಮುಂದೆ ಓದಿ...

ಚಿರುವಿಗೆ ನಗುವಿನ ಗೌರವ
ಚಿರಂಜೀವಿ ಸರ್ಜಾ ಮೃತಪಟ್ಟು ಒಂದು ತಿಂಗಳು ಕಳೆದ ಸಂದರ್ಭದಲ್ಲಿ ಅವರ ಆಪ್ತರು, ಮನೆಯವರೆಲ್ಲರೂ ಒಂದುಗೂಡಿದ್ದಾರೆ. ಚಿರಂಜೀವಿ ಅವರ ಚೆಂದ ಫೋಟೊವನ್ನು ಅಲಂಕರಿಸಿದ್ದಾರೆ. ಅದರ ಮುಂದೆ ಮನೆಯವರೆಲ್ಲ ಕುಳಿತು ನಗುತ್ತಾ ಫೋಟೊ ತೆಗೆಸಿಕೊಂಡಿದ್ದಾರೆ. ಚಿರಂಜೀವಿ ಅವರ ಸ್ನೇಹಿತರು, ಕುಟುಂಬದವರು, ಪ್ರತ್ಯೇಕವಾಗಿ ಮತ್ತು ಗುಂಪಿನಲ್ಲಿ ಫೋಟೊಕ್ಕೆ ಸೆರೆಯಾಗಿದ್ದಾರೆ. ಪ್ರತಿಯೊಬ್ಬರ ಮುಖದಲ್ಲಿಯೂ ನಗು ಇರುವುದು ಅವರಿಗೆ ನಗುವಿನ ಗೌರವ ಸಲ್ಲಿಸಿರುವುದನ್ನು ತೋರಿಸುತ್ತದೆ.

ಹೇಳಲು ಏನೂ ಉಳಿದಿಲ್ಲ...
ಈ ಫೋಟೊಗಳನ್ನು ಹಂಚಿಕೊಂಡಿರುವ ಚಿರಂಜೀವಿ ಅವರ ಆಪ್ತ ಸ್ನೇಹಿತ, ನಿರ್ದೇಶಕ ಪನ್ನಗಾಭರಣ ಭಾವುಕ ಬರಹವೊಂದನ್ನು ಹಂಚಿಕೊಂಡಿದ್ದಾರೆ. 'ಒಂದು ತಿಂಗಳು ಕಳೆಯಿತು... ಹೇಳಲು ಏನೂ ಉಳಿದಿಲ್ಲ.. ಆದರೆ ಕಣ್ಣೀರು...' ಎಂದು ಪನ್ನಗಾಭರಣ ಬರಹ ಆರಂಭಿಸಿದ್ದಾರೆ.

ಚಿರು ಹೇಳುತ್ತಿದ್ದ ಮಾತುಗಳು
'ಇನ್ನು ಕಣ್ಣೀರು ಬೇಡ ಎಂದು ನಾವು ನಿರ್ಧರಿಸಿದೆವು. ಕೇವಲ ಉತ್ಸಾಹವಷ್ಟೇ.. ಆತ ಯಾವಾಗಲೂ ಹೇಳುತ್ತಿದ್ದ- ಜೀವನ ಬಹಳ ಚಿಕ್ಕದು ಗೆಳೆಯಾ, ಯಾವಾಗಲೂ ಖುಷಿಯಾಗಿರು..' ಎಂದು ಪನ್ನಗ, ಸ್ನೇಹಿತ ಹೇಳುತ್ತಿದ್ದ ಮಾತನ್ನು ಸ್ಮರಿಸಿಕೊಂಡಿದ್ದಾರೆ.

ಚಿರುವನ್ನು ಪ್ರತಿಕ್ಷಣ ಸಂಭ್ರಮಿಸುತ್ತೇವೆ
'ನಾವು ಇಲ್ಲಿ ಚಿರುವನ್ನು ಸಂಭ್ರಮಿಸುತ್ತಿದ್ದೇವೆಯೇ ಹೊರತು ಅವನಿಗಾಗಿ ಶೋಕಿಸುವುದಿಲ್ಲ. ಅವನೊಂದು ಕುಟುಂಬ ಮತ್ತು ಆತನಿಗೆ ಅದೇ ಮುಖ್ಯವಾಗಿತ್ತು, ಹಾಗೆಯೇ ನಮಗೆ ಆತ ಮುಖ್ಯವಾಗಿದ್ದ... ನಾವು ಆತ ಯಾವಾಗಲೂ ಜೀವಿಸಲು ಬಯಸಿದ್ದ ಬದುಕನ್ನು ಸಾಗಿಸಲು ಆತನನ್ನು ಪ್ರತಿ ವರ್ಷ, ಪ್ರತಿ ತಿಂಗಳು, ಪ್ರತಿ ದಿನ ಮತ್ತು ಪ್ರತಿ ಕ್ಷಣ ಸಂಭ್ರಮಿಸುತ್ತೇವೆ' ಎಂದು ತಿಳಿಸಿದ್ದಾರೆ.

ದ್ವೇಷಿಸಲು ಜೀವನ ತೀರಾ ಚಿಕ್ಕದು
'ಅದೇ ಪ್ರೀತಿ (ಪ್ರೀತಿ ಹಂಚೋಣ ಮತ್ತು ಒಬ್ಬರನ್ನೊಬ್ಬರು ಗೌರವಿಸೋಣ). ದ್ವೇಷಿಸಲು ಜೀವನ ತೀರಾ ಚಿಕ್ಕದು. ಪ್ರತಿಯೊಬ್ಬರ ಮುಖದಲ್ಲಿಯೂ ನಗು ಮೂಡಿಸಿ, ನಮ್ಮ ಹಾವಭಾವಗಳ ಮೂಲಕ ಆತನನ್ನು ಅನುಭವಿಸಲು ನಾವು ಮುಂದಾಗುತ್ತಿದ್ದೇವೆ. ಎಂದಿಗೂ ನಿನ್ನನ್ನು ಪ್ರೀತಿಸುತ್ತೇನೆ ಮಚ್ಚಾ... ನಿನಗೆ ಶಾಂತಿ ಸಿಗಲಿ' ಎಂದು ಪನ್ನಗ ಬರೆದಿದ್ದಾರೆ.

ಮೇಘನಾ ರಾಜ್
ಈ ಫೋಟೊಗಳಲ್ಲಿ ಪ್ರಜ್ವಲ್ ದೇವರಾಜ್ ಒಳಗೊಂಡಂತೆ ಚಿರು ಅವರ ಅನೇಕ ಆಪ್ತರಿದ್ದಾರೆ. ಆದರೆ ಧ್ರುವ ಸರ್ಜಾ, ಅವರ ತಂದೆ ತಾಯಿ, ಸುಂದರ್ ರಾಜ್, ಪ್ರಮೀಳಾ ಜೋಷಾಯಿ ಸೇರಿದಂತೆ ಕುಟುಂಬದ ಅನೇಕರು ಇಲ್ಲ. ಅವರಿಗೆ ತುಂಬಾ ಹತ್ತಿರವಾಗಿದ್ದ ಕೆಲವರು ಚಿರುಗೆ ನಗುವಿನ ಗೌರವ ಅರ್ಪಿಸಿದ್ದಾರೆ. ಮೇಘನಾ ರಾಜ್ ಕೂಡ ಫೋಟೊದಲ್ಲಿ ಕಾಣಿಸಿಕೊಂಡಿದ್ದು, ಅವರ ನಗು ಮನಸಿಗೆ ಗಾಢವಾಗಿ ತಟ್ಟುತ್ತದೆ. ಮೇಘನಾ ಅವರನ್ನು ಕಂಡು ಸಮಾಧಾನವಾಗುತ್ತಿದೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.


Click it and Unblock the Notifications











