ಇನ್ಮೇಲೆ ಗಲಾಟೆ ಮಾಡಲ್ಲ, ದಯವಿಟ್ಟು ಅವಕಾಶ ಕೊಡಿ ಎಂದು ಅಂಗಲಾಚಿದ ಹುಚ್ಚ ವೆಂಕಟ್.!
ಬಾಯಿ ಬಿಟ್ಟರೆ ಸಾಕು.. ''ನನ್ ಮಗಂದ್.. ನನ್ ಎಕ್ಕಡ'' ಎನ್ನುತ್ತಿದ್ದ ಹುಚ್ಚ ವೆಂಕಟ್ ಗೆ ಈಗ ಜ್ಞಾನೋದಯ ಆದ ಹಾಗೆ ಕಾಣುತ್ತಿದೆ. ಇಷ್ಟು ದಿನ ಹಾದಿ ಬೀದಿಯಲ್ಲಿ ರಂಪ-ರಾಮಾಯಣ ಮಾಡಿಕೊಂಡು ತಿರುಗುತ್ತಿದ್ದ ಹುಚ್ಚ ವೆಂಕಟ್ ಇದೀಗ ಅವಕಾಶಗಳಿಗಾಗಿ ಅಂಗಲಾಚುತ್ತಿದ್ದಾರೆ.
ದಿಢೀರ್ ಅಂತ ಪ್ರೆಸ್ ಮೀಟ್ ಕರೆದ ಹುಚ್ಚ ವೆಂಕಟ್, ಮಾಧ್ಯಮ ಮತ್ತು ಪತ್ರಿಕಾ ಮಿತ್ರರ ಮುಂದೆ ''ಇನ್ಮೇಲೆ ಗಲಾಟೆ ಮಾಡಲ್ಲ. ಜನರನ್ನು ನಾನು ನಗಿಸುತ್ತೇನೆ. ಯಾವುದಾದರೂ ಅವಕಾಶ ಇದ್ದರೆ ಹೇಳಿ'' ಎಂದು ಅಂಗಲಾಚಿದ್ದಾರೆ.
ಸಾಲದಕ್ಕೆ, ಮತ್ತೊಂದು ಬಾರಿಗೆ 'ಬಿಗ್ ಬಾಸ್' ಮನೆಗೆ ಹೋಗುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ. 'ಬಿಗ್ ಬಾಸ್ ಕನ್ನಡ-3' ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ಹುಚ್ಚ ವೆಂಕಟ್, ಗಾಯಕ ರವಿ ಮುರೂರು ಮೇಲೆ ಹಲ್ಲೆ ಮಾಡಿ ಗೇಟ್ ಪಾಸ್ ಪಡೆದಿದ್ದರು. ಇನ್ನೂ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಹೋಗಿದ್ದ ಹುಚ್ಚ ವೆಂಕಟ್, ಪ್ರಥಮ್ ಗೆ ಹೊಡೆದಿದ್ದರು.
'ಬಿಗ್ ಬಾಸ್' ಮನೆಯೊಳಗೆ ಎರಡೆರಡು ಬಾರಿ ಕೈ ಮಾಡಿ, ಹುಚ್ಚಾಟ ಪ್ರದರ್ಶಿಸಿರುವ ಹುಚ್ಚ ವೆಂಕಟ್ ಇದೀಗ ಮತ್ತೆ 'ದೊಡ್ಮನೆ'ಯೊಳಗೆ ಹೋಗುವ ಅಸೆ ಇದೆ ಎಂದಿದ್ದಾರೆ. ಅಸಲಿಗೆ, ಪ್ರೆಸ್ ಮೀಟ್ ನಲ್ಲಿ ಹುಚ್ಚ ವೆಂಕಟ್ ಏನೇನೆಲ್ಲಾ ಹೇಳಿದರು ಅಂತ ಅವರ ಮಾತುಗಳಲ್ಲೇ ಓದಿರಿ...

ಜನ ಹೆದರುತ್ತಿದ್ದಾರೆ
''ವಿವಾದಗಳಾದ ಮೇಲೆ ಜನ ನನ್ನ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೆದರುತ್ತಿದ್ದರು. ''ಗಲಾಟೆ ಮಾಡುತ್ತಾನೆ, ಹೊಡೆಯುತ್ತಾನೆ, ಬೈಯ್ಯುತ್ತಾನೆ'' ಅಂತ ನನ್ನ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದರು. ಇದರಿಂದ ನನಗೆ ಬೇಜಾರಾಗಿದೆ. ಮನಸ್ಸಿಗೆ ನೋವಾಗಿದೆ'' ಎಂದು ಪ್ರೆಸ್ ಮೀಟ್ ನಲ್ಲಿ ಹುಚ್ಚ ವೆಂಕಟ್ ಹೇಳಿದ್ದಾರೆ.

ಸುಮ್ನೆ ಗಲಾಟೆ ಮಾಡಿಲ್ಲ.!
''ಕಾರಣ ಇಲ್ಲದೆ ಸುಮ್ ಸುಮ್ನೆ ನಾನು ಗಲಾಟೆ ಮಾಡಲ್ಲ. ಕೆಟ್ಟವರಿಗೆ ಮಾತ್ರ ನಾನು ಕೆಟ್ಟವನು, ಒಳ್ಳೆಯವರಿಗೆ ನಾನು ಒಳ್ಳೆಯವನು. ನಾನು ದಿನವೂ ಜಗಳ ಮಾಡಲ್ಲ. ನಾನು ಕೋಪವನ್ನ ತಡೆಯಲು ಆಗಲ್ಲ. ಗಲಾಟೆ ಆಗಿದ್ದೆಲ್ಲ ಆಕಸ್ಮಿಕ. ಅದನ್ನೆಲ್ಲ ಜನ ಮರೆತು ಜಾಸ್ತಿ ಪ್ರೀತಿಸಬೇಕು'' ಎಂದು ಕೇಳಿಕೊಂಡಿದ್ದಾರೆ ಹುಚ್ಚ ವೆಂಕಟ್.

ಬಿಗ್ ಬಾಸ್ ಗೆ ಹೋಗಬೇಕಂತೆ.!
''ಬಿಗ್ ಬಾಸ್ ಗೆ ಹೋಗುವ ಆಸೆ ಇಟ್ಟುಕೊಂಡಿದ್ದೇನೆ. ಫಿನಾಲೆಗೆ ಕರೆದರೆ ಹೋಗುತ್ತೇನೆ. ಗಲಾಟೆ ಮಾಡುವ ಉದ್ದೇಶ ನನಗಿಲ್ಲ. ಅಪ್ಪನ ದುಡ್ಡು ಹಾಳು ಮಾಡಿದ್ದೇನೆ. ಇನ್ಮೇಲೆ ಸಂಪಾದನೆ ಮಾಡುತ್ತೇನೆ'' ಎಂದು ಇದೇ ಸಮಯದಲ್ಲಿ ಹುಚ್ಚ ವೆಂಕಟ್ ಹೇಳಿದ್ದಾರೆ.

ಯಾವುದಾದರೂ ಅವಕಾಶ ಇದ್ದರೆ ಹೇಳಿ..
''ನನ್ನ ಹತ್ತಿರ ಹೇಗೆ ಮಾತನಾಡಬೇಕು ಅಂತ ಜನ ಯೋಚಿಸುತ್ತಿದ್ದಾರೆ. ದಯವಿಟ್ಟು ಅದನ್ನೆಲ್ಲ ಮನಸ್ಸಿನಿಂದ ತೆಗೆದು ಹಾಕಿ. 'ಯಾನಾ', 'ಮಾಯಾ ಬಜಾರ್' ಚಿತ್ರಗಳಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದೇನೆ. ರಿಯಾಲಿಟಿ ಶೋಗಳಲ್ಲಿ ಆಂಕರ್ ಅಥವಾ ಜಡ್ಜ್ ಆಗಿ ಹೋಗಲು ಇಷ್ಟ ಪಡುತ್ತೇನೆ. ನನ್ನನ್ನ ಇಷ್ಟು ವರ್ಷ ಪ್ರೀತಿಸಿದ್ದೀರಾ. ಜನರನ್ನ ನಗಿಸುತ್ತೇನೆ. ಯಾವುದಾದರೂ ಅವಕಾಶ ಇದ್ದರೆ ಹೇಳಿ..'' ಎಂದು ಮಾಧ್ಯಮ ಮತ್ತು ಪತ್ರಿಕಾ ಮಿತ್ರರನ್ನ ಹುಚ್ಚ ವೆಂಕಟ್ ಕೇಳಿಕೊಂಡಿದ್ದಾರೆ.


Click it and Unblock the Notifications











