ಕಾಲೇಜಿನಲ್ಲಿ ನಟಿ ಶ್ರೀಲೀಲಾ ತಾಯಿ ದಾಂಧಲೆ ಕೇಸ್; ಪೊಲೀಸರು ಹೇಳಿದ್ದೇನು?

ಆನೇಕಲ್ ನಲ್ಲಿರುವ ಅಲಯನ್ಸ್ ಯೂನಿವರ್ಸಿಟಿ ವಿಚಾರವಾಗಿ ಇದೀಗ ನಟಿ ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ಭಾರಿ ವಿವಾದಕ್ಕೀಡಾಗಿದ್ದಾರೆ. ಮಧುಕರ್ ಅಂಗೂರ್ ಹಾಗೂ ಶ್ರೀಲೀಲಾ ತಾಯಿ ಸ್ವರ್ಣಲತಾ ಹಲವಾರು ಬೌನ್ಸರ್ಸ್ ಜತೆ ಸೆಪ್ಟೆಂಬರ್ 10ರಂದು ಅಲಯನ್ಸ್ ಕಾಲೇಜಿಗೆ ನುಗ್ಗಿ ಮುಂದಿನ ಚ್ಯಾನ್ಸಲರ್ ನಾವೇ ಎಂದು ಸಿಬ್ಬಂದಿಗೆ ಗದರಿದ ಘಟನೆ ನಡೆದಿದೆ ಎಂದು ಅಲ್ಲಿನ ಸಿಬ್ಬಂದಿ ನಿವೇದಿತಾ ಜೈನ್ ಎಂಬುವವರು ಆನೇಕಲ್ ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ನು ನಿವೇದಿತಾ ಜೈನ್ ದೂರು ಸಲ್ಲಿಸಿರುವ ಪ್ರಕಾರ ಈ ಘಟನೆ ನಡೆದಿರುವುದರ ಸಾಕ್ಷಿಯಾಗಿ ವಿಡಿಯೋಗಳು ಲಭ್ಯವಾಗಿದ್ದು, ಈ ವಿಡಿಯೋದಲ್ಲಿ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಕಾಲೇಜಿನ ಆವರಣಕ್ಕೆ ಅನುಮತಿಯಿಲ್ಲದೆ ನುಗ್ಗಿ ರಂಪಾಟ ನಡೆಸಿದ ದೃಶ್ಯಗಳು ಸೆರೆಯಾಗಿವೆ. ಇನ್ನು ಸಿಬ್ಬಂದಿಯೋರ್ವರು ಸ್ವರ್ಣಲತಾ ಅವರ ಮೊಬೈಲ್ ಕಿತ್ತುಕೊಳ್ಳಲು ಬಂದಾಗ ತಾಳ್ಮೆ ಕಳೆದುಕೊಂಡ ಸ್ವರ್ಣಲತಾ ಸಿಬ್ಬಂದಿಯ ಕೆನ್ನೆಗೆ ಬಾರಿಸಿದ್ದಾರೆ. ಹೀಗೆ ಇಷ್ಟೆಲ್ಲಾ ದಾಂಧಲೆ ನಡೆದ ಕಾರಣದಿಂದಾಗಿ ದೂರು ದಾಖಲಾಗಿದೆ.
ಇನ್ನು ಈ ದೂರಿನ ವಿಚಾರವಾಗಿ ಮಾತನಾಡಿರುವ ಪೊಲೀಸರು ಅಲಯನ್ಸ್ ಕಾಲೇಜಿನ ರಿಜಿಸ್ಟ್ರಾರ್ ಆದಂಥ ನಿವೇದಿತಾ ಜೈನ್ ಎಂಬುವವರು ತಮಗೆ ದೂರು ನೀಡಿರುವುದಾಗಿ ಖಚಿತಪಡಿಸಿದ್ದಾರೆ. ಸ್ವರ್ಣಲತಾ ಹಾಗೂ ಮಧುಕರ್ ಅಂಗೂರ್ 40ಕ್ಕೂ ಹೆಚ್ಚು ಬೌನ್ಸರ್ ಜತೆಗೆ ಅಕ್ರಮವಾಗಿ ಕಾಲೇಜಿಗೆ ನುಗ್ಗಿ, ಅಡ್ಮಿನ್ ವಿಭಾಗಕ್ಕೆ ತೆರಳಿ ಈ ಕಾಲೇಜು ನಮ್ಮದು ಎಂದು ಧಮ್ಕಿ ಹಾಕಿರುವುದಾಗಿ ದೂರಿನಲ್ಲಿ ನಮೂದಿಸಲಾಗಿದೆ ಹಾಗೂ ಈ ವೇಳೆ ನಾಲ್ಕೈದು ಮಾರಕಾಸ್ತ್ರಗಳು ಸಹ ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪೈಕಿ ಕೆಲವರನ್ನು ಈಗಾಗಲೇ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದೇವೆ ಹಾಗೂ ಶೀಘ್ರದಲ್ಲಿಯೇ ಇದರ ಕುರಿತು ಮತ್ತಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲಿದ್ದೇವೆ ಹಾಗೂ ಘಟನೆ ಹಿಂದಿನ ಸತ್ಯಾಸತ್ಯತೆಯನ್ನು ಹೊರತರಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.


Click it and Unblock the Notifications











